ನೀರುಮಾರ್ಗದ ಚರ್ಚ್ ನ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಸಾಂಪ್ರದಾಯಿಕ ಆಹಾರ ಹಬ್ಬದ ಸಂಭ್ರಮ
ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ನೀರುಮಾರ್ಗದ ಸಂತ ಜೋಸೆಫ್ ಕಾರ್ಮಿಕರ ದೇವಾಲಯದ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ‘ಸಾಂಪ್ರದಾಯಿಕ ಆಹಾರ ಹಬ್ಬ’ ಸಂಭ್ರಮದಿಂದ ನಡೆಯಿತು. ಆಗಸ್ಟ್ 5ರಂದು ಬುಧವಾರ ಸಂಭ್ರಮ್ ಹಾಲ್ನಲ್ಲಿ ನಡೆದ ಕಾರ್ಯಕ್ರಮವು ಸಾಂಪ್ರದಾಯಿಕ ಆಹಾರ ಪದ್ಧತಿ, ಸಂಸ್ಕೃತಿ ಹಾಗೂ ಸಮುದಾಯದ ಒಗ್ಗಟ್ಟನ್ನು ಸಾರುವ ವಿಶಿಷ್ಟ ಆಚರಣೆಯಾಗಿ ಗಮನ ಸೆಳೆಯಿತು.









ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಅನಿತಾ ಕ್ರಾಸ್ತಾ ಅವರು ಸಂಪ್ರದಾಯ ಬದ್ಧವಾಗಿ ತಾಂಬೂಲ ಹಾಗೂ ನೀರು ನೀಡಿ ಸ್ವಾಗತಿಸಿದರು. ಚರ್ಚ್ ಧರ್ಮಗುರುಗಳಾದ ವಂದನೀಯ ಪಾವ್ಲ್ ಪಿಂಟೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಸಿಟಿ ವಾರಾಡೊ ಮಹಿಳಾ ಸಂಘಟನೆಯ ನಿರ್ದೇಶಕ ವಂದನೀಯ ಸಿಲ್ವೆಸ್ಟರ್ ಡಿಕೊಸ್ತಾ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಹಾಗೂ ಮಹಿಳಾ ಸಂಘಟನೆಯ ಅಧ್ಯಕ್ಷೆ ಉಷಾ ಫೆರ್ನಾಂಡಿಸ್, ಕಾರ್ಯದರ್ಶಿ ಸುನಿಲ್ ಪಿರೇರಾ, ಎಲ್ಲಾ ಆಯೋಗಗಳ ಸಂಚಾಲಕ ಸುಜಿತ್ ಸಿಕ್ವೇರಾ, ಮಹಿಳಾ ಆಯೋಗದ ಸಂಚಾಲಕಿ ಫ್ಲೇವಿಯಾ ಡಿಸೋಜ ಹಾಗೂ ಮಹಿಳಾ ಸಂಘಟನೆಯ ಕಾರ್ಯದರ್ಶಿ ರೇಶ್ಮಾ ಪಿರೇರಾ ಉಪಸ್ಥಿತರಿದ್ದರು. ಹೋಲಿ ಕ್ರಾಸ್ ಕಾನ್ವೆಂಟ್ನ ಸುಪೀರಿಯರ್ ಸಿಸ್ಟರ್ ಸುಜಾತಾ ಡೆಸಾ, ಕಾರ್ಮೆಲ್ ಆಶ್ರಮದ ಭಗಿನಿ ಮಾರಿಜೇನ್ ಎ.ಸಿ., ವಿವಿಧ ಕಾನ್ವೆಂಟ್ಗಳ ಧರ್ಮಭಗಿನೀಯರು, ಮಹಿಳಾ ಸಂಘಟನೆ ಹಾಗೂ ಮಹಿಳಾ ಆಯೋಗದ ಸದಸ್ಯರು ಕುಟುಂಬದವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.









ಮಹಿಳಾ ಸಂಘಟನೆಯ ಸದಸ್ಯರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಫ್ಲೇವಿಯಾ ಡಿಸೋಜ ಅತಿಥಿಗಳನ್ನು ಸ್ವಾಗತಿಸಿದರೆ, ಸದಸ್ಯರು ಗುಲಾಬಿ ಹೂ ನೀಡಿ ಗೌರವಿಸಿದರು. ಬಳಿಕ ಅತಿಥಿಗಳು ಸಾಂಕೇತಿಕವಾಗಿ ತೆಂಗಿನಕಾಯಿ ತುರಿಯುವ ಮೂಲಕ ಆಹಾರ ಹಬ್ಬಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿ ವಂದನೀಯ ಸಿಲ್ವೆಸ್ಟರ್ ಡಿಕೊಸ್ತಾ ಮಾತನಾಡಿ, ಇಂತಹ ಕಾರ್ಯಕ್ರಮಗಳು ಸಾಂಪ್ರದಾಯಿಕ ಆಹಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಹೊಸ ತಲೆಮಾರಿಗೆ ಅದರ ಮಹತ್ವವನ್ನು ಪರಿಚಯಿಸುವ ಉತ್ತಮ ವೇದಿಕೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.






