August 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಧರ್ಮಕ್ಷೇತ್ರದ ಹಿರಿಯ ಧರ್ಮಗುರು ಫಾದರ್ ರೋಬರ್ಟ್ ಕ್ರಾಸ್ತಾ ವಿಧಿವಶ

ಬುಧವಾರ ಜುಲಾಯ್ 8ರಂದು ವಲೆನ್ಸಿಯಾ ಚರ್ಚ್ ನಲ್ಲಿ ಅಂತ್ಯಕ್ರಿಯೆ

ಮಂಗಳೂರು ಧರ್ಮಕ್ಷೇತ್ರದ ಅತ್ಯಂತ ಹಿರಿಯ ಮತ್ತು ಗೌರವಾನ್ವಿತ ಧರ್ಮಗುರುಗಳಲ್ಲಿ ಒಬ್ಬರಾದ 82 ವರ್ಷ ಪ್ರಾಯದ ವಂದನೀಯ ಫಾದರ್ ರೋಬರ್ಟ್ ಕ್ರಾಸ್ತಾ ಅವರು ಇಂದು ಜುಲಾಯ್ 6ರಂದು ಸೋಮವಾರ ಮುಂಜಾನೆ ಜೆಪ್ಪುವಿನ ‘ಸೈಂಟ್ ಜೂಜೆ ವಾಜ್’ ನಿವೃತ್ತ ಗುರುಗಳ ನಿವಾಸದಲ್ಲಿ ನಿಧನರಾದರು. ಅವರ ನಿಧನದಿಂದಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಧಾರ್ಮಿಕ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ರಂಗಗಳಲ್ಲಿ ಸಲ್ಲಿಸಿದ ಸುದೀರ್ಘ ಸೇವೆಗೆ ತೆರೆಬಿದ್ದಂತಾಗಿದೆ.

ಜೀವಿತಾವಧಿ ಮತ್ತು ಧಾರ್ಮಿಕ ಸೇವೆ:

1944 ಅಕ್ಟೋಬರ್ 14ರಂದು ಬೇಳಾದಲ್ಲಿ ಕಾರ್ನೆಲಿಯಸ್ ಕ್ರಾಸ್ತಾ ಮತ್ತು ರೆಮೆಡಿಯಾ ಮೊಂತೇರೊ ದಂಪತಿಯ ಪುತ್ರನಾಗಿ ಜನಿಸಿದ ಫಾದರ್ ರೋಬರ್ಟ್ ಕ್ರಾಸ್ತಾ ಅವರು 1971 ಡಿಸೆಂಬರ್ 1ರಂದು ಮಂಗಳೂರು ಧರ್ಮಕ್ಷೇತ್ರದ ಧರ್ಮಗುರುಗಳಾಗಿ ದೀಕ್ಷೆ ಪಡೆದಿದ್ದರು. ಅಂದಿನಿಂದ ಧರ್ಮಕ್ಷೇತ್ರದಾದ್ಯಂತ ವಿವಿಧ ಚರ್ಚ್‌ಗಳಲ್ಲಿ ಸೇವೆ ಸಲ್ಲಿಸಿ ಭಕ್ತಾದಿಗಳ ಅಪಾರ ಪ್ರೀತಿ-ಗೌರವಗಳಿಗೆ ಪಾತ್ರರಾಗಿದ್ದರು.

ಅವರು ತಮ್ಮ ಸೇವಾವಧಿಯಲ್ಲಿ ಓಮ್ಜೂರು, ಉರ್ವ, ತಣ್ಣೀರುಬಾವಿ, ಪೇತ್ರಿ, ನಿಡ್ಪಳ್ಳಿ, ಸುಳ್ಯ, ಕಟೀಲು ಮತ್ತು ಫೆರ್ಮಾಯಿ ಚರ್ಚ್‌ಗಳಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು.

ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ:

ಧಾರ್ಮಿಕ ಕರ್ತವ್ಯಗಳ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ಫಾದರ್ ಕ್ರಾಸ್ತಾ ಅವರು ಅಪಾರ ಕೊಡುಗೆ ನೀಡಿದ್ದಾರೆ. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು, ಪುತ್ತೂರು ಫಿಲೋಮಿನಾ ಕಾಲೇಜು ಮತ್ತು ಪೊಂಪೈ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೆ, 1985 ರಿಂದ 1994 ರವರೆಗೆ ಮಡಂತ್ಯಾರು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾಗಿ ಜವಾಬ್ದಾರಿ ನಿರ್ವಹಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ನೈತಿಕ ಬೆಳವಣಿಗೆಗೆ ಕಾರಣರಾಗಿದ್ದರು.

ಅಂತ್ಯಕ್ರಿಯೆಯ ವಿವರ:

ಅಗಲಿದ ವಂದನೀಯ ಫಾದರ್ ರೋಬರ್ಟ್ ಕ್ರಾಸ್ತಾ ಅವರ ಪಾರ್ಥಿವ ಶರೀರದ ಅಂತಿಮ ವಿಧಿವಿಧಾನಗಳು 2026 ಜುಲೈ 8ರಂದು ಬುಧವಾರ ಸಂಜೆ 4 ಗಂಟೆಗೆ ವಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರಾರ್ ಚರ್ಚ್‌ನಲ್ಲಿ ನೆರವೇರಲಿದೆ.  ಮಂಗಳೂರು ಧರ್ಮಕ್ಷೇತ್ರವು ಫಾದರ್ ಕ್ರಾಸ್ತಾ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.

You may also like

News

ಬೈಂದೂರಿನ ಆಶಾ ವೀಣಾ ಡಯಾಸ್‌ ಅವರಿಗೆ ‘ಕರ್ನಾಟಕ ಶೈಕ್ಷಣಿಕ ಪ್ರಶಸ್ತಿ’ ಗೌರವ

ಶಿಕ್ಷಣ, ನಿರೂಪಣೆ, ಸಹಪಠ್ಯ ಚಟುವಟಿಕೆ ಹಾಗೂ ಸಾಮಾಜಿಕ ಸೇವೆಗೆ ಸಂದ ಪ್ರತಿಷ್ಠಿತ ಮನ್ನಣೆ “ಸಾಧಿಸುವ ಛಲವಿದ್ದರೆ ಅಸಾಧ್ಯವೂ ಸಾಧ್ಯ” ಎಂಬ ಮಾತಿಗೆ ಮತ್ತೊಮ್ಮೆ ಅರ್ಥ ತುಂಬುವಂತೆ, ಉಡುಪಿ
News

ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು, ಭಯ ಮೂಡಿಸುವ ಸಂದೇಶ – ಫೇಸ್‌ಬುಕ್ ಖಾತೆದಾರನ ವಿರುದ್ಧ ಪ್ರಕರಣ

ಪುತ್ತೂರು ದರ್ಭೆ ಪ್ರದೇಶದಲ್ಲಿ ಆಗಸ್ಟ್ 21ರಂದು ಶುಕ್ರವಾರ ಅಂಗಡಿಯೊಂದರಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು ಹಾಗೂ ಸಾರ್ವಜನಿಕರಲ್ಲಿ ಭಯ ಉಂಟುಮಾಡುವ ರೀತಿಯಲ್ಲಿ ಸಂದೇಶ

You cannot copy content of this page