ಮೊಗರ್ನಾಡ್ ಚರ್ಚ್ ನ 250ನೇ ಜುಬಿಲಿ ವರ್ಷದ ಪ್ರಯುಕ್ತ ‘ಸೌಹಾರ್ದ ಕ್ರೀಡಾಕೂಟ – 2025’
ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಮೊಗರ್ನಾಡ್ ದೇವ ಮಾತ ಚರ್ಚ್ ನ ಸ್ಥಾಪನೆಯ 250ನೇ ವರ್ಷದ ಜುಬಿಲಿ ಆಚರಣೆಯ ಪ್ರಯುಕ್ತ ಸರ್ವಧರ್ಮೀಯರೊಡಗಿನ ಬಾಂಧವ್ಯದ ದ್ಯೋತಕವಾಗಿ ‘ಸೌಹಾರ್ದ ಕ್ರೀಡಾಕೂಟ – 2025’ ನ್ನು ನವೆಂಬರ್ 23 ರಂದು ಭಾನುವಾರ ಹಮ್ಮಿಕೊಳ್ಳಲಾಯಿತು. ಈ ಕ್ರೀಡಾಕೂಟದ ಉದ್ಘಾಟಣೆಯು ದೇವ ಮಾತ ಆಂಗ್ಲ ಮಾಧ್ಯಮ ಶಾಲೆ ಅಮ್ಟೂರು – ಕರಿಂಗಾನದಲ್ಲಿ ಬೆಳಿಗ್ಗೆ 10:30ಕ್ಕೆ ವಿಜೃಂಭಣೆಯಿಂದ ನೆರವೇರಿತು. ಈ ಕ್ರೀಡಾಕೂಟದ ಮೂಲಕ ನಮ್ಮ ಸಮಾಜದಲ್ಲಿ ಸೌಹಾರ್ದತೆ, ಒಗ್ಗಟ್ಟು ಬಲಗೊಳಿಸುವ ಜೊತೆಗೆ ಕ್ರೀಡಾಭಾವನೆಯನ್ನು ಬೆಳೆಸುವ ಉದ್ದೇಶದಿಂದ ಪುರುಷರಿಗೆ ವಾಲಿಬಾಲ್ ಮತ್ತು ಹಗ್ಗದ ಜಗ್ಗಾಟವನ್ನು ಹಮ್ಮಿಕೊಳ್ಳಲಾಯಿತು.






ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆ ಬಜಾಲು, ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ನಾಗಪ್ಪ ಮಾತನಾಡಿ, ಇದೊಂದು ವಿಶಿಷ್ಟವಾದ ಹಾಗೂ ವಿನೂತನವಾದ ತ್ರೀಡಿ ತೀರ್ಪುಗಳನ್ನು ಬಹಳ ಸಮಾನವಾಗಿ ಸ್ವೀಕರಿಸಿ ಯಾವುದೇ ಚರ್ಚೆಗೆ ಅವಕಾಶ ಮಾಡಿಕೊಡದೆ ಬಹಳ ಸಾಂಗವಾಗಿ ಈ ಪಂದ್ಯಾಟ ನಡೆಸಲು ಕ್ರೀಡಾಪಟುಗಳ ಅಪೇಕ್ಷೆಯನ್ನು ಕೇಳಿ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿ ಅಭಿನಂದಿಸಿದರು.

ಮೊಗರ್ನಾಡ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊರವರು, ಕ್ರೀಡೆಯಿಂದ ಶಾಂತಿ ಸಮಾಧಾನದ ಸಾಮರ್ಥ್ಯದ ವಾತಾವರಣವನ್ನು ನಿರ್ಮಾಣ ಮಾಡಬಹುದು, ಮಾತ್ರವಲ್ಲದೆ ಒಬ್ಬರು ಮತ್ತೊಬ್ಬರನ್ನು ಅರ್ಥಮಾಡಿಕೊಳ್ಳಬಹುದು; ಸಮಾಜವನ್ನು ಬಲಿಷ್ಠಗೊಳಿಸಬಹುದು, ದೇಶವನ್ನು ಕಟ್ಟಬಹುದು ಮಾತ್ರವಲ್ಲದೆ ಎಲ್ಲರಲ್ಲಿಯೂ ಐಕ್ಯತೆಯ ಮತ್ತು ಏಕತೆಯ ಮನೋಭಾವವನ್ನು ಬೆಳೆಸುವುದಕ್ಕೆ ಸಾಧ್ಯವಾಗುತ್ತದೆ. ಹೀಗೆ ನಾವೆಲ್ಲರೂ ಜೊತೆಯಾಗಿ ಕೈ ಕೈ ಹಿಡಿದು ಸಮಾಜದಲ್ಲಿ ಹಾಗೂ ಊರಿನಲ್ಲಿ ಶಾಂತಿ ಸಾಮರ್ಥ್ಯದ ಸಮಾಧಾನದ ವಾತಾವರಣವನ್ನು ರೂಪಿಸೋಣ ಎಂದು ತಿಳಿಸಿ ಕ್ರೀಡಾಪಟುಗಳನ್ನು ಅಭಿನಂದಿಸಿದರು.









