ಮೆಸ್ಕಾಂ ಗ್ರಾಹಕರ ಸಲಹಾ ಸಮಿತಿ ಸದಸ್ಯರಾಗಿ ಸ್ಟೀವನ್ ಡಿಸೋಜ ಆಯ್ಕೆ
ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ವ್ಯಾಪ್ತಿಯ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಚರ್ಚಿಸಿ, ಪರಿಣಾಮಕಾರಿಯಾಗಿ ಪರಿಹರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ವರ್ಗಗಳ ಸದಸ್ಯರನ್ನೊಳಗೊಂಡ ‘ಗ್ರಾಹಕರ ಸಲಹಾ ಸಮಿತಿ’ಯನ್ನು ರಚಿಸಲಾಗಿದ್ದು, ಈ ಸಮಿತಿಯ ಗ್ರಾಹಕ ಪ್ರತಿನಿಧಿಯಾಗಿ ಸಜೀಪ ಮೂಡ ಗ್ರಾಮದ ಬೊಳ್ಳಾಯಿ ನಿವಾಸಿ ಸ್ಟೀವನ್ ಡಿಸೋಜ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.

ವಿದ್ಯುತ್ ಗ್ರಾಹಕರ ಅಹವಾಲುಗಳನ್ನು ಆಲಿಸಿ, ಇಲಾಖೆ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಕೆಲಸ ಮಾಡುವ ಜವಾಬ್ದಾರಿ ಇನ್ನು ಮುಂದೆ ಇವರ ಮೇಲಿರಲಿದೆ. ಈ ನೇಮಕಾತಿಯು ಸ್ಥಳೀಯ ಮಟ್ಟದ ವಿದ್ಯುತ್ ಸಮಸ್ಯೆಗಳ ಶೀಘ್ರ ವಿಲೇವಾರಿಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.


ಕೃತಜ್ಞತೆ ಮತ್ತು ಅಭಿನಂದನೆ:
ತಮ್ಮ ನೇಮಕಾತಿಗೆ ಸಹಕರಿಸಿದ ಕರ್ನಾಟಕ ಸರ್ಕಾರದ ಮಾಜಿ ಉಸ್ತುವಾರಿ ಸಚಿವರು ಹಾಗೂ ಹಿರಿಯ ನಾಯಕರಾದ ಬಿ. ರಮಾನಾಥ ರೈ ಅವರಿಗೆ ಮತ್ತು ಮಾನ್ಯ ಇಂಧನ ಸಚಿವರಾದ ಕೆ. ಜೆ. ಜಾರ್ಜ್ ಅವರಿಗೆ ಸ್ಟೀವನ್ ಡಿಸೋಜ ಹಾಗೂ ಅವರ ಅಭಿಮಾನಿಗಳು ಮತ್ತು ಸ್ಥಳೀಯರು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ನೂತನ ಸದಸ್ಯರಾಗಿ ಆಯ್ಕೆಯಾದ ಸ್ಟೀವನ್ ಡಿಸೋಜ ಅವರಿಗೆ ಈ ಭಾಗದ ಜನತೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.





