ಪುತ್ತೂರಿನಲ್ಲಿ ಟ್ರಾಫಿಕ್ ಪೊಲೀಸರ ಅಮಾನತು

ಪುತ್ತೂರಿನಲ್ಲಿ ನಡೆದ ಘಟನೆಯೊಂದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಇಬ್ಬರು ಸಂಚಾರ ಪೊಲೀಸರು ಕರ್ತವ್ಯದಿಂದ ಅಮಾನತುಗೊಂಡಿದ್ದಾರೆ.
ಮಾಹಿತಿಯ ಪ್ರಕಾರ ನಿನ್ನೆ ಅಕ್ಟೋಬರ್ 17ರಂದು ಶುಕ್ರವಾರ ಸಂಜೆ ವೇಳೆಯಲ್ಲಿ, ಕುರಿಯ ಗ್ರಾಮದ ಆಟೋ ಚಾಲಕ ಬಶೀರ್ ಸಮವಸ್ತ್ರ ಧರಿಸಿಕೊಂಡೇ ಆಟೋ ಚಲಾಯಿಸುತ್ತಿದ್ದರು. ಆ ವೇಳೆ ಪುತ್ತೂರು ಸಂಚಾರ ಠಾಣೆಯ ಎ.ಎಸ್.ಐ. ಚಿದಾನಂದ ರೈ ಮತ್ತು ಸಿಪಿಸಿ 2283 ಶೈಲ ಎಂ.ಕೆ. ಅವರು ಕೈಸನ್ನೆ ಮೂಲಕ ವಾಹನ ನಿಲ್ಲಿಸಲು ಸೂಚಿಸಿದರೂ, ಚಾಲಕ ವಾಹನವನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋದರೆಂದು ತಿಳಿದುಬಂದಿದೆ.
ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಹಿಂಬಾಲಿಸಿ ವಾಹನ ತಡೆದ ವೇಳೆ, ಚಾಲಕನೊಂದಿಗೆ ಅವಾಚ್ಯ ಶಬ್ದ ಬಳಸಿ, ಕೈಯಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಹಿನ್ನೆಲೆಯಲ್ಲಿ, ವಿಚಾರಣೆ ನಡೆಸಿದ ನಂತರ ಸಂಬಂಧಿತ ಇಬ್ಬರು ಅಧಿಕಾರಿಗಳನ್ನು ತಕ್ಷಣವೇ ಕರ್ತವ್ಯದಿಂದ ಅಮಾನತು ಮಾಡಲಾಗಿದೆ.