ಈ ಸಂದರ್ಭದಲ್ಲಿ ಮಂಗಳೂರು ಧರ್ಮಕ್ಷೇತ್ರದ ಪಾಲನಾ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಉಷಾ ಫೆರ್ನಾಂಡಿಸ್ ಅವರನ್ನು ಚರ್ಚ್ ಧರ್ಮಗುರು ವಂದನೀಯ ಪಾವ್ಲ್ ಪಿಂಟೊ ಅವರು ಗಿಡವನ್ನು ನೀಡಿ ಅಭಿನಂದಿಸಿದರು. ಮಹಿಳಾ ಸಂಘಟನೆಯ ಕಾರ್ಯದರ್ಶಿ ರೇಶ್ಮಾ ಪಿರೇರಾ ಅವರು ಬೈಬಲ್ ರಸಪ್ರಶ್ನೆ ಸ್ಪರ್ಧೆಯ ವಿಜೇತರ ಹೆಸರನ್ನು ವಾಚಿಸಿದ್ದು, ವಂದನೀಯ ಸಿಲ್ವೆಸ್ಟರ್ ಡಿಕೊಸ್ತಾ ವಿಜೇತರಿಗೆ ಬಹುಮಾನ ವಿತರಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ವಂದನೀಯ ಪಾವ್ಲ್ ಪಿಂಟೊ ಮಾತನಾಡಿ, “ಸಾಂಪ್ರದಾಯಿಕ ಆಹಾರ ಹಬ್ಬವು ಕೇವಲ ಭೋಜನದ ಸಂಭ್ರಮವಲ್ಲ; ನಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ, ಪೂರ್ವಜರ ಶ್ರಮವನ್ನು ಸ್ಮರಿಸುವ ಹಾಗೂ ದೇವರಿಗೆ ಕೃತಜ್ಞತೆ ಸಲ್ಲಿಸುವ ಅಮೂಲ್ಯ ಅವಕಾಶವಾಗಿದೆ” ಎಂದು ಹೇಳಿದರು. ಜೊತೆಗೆ, ಸಮಾಜದಲ್ಲಿ ಅಗತ್ಯವಿರುವವರಿಗೆ ನೆರವಾಗುವ ಸೇವಾ ಯೋಜನೆಗಳನ್ನು ಮಹಿಳಾ ಸಂಘಟನೆ ಕೈಗೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಲವೀನಾ ಸಲ್ಡಾನ್ಹಾ ಮತ್ತು ತಂಡದವರಿಂದ ನೃತ್ಯ, ಟ್ರೀಜಾ ರೆಬೆಲ್ಲೊ ಮತ್ತು ತಂಡದವರಿಂದ ಹಾಸ್ಯ ನಾಟಕ, ಹಾಗೂ ಪ್ರೆಸಿಲ್ಲಾ ಡಿಸೋಜ ಮತ್ತು ನಮಿತಾ ರೆಬೆಲ್ಲೊ ಅವರಿಂದ ವಿವಿಧ ಮನರಂಜನಾ ಆಟಗಳು ನಡೆದವು. ಆಟಗಳ ವಿಜೇತರಿಗೆ ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಸುನಿಲ್ ಪಿರೇರಾ ಬಹುಮಾನ ವಿತರಿಸಿದರು. ಮೋಲಿ ಪಿರೇರಾ ಧನ್ಯವಾದ ಸಲ್ಲಿಸಿದರೆ, ಜೋಸ್ಫಿನ್ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.

ವೇದಿಕೆ ಅಲಂಕಾರವನ್ನು ಮರಿಯಾ ಡೆಕೋರೇಟರ್ಸ್ ನ ಸುನಿಲ್ ಪಿರೇರಾ, ಧ್ವನಿವರ್ಧಕ ವ್ಯವಸ್ಥೆ ಹಾಗೂ ಛಾಯಾಗ್ರಹಣವನ್ನು ಸಂಭ್ರಮ್ ಡೆಕೋರೇಟರ್ಸ್ ಆ್ಯಂಡ್ ಇವೆಂಟ್ ಮ್ಯಾನೇಜ್ಮೆಂಟ್ ನ ಹೆರಿಕ್ ಸಲ್ಡಾನ್ಹಾ ಮತ್ತು ಸಂಘದ ಸದಸ್ಯೆ ಸರಿತಾ ಕ್ರಾಸ್ತಾ, ಊಟದ ಮೇಜು ಹಾಗೂ ಪಾತ್ರೆಗಳ ವ್ಯವಸ್ಥೆಯನ್ನು ಯೂನಿಕ್ ಕೇಟರರ್ಸ್ ನ ವಿನ್ಸೆಂಟ್ ಸಲ್ಡಾನ್ಹಾ ಅವರು ನಿರ್ವಹಿಸಿದರು. ಬಳಿಕ ವಿವಿಧ ಸಾಂಪ್ರದಾಯಿಕ ಖಾದ್ಯಗಳ ರುಚಿಯ ಸವಿಯೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಸಮಾರೋಪಗೊಂಡಿತು. ಸುಮಾರು 60 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಪ್ರದಾಯದ ಸವಿಯನ್ನು ಸವಿದರು.



