May 6, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶೈಕ್ಷಣಿಕ ಕ್ಷೇತ್ರದಲ್ಲಿ ಕೆನರಾ ಕಾಲೇಜಿನ ಹೊಸ ದಾಖಲೆ – ಸ್ವಾಯತ್ತ ಸಂಸ್ಥೆಯಾಗಿ ಘೋಷಣೆ

ಮಂಗಳೂರು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆನರಾ ಕಾಲೇಜು 2025-26ನೇ ಶೈಕ್ಷಣಿಕ ಸಾಲಿನಿಂದ ‘ಸ್ವಾಯತ್ತ ಸ್ಥಾನಮಾನ’ (Autonomous Status) ಪಡೆದುಕೊಂಡಿದೆ ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅಧಿಕೃತವಾಗಿ ಘೋಷಿಸಿದೆ. ಕಳೆದ ಐದು ದಶಕಗಳಿಂದ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಸರಾಗಿರುವ ಈ ಸಂಸ್ಥೆಯ ಪಯಣದಲ್ಲಿ ಇದು ಅತ್ಯಂತ ಮಹತ್ವದ ಮೈಲುಗಲ್ಲಾಗಿದೆ.

ಐದು ದಶಕಗಳ ಶೈಕ್ಷಣಿಕ ಶ್ರೇಷ್ಠತೆ:

1973ರಲ್ಲಿ ಸ್ಥಾಪನೆಯಾದ ಕೆನರಾ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪರ್ಯಾಯ ಹೆಸರಾಗಿ ಬೆಳೆದಿದೆ. ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC) ಯಿಂದ 3.21 CGPA ಯೊಂದಿಗೆ ‘ಎ’ ಶ್ರೇಣಿ ಮಾನ್ಯತೆ ಪಡೆದಿರುವುದು ಸಂಸ್ಥೆಯ ಶೈಕ್ಷಣಿಕ ಬದ್ಧತೆಗೆ ಸಾಕ್ಷಿಯಾಗಿದೆ. ಪ್ರಸ್ತುತ 1569 ವಿದ್ಯಾರ್ಥಿಗಳು ಹಾಗೂ 85 ನುರಿತ ಬೋಧಕ ಸಿಬ್ಬಂದಿಯನ್ನು ಹೊಂದಿರುವ ಕಾಲೇಜು, ಶಿಸ್ತು ಮತ್ತು ಹೊಸತನಕ್ಕೆ ಆದ್ಯತೆ ನೀಡುತ್ತಿದೆ.

ರ್‍ಯಾಂಕ್ ಗಳ ಸರದಾರ:

ತನ್ನ 53 ವರ್ಷಗಳ ಸುದೀರ್ಘ ಪಯಣದಲ್ಲಿ ಕಾಲೇಜು ಒಟ್ಟು 135 ವಿಶ್ವವಿದ್ಯಾನಿಲಯ ಮಟ್ಟದ ರ್‍ಯಾಂಕ್ಗಳನ್ನು ಬಾಚಿಕೊಂಡಿದೆ. ವಿಶೇಷವಾಗಿ ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ (2023-25) 12 ರ್‍ಯಾಂಕ್ ಪಡೆಯುವ ಮೂಲಕ ತನ್ನ ಶೈಕ್ಷಣಿಕ ಗರಿಮೆಯನ್ನು ಎತ್ತಿ ಹಿಡಿದಿದೆ. ಬಿಸಿಎ (BCA) ಮತ್ತು ಎಂಸಿಎ (MCA) ವಿಭಾಗಗಳು ಕಾಲೇಜಿನ ಪ್ರಮುಖ ಆಧಾರಸ್ತಂಭಗಳಾಗಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಭದ್ರ ಬುನಾದಿ ಹಾಕಿಕೊಡುತ್ತಿವೆ.

