ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ – ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ
ಬಂಟ್ವಾಳ : ಮನುಷ್ಯನಿಗೆ ಆರೋಗ್ಯಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ. ಒಬ್ಬ ವ್ಯಕ್ತಿ ಎಷ್ಟೇ ದೊಡ್ಡ ಶ್ರೀಮಂತನಾಗಿದ್ರು ಅವನ ಅರೋಗ್ಯ ಸರಿ ಇಲ್ಲದಿದ್ರೆ ನೆಮ್ಮದಿ ಇರಲ್ಲ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನಸಾಮಾನ್ಯರ ಅರೋಗ್ಯ ಕಾಪಾಡುವ ದೃಷ್ಟಿಯಿಂದ ಪುಳಿಂಚ ಸೇವಾ ಪ್ರತಿಷ್ಟಾನ ಕಾರ್ಯ ಅಭಿನಂದನೆದಾಯಕವಾಗಿದ್ದು, ದೇವರು ಮೆಚ್ಚುವಂತ ಕಾರ್ಯವಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.
ಅವರು ಸಪ್ಟಂಬರ್ 15ರಂದು ರವಿವಾರ ಪುಳಿಂಚ ಸೇವಾ ಪ್ರತಿಷ್ಠಾನ (ರಿ.) ಮಂಗಳೂರು, ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ (ರಿ.) ಶಂಭೂರು, ಜನಕಲ್ಯಾಣ ಟ್ರಸ್ಟ್ (ರಿ.) ನಾಟಿ ನರಿಕೊಂಬು ಇದರ ಆಶ್ರಯದಲ್ಲಿ ರೋಟರಿ ಕ್ಲಬ್ ಪುತ್ತೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಲಿಟಿ ಕಣ್ಣಿನ ಆಸ್ಪತ್ರೆ ಪುತ್ತೂರು, ಎ.ಜೆ. ಆಸ್ಪತ್ರೆ ಮಂಗಳೂರು, ಸಮುದಾಯ ವಿಭಾಗ ಪಾಣೆಮಂಗಳೂರು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂದತ್ವ ವಿಭಾಗ ಮಂಗಳೂರು, ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ.) ಸೆಂಚುರಿ ಗ್ರೂಪ್ಸ್ ಬೆಂಗಳೂರು ಇವುಗಳ ಸಹಕಾರದೊಂದಿಗೆ ಬಂಟ್ವಾಳ ತಾಲೂಕಿನ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ಶಂಭೂರು ಇಲ್ಲಿ ನಡೆದ ಉಚಿತ ಅರೋಗ್ಯ ಹಾಗೂ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗನ್ನಾಥ್ ಬಂಗೇರ ನಿರ್ಮಲ್ ವಹಿಸಿದ್ದರು. ವೇದಿಕೆಯಲ್ಲಿ ಎ.ಜೆ. ಆಸ್ಪತ್ರೆಯ ಡಾಕ್ಟರ್ ವಾಮನ್ ನಾಯಕ್, ಡಾಕ್ಟರ್ ಹಂಸ. ಪ್ರಸಾದ್, ನೇತ್ರಲಾಯದ ಡಾಕ್ಟರ್ ತನ್ವಿ ಶಂಭೂರು ಸರಕಾರಿ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಹೇಮಚಂದ್ರ ಶಂಭೂರು ಬಂಡಾರದ ಮನೆ, ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ಶಂಭೂರು ಇದರ ಅಧ್ಯಕ್ಷ ಆನಂದ ಅಡ್ಡದಪಾದೆ, ಪುಳಿಂಚ ಸೇವಾ ಪ್ರತಿಷ್ಠಾನದ ಕೋಶಾಧಿಕಾರಿ ಪ್ರತಿಭಾ ಎಮ್. ಎಸ್. ಮೊದಲಾದವರು ಉಪಸ್ಥಿತರಿದ್ದರು.
ಪುಳಿಂಚ ಸೇವಾ ಪ್ರತಿಷ್ಟಾನ (ರಿ.) ಮಂಗಳೂರಿನ ಅಧ್ಯಕ್ಷ ವಕೀಲ ಶ್ರೀಧರ ಶೆಟ್ಟಿ ಪುಳಿಂಚ ಸ್ವಾಗತಿಸಿ, ಕಮಲಾಕ್ಷ ಶಂಬೂರು ವಂದಿಸಿ, ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಾಮಾನ್ಯ ರೋಗ, ಚರ್ಮ ರೋಗ, ಮೂಳೆ ರೋಗ, ಕಣ್ಣು, ಕಿವಿ, ಮೂಗು, ಗಂಟಲು, ಸ್ತ್ರೀ ರೋಗ, ಮಕ್ಕಳ, ದಂತ, ಬಿಪಿ, ಶುಗರ್, ಇಸಿಜಿ, ಮೊದಲಾದ ಉಚಿತ ತಪಾಸಣೆ ಮಾಡಲಾಯಿತು. ನರಿಕೊಂಬು ಶಂಭೂರು ವ್ಯಾಪ್ತಿಯ ಸುಮಾರು 550 ಮಂದಿ ಭಾಗವಹಿಸಿ ವಿವಿಧ ಅರೋಗ್ಯ ತಪಾಸಣೆ ಮಾಡಿಕೊಂಡರು. ಅಗತ್ಯ ಫಲಾನುಭವಿಗಳಿಗೆ ಉಚಿತವಾಗಿ ಔಷಧಿ ನೀಡಲಾಯಿತು. 23 ಮಂದಿ ಕಣ್ಣಿನ ಉಚಿತ ಪೊರೆ ಚಿಕಿತ್ಸೆ ಹಾಗೂ 174 ಮಂದಿ ಉಚಿತ ಕನ್ನಡಕ ಪಡೆಯಲು ಅರ್ಹರಾದರು.
ಪ್ರಸಿದ್ಧ ಯಕ್ಷಗಾನ ಕಲಾವಿದ ಪುಳಿಂಚ ರಾಮಯ್ಯ ಶೆಟ್ಟಿ ಇವರ ನೆನಪಿಗಾಗಿ ಪುಳಿಂಚ ಸೇವಾ ಪ್ರತಿಷ್ಠಾನ (ರಿ.) ಉಚಿತವಾಗಿ ವಿವಿಧ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಗ್ರಾಮೀಣ ಭಾಗದ ಬಡ ಜನರಿಗೋಸ್ಕರ ಹೆಚ್ಚಾಗಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಪುಳಿಂಚ ಜನಸೇವಾ ಪ್ರತಿಷ್ಠಾನದ ಅಧ್ಯಕ್ಷ ವಕೀಲ ಶ್ರೀಧರ್ ಶೆಟ್ಟಿ ಪುಳಿಂಚ ಹೇಳಿದರು.