ಬೆಳ್ತಂಗಡಿ ಧರ್ಮಕ್ಷೇತ್ರದಲ್ಲಿ ಹೊಸವರ್ಷದ ಪ್ರಯುಕ್ತ ಸೌಹಾರ್ದ ಕೂಟ
ಬೆಳ್ತಂಗಡಿ ಧರ್ಮಕ್ಷೇತ್ರದ ನೇತ್ರತ್ವದಲ್ಲಿ ಜನವರಿ 3ರಂದು ಜ್ಞಾನನಿಲಯ ಬೆಳ್ತಂಗಡಿಯಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಗಣ್ಯ ವ್ಯಕ್ತಿಗಳನ್ನು, ವಿವಿಧ ಸಂಘ ಸಂಸ್ಥೆಗಳ ನಾಯಕರುಗಳನ್ನು ಹಾಗೂ ಧರ್ಮಕ್ಷೇತ್ರದ ವಿವಿಧ ಕಾರ್ಯಗಳಿಗೆ ಸಹಕರಿಸುತ್ತಿರುವರನ್ನು ಆಮಂತ್ರಿಸಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಸೌಹಾರ್ದ ಕೂಟವನ್ನು ಏರ್ಪಡಿಸಲಾಗಿತ್ತು.
‘ಸಾಮಾಜಿಕ ಭಾವೈಕ್ಯತೆ ಕಾಪಾಡುವಲ್ಲಿ ನಮ್ಮ ಪಾತ್ರ’ ಎನ್ನುವ ವಿಷಯದ ಕುರಿತು ಮುಖ್ಯ ಸಂದೇಶವನ್ನು ಡಾ. ಟಿ. ಕೃಷ್ಣಮೂರ್ತಿ ರವರು ನೀಡಿದರು. ಕಾರ್ಯಕ್ರಮದ ಆಶಯದ ಕುರಿತು ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಲಾರೆನ್ಸ್ ಮುಕ್ಕುಯಿ ಇವರು ವಿವರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಹೃದಯಪೂರ್ವಕವಾಗಿ ಸ್ವಾಗತಿಸಿದರು.
ಹೊಸವರ್ಷದ ಹಾಗೂ ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಬೆಳ್ತಂಗಡಿ ತಾಲೂಕು ತಹಸೀಲ್ದಾರ್ ಫ್ರಥ್ವಿ ಸಾನಿಕಂ ಇವರ ನೇತ್ರತ್ವದಲ್ಲಿ ತಾಲೂಕಿನ ವಿವಿಧ ಗಣ್ಯ ವ್ಯಕ್ತಿಗಳು ಜೊತೆ ಸೇರಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಬೆಳ್ತಂಗಡಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಸಂಜಾತ್ ಅವರು ವಿತರಿಸಿದರು. ಹೊಸ ವರ್ಷದ ಅದೃಷ್ಟ ವ್ಯಕ್ತಿಯನ್ನು ಚೀಟಿ ತೆಗೆಯುವ ಮೂಲಕ ಆಯ್ಕೆಮಾಡಿ ಬಹುಮಾನವನ್ನು ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾರವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆಗಿರುವ ಪ್ರೀಯ ಅಗ್ನೆಸ್ ಚಾಕೋ, ಬೆಳ್ತಂಗಡಿ ತಾಲೂಕು ಕಾಮಗಾರಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು, ಪಟ್ಟಣ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ನ ವಿವಿಧ ಗಣ್ಯ ವ್ಯಕ್ತಿಗಳು, ಮಾದ್ಯಮ ಮಿತ್ರರು, ಸೌಹಾರ್ದ ವೇದಿಕೆಯ ವಿವಿಧ ಗಣ್ಯ ವ್ಯಕ್ತಿಗಳು, ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಅನೇಕ ವಿಶಿಷ್ಟ ಆಹ್ವಾನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಾರಿಯಂಬಿಕ ಆಂಗ್ಲ ಮಾದ್ಯಮ ಶಾಲೆ ಬಂಗಾಡಿ ಇಲ್ಲಿನ ವಿದ್ಯಾರ್ಥಿನಿಯರು ಸ್ವಾಗತ ನೃತ್ಯವನ್ನು ಮಾಡಿದರು. ಧರ್ಮಕ್ಷೇತ್ರದ ಫ್ಯಾಮಿಲಿ ಅಪೋಸ್ಟೋಲೇಟ್ ಇದರ ನಿರ್ದೇಶಕರಾದ ವಂದನಿಯ ಫಾದರ್ ಥೋಮಸ್ ಪುಲ್ಲಾಟ್ ಇವರು ಪಾರ್ಥನೆಯನ್ನು ನೆರವೇರಿಸಿದರು. ಧರ್ಮಕ್ಷೇತ್ರದ ವಿಕಾರ್ ಜನರಲ್ ಅತೀ ವಂದನಿಯ ಫಾದರ್ ಜೋಸೆಫ್ ವಲಿಯ ಪರಂಬಿಲ್ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಡಿ.ಕೆ.ಆರ್.ಡಿ.ಎಸ್. ನಿರ್ದೇಶಕರಾದ ವಂದನಿಯ ಫಾದರ್ ಬಿನೋಯಿ ಏ.ಜೆ. ಹಾಗೂ ಡಿ.ಕೆ.ಆರ್.ಡಿ.ಎಸ್. ನ ಸಿಬ್ಬಂದಿಯಾದ ಸಿಸಿಲೀಯಾ ಅವರು ನಿರೂಪಿಸಿದರು. ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.