ಸ್ವಾಯತ್ತತೆಯ ಲಾಭ ಮತ್ತು ಹೊಸ ಪಠ್ಯಕ್ರಮಗಳು:

ಸ್ವಾಯತ್ತ ಸ್ಥಾನಮಾನ ಲಭಿಸಿರುವುದರಿಂದ, ಬದಲಾಗುತ್ತಿರುವ ಜಾಗತಿಕ ಮಾರುಕಟ್ಟೆ ಮತ್ತು ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ ಸ್ವತಂತ್ರವಾಗಿ ಪಠ್ಯಕ್ರಮ ರೂಪಿಸುವ ಅಧಿಕಾರ ಕಾಲೇಜಿಗೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ಸಾಲಿನಿಂದ ಉದ್ಯೋಗಾಧಾರಿತ ಮೂರು ಹೊಸ ಕೋರ್ಸ್‌ಗಳನ್ನು ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ:

 * ಬಿಬಿಎ ಇನ್ ಲಾಜಿಸ್ಟಿಕ್ಸ್ (BBA in Logistics)

 * ಬಿಸಿಎ ಇನ್ ಡೇಟಾ ಅನಾಲಿಟಿಕ್ಸ್ (BCA in Data Analytics)

 * ಬಿ.ಕಾಂ ಇನ್ ಬಿಸಿನೆಸ್ ಡೇಟಾ ಅನಾಲಿಟಿಕ್ಸ್ (B.Com in Business Data Analytics)

ಗಣ್ಯರ ಉಪಸ್ಥಿತಿ:

ಸುದ್ದಿಗೋಷ್ಠಿಯಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅಧ್ಯಕ್ಷರಾದ ಡಿ. ವಾಸುದೇವ ಕಾಮತ್, ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್, ಜತೆ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ, ಕೋಶಾಧಿಕಾರಿ ಸಿಎ ಎಂ. ವಾಮನ್ ಕಾಮತ್, ಸಂಚಾಲಕ ಸಿಎ ಜಗನ್ನಾಥ ಕಾಮತ್, ಕೆನರಾ ವಿಕಾಸ್ ಕಾಲೇಜಿನ ಕೋ-ಆರ್ಡಿನೇಟರ್ ಬಸ್ತಿ ಪುರುಷೋತ್ತಮ ಶೆಣೈ ಮತ್ತು ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಉಪಸ್ಥಿತರಿದ್ದರು. ದೇಶ-ವಿದೇಶಗಳ ವಿವಿಧ ಉನ್ನತ ಹುದ್ದೆಗಳಲ್ಲಿರುವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವು ಸಂಸ್ಥೆಯ ಈ ಸಾಧನೆಗೆ ಬೆನ್ನೆಲುಬಾಗಿ ನಿಂತಿದೆ.

You may also like

News

ಸಾಹಿತ್ಯ ಸಂಭ್ರಮ – ಮೇ 10ರಂದು ವಲ್ಲಿ ವಗ್ಗ ಅವರ ‘ವಿಂಚ್ಣಾರ್ ಕಾಣಿಯೊ’ ಕೃತಿ ಲೋಕಾರ್ಪಣೆ

ಕೊಂಕಣಿ ಸಾಹಿತ್ಯ ಲೋಕದ ಹಿರಿಯ ಸಾಹಿತಿ ವಲ್ಲಿ ವಗ್ಗ (ವಲೇರಿಯನ್ ಡಿಸೋಜ) ಅವರ ಬಹುನಿರೀಕ್ಷಿತ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆಗೆ ಸಜ್ಜಾಗಿದೆ. ಈ ಪುಸ್ತಕ ಲೋಕಾರ್ಪಣೆ
News

ಮುಕ್ಕ ಚೇಳ್ಯಾರು ಸಂತ ಜೋಸೆಫ್ ಪ್ರಾರ್ಥನಾ ಮಂದಿರದ ದಶಮಾನೋತ್ಸವ ಹಾಗೂ ವಾರ್ಷಿಕೋತ್ಸವ ಸಂಭ್ರಮ

“ಪ್ರಾರ್ಥನಾ ಮಂದಿರಗಳು ಮನುಷ್ಯರಲ್ಲಿ ಪ್ರೀತಿಯನ್ನು ಬಿತ್ತಬೇಕು” – ಡಾ| ಗಣೇಶ್ ಅಮಿನ್ ಸಂಕಮಾರ್ ಕಥೋಲಿಕ ತೈಲಾಗಾರ ನಿರ್ವಸಿತರ ಅಭಿವೃದ್ಧಿ ಸಮಿತಿ (ರಿ.) ಮುಕ್ಕ ಚೇಳ್ಯಾರು ಇದರ ಆಶ್ರಯದಲ್ಲಿ,

You cannot copy content of this page