December 11, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳ ಲಕ್ಷದೀಪೋತ್ಸವ – ಸಮವಸರಣ ಪೂಜೆ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂದರ್ಭದಲ್ಲಿ ನವೆಂಬರ್ 20ರಂದು ಗುರುವಾರ ರಾತ್ರಿ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಿತು. ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಧರ್ಮೋಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಧರ್ಮೋಪದೇಶ ಪಡೆಯುವ ಅವಕಾಶವಿದೆ. ಜೈನರ ಆರಾಧನಾ ಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿವೆ.

ಬೀಡಿನಿಂದ ಭವ್ಯ ಮೆರವಣಿಗೆಯಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಮೂರ್ತಿಯನ್ನು ಮಹೋತ್ಸವ ಸಭಾಭವನಕ್ಕೆ ಕೊಂಡುಹೋಗಿ ಅಲ್ಲಿ ಸಮವಸರಣ ಪೂಜೆ ನಡೆಸಲಾಯಿತು. ಬಾಹುಬಲಿ ಸೇವಾಸಮಿತಿ ಆಶ್ರಯದಲ್ಲಿ ಧರ್ಮಸ್ಥಳದ ಶ್ರಾವಕರು-ಶ್ರಾವಕಿಯರಿಂದ ಅಷ್ಟವಿಧಾರ್ಚನೆ ಪೂಜೆ ನಡೆಸಲಾಯಿತು. ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್, ಶ್ರದ್ಧಾ ಅಮಿತ್, ಕುಮಾರಿ ಮಾನ್ಯ, ರಜತಾ ಹಾಗೂ ಶ್ರಾವಕಿಯರು ಪೂಜೆಯಲ್ಲಿ ಭಾಗವಹಿಸಿದರು.

ಅರುಣ ಮತ್ತು ಮಂಜುಳಾ ಜಿನಭಜನೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಶಿಶಿರ್ ಇಂದ್ರ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಹಿಮ್ಮೇಳದಲ್ಲಿ ರವಿರಾಜ ಉಜಿರೆ ಮತ್ತು ಶೋಧನ್ ಧರ್ಮಸ್ಥಳ ಸಹಕರಿಸಿದರು. ಮಂಗಳೂರಿನ ಸುಕುಮಾರ್ ಬಳ್ಳಾಲ್ ನಿರ್ದೇಶನದಲ್ಲಿ ಸಾಣೂರು ಶ್ರೀಧರ ಪಾಂಡಿ ವಿರಚಿತ “ಕನಕ ಜ್ವಾಲೆ” ಯಕ್ಷಾಮೃತ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂತು.

ಡಾ. ಪ್ರಖ್ಯಾತ್ ಶೆಟ್ಟಿ ಭಾಗವತರಾಗಿ, ಚೆಂಡೆವಾದನದಲ್ಲಿ ಚಂದ್ರಶೇಖರ ಹಾಗೂ ಮದ್ದಳೆ ವಾದನದಲ್ಲಿ ಬಿ. ಜನಾರ್ದನ ತೋಳ್ಪಾಡಿತ್ತಾಯ ಸಹಕರಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರಕುಮಾರ್, ಡಿ. ಹರ್ಷೇಂದ್ರಕುಮಾರ್, ಡಾ. ಸಿ.ಕೆ. ಬಳ್ಳಾಲ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

You may also like

News

ಜಿಲ್ಲೆಯಲ್ಲಿ ಅತೀ ದೊಡ್ಡ ಕ್ರಿಸ್ಮಸ್ ನಕ್ಷತ್ರ — ನೆಲ್ಯಾಡಿ ಸಂತ ಆಲ್ಫೋನ್ಸಾ ಚರ್ಚ್ SMYM ಯುವಕರಿಂದ ಅದ್ಭುತ ಸೃಜನಶೀಲತೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯ ಸಂತ ಅಲ್ಫೋನ್ಸಾ ಪುಣ್ಯ ಕ್ಷೇತ್ರಕ್ಕೆ ಸೇರಿದ SMYM ಯುವಕರು ವಿಶಿಷ್ಟ ಸಾಧನೆ ಮಾಡಿ ದಾಖಲೆ ಬರಹಕ್ಕೆ ತಮ್ಮ ಹೆಸರನ್ನು
News

ಕೋಮು ದ್ವೇಷ ಭಾಷಣ ಪ್ರಕರಣದಲ್ಲಿ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರಿಗೆ ಜಾಮೀನು

ಪ್ರಖ್ಯಾತ ವಕೀಲರಾದ ಮಹೇಶ್ ಕಜೆ ಅವರು ಮಂಡಿಸಿದ ವಾದ ಉಪ್ಪಳಿಗೆಯಲ್ಲಿ ಅಕ್ಟೋಬರ್ 20 ರಂದು ನಡೆದಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಬೆಳೆಸುವ ಮತ್ತು ಅವಮಾನಕಾರಿ ಭಾಷಣ

You cannot copy content of this page