ಉದ್ಘಾಟನಾ ಕಾರ್ಯಕ್ರಮದ ನಂತರ ಪುರುಷರ ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆದವು. ಜೆರುಜಲೆಮ್, ರಿಜೋಯ್ಸ್, ಬೆತೆಹ್ಲೆಮ್ ಮತ್ತು ಹೊಸನ್ನಾ ತಂಡದ ವಲಯಗಳು ಲೀಗ್ ಹಂತದ ಕ್ರೀಡಾಕೂಟದಲ್ಲಿ ಭಾಗವಹಿಸಿದರು.
ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆ, ಬಜಾಲು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ನಾಗಪ್ಪ ಮತ್ತು ಶ್ರೀ ಶಾರದಾ ಪ್ರೌಢಶಾಲೆ ಪಾಣೆಮಂಗಳೂರು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ರವರು ಈ ಕ್ರೀಡಾಕೂಟದ ತೀರ್ಪುಗಾರಿಕೆಯನ್ನು ನಿರ್ವಹಿಸಿದರು. ಪಂದ್ಯಾಟದ ವೀಕ್ಷಣಾ ವಿವರಣೆಯನ್ನು ವಿಜಯ್ ಕುರ್ನಾಡು ಇವರು ನೀಡಿದರು.













ಈ ಕಾರ್ಯಕ್ರಮದಲ್ಲಿ ಮೊಗರ್ನಾಡ್ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ, ದೇವ ಮಾತ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಹಾಗೂ ಹೊಸನ್ನಾ ವಲಯದ ಮುಖ್ಯಸ್ಧ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ, ಜ್ಯುಬಿಲಿ ಸಮಿತಿಯ ಸಂಚಾಲಕ ನವೀನ್ ರಾಜೇಶ್ ಡಿಕುನ್ಹಾ, ಕ್ರೀಡಾಕೂಟದ ತೀರ್ಪುಗಾರರಾದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಬಜಾಲು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾಗಪ್ಪ, ಶ್ರೀ ಶಾರದಾ ಪ್ರೌಢಶಾಲೆ ಪಾಣೆಮಂಗಳೂರು ದೈಹಿಕ ಶಿಕ್ಷಣ ಶಿಕ್ಷಕ ಅಜಿತ್, ಬೊಳ್ಳಾಯಿ ರಾಜ್ಯಮಟ್ಟದ ಕ್ರೀಡಾಪಟು ಮೊಹಮ್ಮದ್ ಮುಮ್ಮು, ರಿಜೋಯ್ಸ್ ವಲಯದ ಮುಖ್ಯಸ್ಥ ಮ್ಯಾಕ್ಸಿಂ ಪಿಂಟೊ, ಬೆತ್ಲೆಹೆಮ್ ವಲಯದ ಮುಖ್ಯಸ್ಥೆ ಐಡಾ ಕ್ರಾಸ್ತಾ, ಗ್ಲೋರಿಯಾ ವಲಯದ ಮುಖ್ಯಸ್ಥ ರೊನಾಲ್ಡ್ ಫೆರ್ನಾಂಡಿಸ್, ಆಟೋಟ ಸ್ಪರ್ಧೆಯ ಸಮಿತಿಯ ಮುಖ್ಯಸ್ಥ ಜೋಯಲ್ ಅಂದ್ರಾದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜ್ಯುಬಿಲಿ ಸಮಿತಿಯ ಸಂಚಾಲಕರು, ಸದಸ್ಯರು ಹಾಗೂ ಐದು ವಲಯದ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಬಾಂಧವರು ಕ್ರೀಡೋತ್ಸವದಲ್ಲಿ ಪಾಲ್ಗೊಂಡಿದ್ದರು.

ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಬೆತ್ಲೆಹೆಮ್ ತಂಡವು ಮತ್ತು ದ್ವಿತೀಯ ಸ್ಥಾನವನ್ನು ಜೆರುಜಲೆಮ್ ತಂಡವು ಪಡೆದುಕೊಂಡಿತು. ವಾಲಿಬಾಲ್ ನಲ್ಲಿ ಪ್ರಥಮ ಸ್ಥಾನವನ್ನು ರಿಜೋಯ್ಸ್ ಮತ್ತು ದ್ವಿತೀಯ ಸ್ಥಾನವನ್ನು ಹೊಸನ್ನಾ ತಂಡಗಳು ಪಡೆದುಕೊಂಡವು. ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಬಹುಮಾನಗಳನ್ನು ನೀಡಿ ಅಭಿನಂದಿಸಲಾಯಿತು. ತೀರ್ಪುಗಾರರಿಗೆ ಮತ್ತು ನಿರೂಪಕರಿಗೆ ಸ್ಮರಣಿಕೆ ನೀಡಲಾಯಿತು. ಜೇಸನ್ ಕ್ರಾಸ್ತಾ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಕುಮಾರಿ ಮೆಲ್ವಿಟಾ ಕ್ರಿಸ್ಟಲ್ ಪಿರೇರಾ ವಂದನಾರ್ಪಣೆಗೈದರು.





