ಕಿರುಕುಳದ ಬೇಸರದಿಂದ ಹರೀಶ್ ಆತ್ಮಹತ್ಯೆ – ವೆಲ್ಡರ್ ಹೇಮಂತ್ ಆಚಾರ್ಯ ವಿರುದ್ಧ ಪೊಲೀಸ್ ಕ್ರಮ, ಪ್ರಕರಣ ದಾಖಲು
ಪುತ್ತೂರಿನ ಒಂದು ಕಾಂಪ್ಲೆಕ್ಸ್ನಲ್ಲಿ ವಾಹನ ಪೈಟಿಂಗ್ ಕೆಲಸ ಮಾಡುತ್ತಿದ್ದ ಬಂಟ್ವಾಳ ಇಡ್ಕಿದು ನಿವಾಸಿ ಹರೀಶ್ (ಮೃತ) ಅವರಿಗೆ, ಅದೇ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಹೇಮಂತ್ ಆಚಾರ್ಯ ಎಂಬಾತ ಕಳೆದ ಒಂದು ತಿಂಗಳಿನಿಂದ ವಿನಾಕಾರಣ ಬೈಯುತ್ತಾ, ಮಾನಸಿಕ ಕಿರುಕುಳ ನೀಡುತ್ತಿದ್ದಾನೆಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಆರೋಪಿಯು ಹರೀಶ್ ರವರ ಮೇಲೆ ದೌರ್ಜನ್ಯ ನಡೆಸಿ, ತಲ್ವಾರ್ ಹಿಡಿದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಮೃತರ ಮಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕಿರುಕುಳದಿಂದ ಮನನೊಂದು ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮಗಳು ಹೇಳಿಕೆ ನೀಡಿದ್ದಾರೆ.

ಈ ದೂರಿನ ಆಧಾರದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.: 112/2025, ಕಲಂ 108 BNS ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೊದಲಿನಿಂದಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಸ್ವಾಭಾವಿಕ ಮರಣ (UDR) ಪ್ರಕರಣವನ್ನು, ಮಗಳ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ನಗರದ ಪೊಲೀಸರಿಗೆ ಮುಂದಿನ ತನಿಖೆಗೆ ವರ್ಗಾಯಿಸಲಾಗುತ್ತಿದೆ. ತನಿಖೆ ಮುಂದುವರಿಯುತ್ತಿದೆ.




