RSS ಚಟುವಟಿಕೆಗಳಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗಿದೆ – ಮಾಜಿ ಸಚಿವ ಬಿ. ರಮಾನಾಥ ರೈ

ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ನಿಲುವು ಜಾತ್ಯತೀತತೆ ಅದಕ್ಕೇ ಜನ ಬೆಂಬಲ
ರಾಜ್ಯದ ಸಚಿವರಾದ ಪ್ರಿಯಾಂಕ ಖರ್ಗೆ RSS ಚಟುವಟಿಕೆಗಳ ಕುರಿತು ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಬಿ. ರಮಾನಾಥ ರೈಯವರು ಹೇಳಿದ್ದಾರೆ. ಅವರು ಇಂದು ಅಕ್ಟೋಬರ್ 16ರಂದು ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ದೇಶದ ಜಾತ್ಯತೀತ ಮೌಲ್ಯಗಳನ್ನು ಕಾಪಾಡಲು ಹಾಗೂ ಸಾಮಾಜಿಕ ಸಾಮರಸ್ಯವನ್ನು ಬಲಪಡಿಸಲು ಸಾರ್ವಜನಿಕ ಸ್ಥಳಗಳು ಮತ್ತು ಸರಕಾರಿ ಶಾಲೆಗಳಲ್ಲಿ RSS ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಶಾಖೆಗಳ ಮೂಲಕ ಸಣ್ಣ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನ ನಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಸಮಾಜದ ಶಾಂತಿ ಹಾಗೂ ಸಹಬಾಳ್ವೆಗೆ ಅಪಾಯಕಾರಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮತೀಯ ಸಾಮರಸ್ಯಕ್ಕೆ ಹಾನಿ ಆಗದಂತೆ ಎಲ್ಲರೂ ಜಾಗೃತರಾಗಬೇಕು. RSS ಸಂಘಟನೆಯಿಂದ ಮತಭೇದ ಹುಟ್ಟಿಸುವ ಕಾರ್ಯಕ್ರಮಗಳು ನಡೆಯುತ್ತಿರುವುದಾಗಿ ಆರೋಪಿಸಿ, “ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ನಿಲುವು ಜಾತ್ಯತೀತವಾದದ್ದು. ಅದಕ್ಕೇ ಜನರು ನಮಗೆ ಬೆಂಬಲಿಸುತ್ತಿದ್ದಾರೆ. RSS ಚಟುವಟಿಕೆಗಳು ಇದರ ವಿರುದ್ಧವಾಗಿವೆ, ಅದನ್ನು ನಾವು ಖಂಡಿಸುತ್ತೇವೆ. ರಾಹುಲ್ ಗಾಂಧಿಯವರ ಮಾತು ಉಲ್ಲೇಖಿಸಿ, “RSSಗೆ ಹೆದರುವವರು ನಮ್ಮ ಪಕ್ಷದಲ್ಲಿರಬಾರದು ಎಂಬ ಅವರ ನಿಲುವು ಸೈದ್ಧಾಂತಿಕವಾಗಿ ಸರಿಯಾಗಿದೆ. ಕಾರ್ಯಕರ್ತರು ಧರ್ಮನಿರಪೇಕ್ಷ ಸಮಾಜ ನಿರ್ಮಾಣದತ್ತ ಶ್ರಮಿಸಬೇಕು. ಸರ್ದಾರ್ ವಲ್ಲಭಭಾಯಿ ಪಟೇಲ್ರವರನ್ನು ಕೇವಲ ಪ್ರಚಾರಕ್ಕಾಗಿ ಬಳಸದೆ, ಅವರ ತೀರ್ಮಾನಗಳ ಆತ್ಮವನ್ನು ಗೌರವಿಸಬೇಕೆಂದು ಒತ್ತಾಯಿಸಿದರು. ಗಾಂಧೀಜಿ ಹತ್ಯೆಯಲ್ಲಿ ಭಾಗಿಯಾದವರ ಕುರಿತು ಎಚ್ಚರದಿಂದ ಇರಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಎಂ.ಜಿ. ಹೆಗ್ಡೆ, ಬೇಬಿ ಕುಂದರ್, ಬಿ.ಎಲ್. ಪದ್ಮನಾಭ ಕೋಟ್ಯಾನ್, ಎಸ್. ಅಪ್ಪಿ, ಚಿತ್ತರಂಜನ್ ಶೆಟ್ಟಿ ಬೊಂಡಲ, ದಿನೇಶ್ ಮುಳೂರು, ಸದಾಶಿವ ಶೆಟ್ಟಿ, ಟಿ.ಕೆ. ಸುಧೀರ್, ಗಿರೀಶ್ ಶೆಟ್ಟಿ, ಪದ್ಮಪ್ರಸಾದ್ ಜೈನ್, ಮಂಜುಳಾ ನಾಯಕ್, ರಮಾನಂದ ಪೂಜಾರಿ, ಸಜೀತ್ ಶೆಟ್ಟಿ ವಾಮಂಜೂರು, ಯೋಗೀಶ್ ಕುಮಾರ್, ಸುನೀಲ್ ಬಜಿಲಕೇರಿ ಮತ್ತಿತರರು ಉಪಸ್ಥಿತರಿದ್ದರು.