ಯುಇಎ ರಾಜ್ಯ ಸಮಿತಿ ವತಿಯಿಂದ ಸೆಪ್ಟೆಂಬರ್ 12ಕ್ಕೆ ಮಂಗಳೂರಿನಲ್ಲಿ “ಕಮ್ಯೂನಿಟಿ ಯೂತ್ ಲೀಡರ್ಸ್ ಮೀಟ್ 2025”
ಕಲ್ಲಡ್ಕ – ನಂದಾವರದಿಂದ ಉಚಿತ ಬಸ್ ವ್ಯವಸ್ಥೆ
ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಶನ್ (ಯುಇಎ) ರಾಜ್ಯ ಸಮಿತಿ ವತಿಯಿಂದ ಯುವ “ಕಮ್ಯೂನಿಟಿ ಯೂತ್ ಲೀಡರ್ಸ್ ಮೀಟ್ 2025” ಕಾರ್ಯಕ್ರಮ ಸೆಪ್ಟೆಂಬರ್ 12ರಂದು ಸಂಜೆ ಮಂಗಳೂರಿನ ಇಂಡಿಯಾನ ಕನ್ವೆನ್ಷನ್ ಹಾಲ್ನಲ್ಲಿ ನಡೆಯಲಿದೆ ಎಂದು ಯುಇಎ ಬಂಟ್ವಾಳ ವಲಯಾಧ್ಯಕ್ಷ ಲತೀಫ್ ನೇರಳಕಟ್ಟೆ ತಿಳಿಸಿದರು.

ಬಿ.ಸಿ. ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾಯಕತ್ವ, ವೃತ್ತಿ ಮಾರ್ಗದರ್ಶನ ಮತ್ತು ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾದ ಸನ್ಮಾನ್ಯ ಯು.ಟಿ. ಖಾದರ್ ಸೇರಿದಂತೆ ಹಲವಾರು ಸಮುದಾಯದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ (ಯುಇಎ) ಕ್ರೀಡೆಗಳ ಮೂಲಕ ಸಮುದಾಯದ ಸಬಲೀಕರಣ ಮತ್ತು ಅಭಿವೃದ್ಧಿಯತ್ತ ಕೊಂಡುಹೋಗುವ ಸಂಸ್ಥೆಯಾಗಿದೆ. ಎಲ್ಲಾ ವಿಧದ ಕ್ರೀಡಾಪಟುಗಳನ್ನು ಸಿದ್ದಪಡಿಸಿ, ಸ್ಪರ್ಧಾತ್ಮಕ ಮಟ್ಟದಲ್ಲಿ ಭಾಗವಹಿಸಲು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಭಾರತೀಯ ಸೊಸೈಟಿ ಕಾಯ್ದೆಯಡಿ ನೋಂದಾಯಿತವಾದ ಈ ಸಂಸ್ಥೆ ಕರ್ನಾಟಕದಲ್ಲಿ ಕ್ರೀಡಾಪಟುಗಳನ್ನು ಬೆಳೆಸಲು ಶ್ರಮಿಸುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ಪ್ರಮುಖ ಧ್ವನಿಯಾಗಿ ಹೊರಹೊಮ್ಮಲು ಸಂಸ್ಥೆಯು ಬದ್ಧವಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಈಗಾಗಲೇ ಸುಮಾರು 21ವಲಯ ಸಮಿತಿ ರಚಿಸಲಾಗಿದ್ದು 7೦೦೦ ಕ್ಕೂ ಅಧಿಕ ಸದಸ್ಯರೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಕ್ರೀಡಾಪಟುಗಳ ಜೀವನದಲ್ಲಿ ಕಾರ್ಯಬದ್ಧ ಒಕ್ಕೂಟವನ್ನು ನಿರ್ಮಿಸಿ, ಬೆಳೆಸಿ, ಮುನ್ನಡೆಸುವ ಗುರಿ ಇಟ್ಟುಕೊಂಡಿದೆ. ಯುಇಎ ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್, ಚೆಸ್, ಕ್ಯಾರಂ, ಟೇಬಲ್ ಟೆನ್ನಿಸ್, ಖೋ-ಖೋ, ತ್ರೋ ಬಾಲ್, ಕುಸ್ತಿ, ಕರಾಟೆ, ಜುಡೋ, ಓಟ, ಜಂಪಿಂಗ್, ತ್ರೋ ಹಾಗೂ ಸ್ಕೇಟಿಂಗ್ ಮುಂತಾದ ವಿವಿಧ ಕ್ರೀಡಾಪಟುಗಳ ಪುರೋಗತಿಗಾಗಿ ಶ್ರಮಿಸಲಿದೆ ಎಂದು ವಿವರಿಸಿದರು. ಸಮುದಾಯದ ಪ್ರತಿಯೊಬ್ಬರೂ ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭವಿಷ್ಯ ರೂಪಿಸುವ ಶಕ್ತಿ ಹೊಂದಿರುವ ನಮ್ಮ ಯುವಕರನ್ನು ಪ್ರೇರೇಪಿಸಬೇಕು ಎಂದು ವಿವರಿಸಿದ ಅವರು ಕಲ್ಲಡ್ಕ-ಬೋಳಂತೂರು, ಆಲಡ್ಕ ಮತ್ತು ನಂದಾವರ ಭಾಗದಿಂದ ಬರುವವರಿಗೆ ಬಂಟ್ವಾಳ ಝೋನ್ ವತಿಯಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಯ್ಕೆ ಸಮಿತಿ ಸದಸ್ಯರಾದ ವಹಾಬ್ ಯೂನಿಕ್ ಗೂಡಿನಬಳಿ, ರಿಯಾಝ್ ಪಾಣೆಮಂಗಳೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ಇರ್ಶಾದ್ ಗೂಡಿನಬಳಿ. ಜಿ.ಎಂ. ಇಬ್ರಾಹಿಂ ಕುಕ್ಕಾಜೆ ಉಪಸ್ಥಿತರಿದ್ದರು.




