August 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನಲ್ಲಿ MLC ಐವನ್ ಡಿಸೋಜರವರ ನೇತೃತ್ವದಲ್ಲಿ 11ನೇ ವರ್ಷದ ಭಾವೈಕ್ಯದ ದೀಪಾವಳಿ ಸಂಭ್ರಮಾಚರಣೆ

🪔ದೀಪದಿಂದ ಕತ್ತಲೆ ಹೋಗಲಿ, ಹೃದಯಗಳಲ್ಲಿ ಬೆಳಕು ಮೂಡಲಿ”ಅರ್ಚಕ ಆಸ್ರಣ್ಣ

“ಬದುಕಿನಲ್ಲಿ ದೀಪದ ಪ್ರಾಮುಖ್ಯತೆ ಮಹತ್ತರವಾದುದು. ದೀಪ ಹಚ್ಚಿದರೆ ಎಲ್ಲರಿಗೂ ಒಳಿತಾಗುತ್ತದೆ. ದೀಪ ಚೆನ್ನಾಗಿ ಉರಿದಾಗ ಪರಿಸರದ ಮಾಲಿನ್ಯ ದೂರವಾಗುತ್ತದೆ,” ಎಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಶ್ರೀ ಅನಂತಪದ್ಮನಾಭ ಆಸ್ರಣ್ಣ ಅಭಿಪ್ರಾಯಪಟ್ಟರು. ನಗರದ ಪುರಭವನದಲ್ಲಿ ಅಕ್ಟೋಬರ್ 20ರಂದು ಸೋಮವಾರ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರ ನೇತೃತ್ವದಲ್ಲಿ ನಡೆದ 11ನೇ ವರ್ಷದ ಭಾವೈಕ್ಯದ ದೀಪಾವಳಿ ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಬೆಳಕಿನ ಹಬ್ಬ ದೀಪಾವಳಿ ನಮ್ಮ ಜೀವನದ ಕತ್ತಲೆಯನ್ನು ದೂರಮಾಡಿ, ಮನಸ್ಸು ಮತ್ತು ವಾತಾವರಣವನ್ನು ಶುದ್ಧಗೊಳಿಸುತ್ತದೆ. ದೀಪವು ಕೆಟ್ಟ ಗುಣಗಳನ್ನು ಸುಟ್ಟು, ಒಳಗಿನ ಶಾಂತಿ ಮತ್ತು ಪರಿಶುದ್ಧತೆಯನ್ನು ತರಬಲ್ಲದು,” ಎಂದು ಆಸ್ರಣ್ಣ ಹೇಳಿದರು.

💫ಬೆಳಕಿಗೆ ಯಾವುದೇ ಭೇದವಿಲ್ಲಬಿಷಪ್ ಹೇಮಚಂದ್ರ ಕುಮಾರ್

ಸಿಎಸ್‌ಐ ಕರ್ನಾಟಕ ದಕ್ಷಿಣ ಡಯಾಸಿಸ್‌ನ ಬಿಷಪ್ ರೆವರೆಂಡ್ ಹೇಮಚಂದ್ರ ಕುಮಾರ್ ಮಾತನಾಡಿ, “ಬೆಳಕಿಗೆ ಜಾತಿ, ಧರ್ಮ, ಭೇದವಿಲ್ಲ. ಬೆಳಕು ಸತ್ಯವನ್ನು ಬಹಿರಂಗಪಡಿಸಿ, ಕತ್ತಲೆಯಿಂದ ಬೆಳಕಿಗೆ ಕರೆತರುತ್ತದೆ,” ಎಂದರು.

ದೀಪಾವಳಿ ಅಂಗವಾಗಿ ಏರ್ಪಡಿಸಲಾದ ಚಿತ್ರಕಲಾ ಸ್ಪರ್ಧೆಯನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಧರ್ಮ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, “ಮಕ್ಕಳಲ್ಲಿ ಭಾವೈಕ್ಯದ ಬೀಜ ಬಿತ್ತುವ ಅಗತ್ಯ ಇಂದಿನ ಕಾಲದಲ್ಲಿದೆ,” ಎಂದರು.

🌟ಹಬ್ಬಗಳು ಒಗ್ಗಟ್ಟಿನ ಸಂಕೇತ – MLC ಐವನ್ ಡಿಸೋಜ

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರು ಮಾತನಾಡಿ, “ಹಬ್ಬಗಳು ಒಗ್ಗಟ್ಟಿನ ಸಂದೇಶ ನೀಡುತ್ತವೆ. ನಾವೆಲ್ಲರೂ ಏಕತೆಯಿಂದ ಬದುಕಬೇಕು ಎಂಬ ಉದ್ದೇಶದಿಂದ 11 ವರ್ಷಗಳಿಂದ ಭಾವೈಕ್ಯದ ದೀಪಾವಳಿಯನ್ನು ಆಚರಿಸುತ್ತಿದ್ದೇವೆ. ಇದೇ ರೀತಿ ಕ್ರಿಸ್ಮಸ್ ಮತ್ತು ರಮಝಾನ್ ಹಬ್ಬಗಳನ್ನೂ ಎಲ್ಲಾ ಧರ್ಮಸ್ಥರು ಸೇರಿ ಆಚರಿಸುತ್ತಿದ್ದಾರೆ. ಆಚರಣೆಗಳು ಬೇರೆಬೇರೆ ಆದರೂ, ಎಲ್ಲರ ಗುರಿ ದೇವರೇ,” ಎಂದರು.

ಭಾವೈಕ್ಯದ ಬೆಳಕಿನಲ್ಲಿ ಮಿನುಗಿದ ಮಂಗಳೂರು

ಕಾರ್ಯಕ್ರಮದಲ್ಲಿ ಉದ್ಯಮಿ ಎ.ಜೆ. ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಅಪ್ಪಿ, ಜಿಲ್ಲಾ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಜಯರಾಮ ಶೇಖ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಐಎಂಎ ಅಧ್ಯಕ್ಷ ಡಾ. ಸದಾನಂದ ಪೂಜಾರಿ, ಜಿಲ್ಲಾ ಪ್ರಧಾನ ಸರಕಾರಿ ಅಭಿಯೋಜಕ ಎಂ.ಪಿ. ನೊರೊನ್ಹಾ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಡಾ. ಕವಿತಾ ಐವನ್ ಡಿಸೋಜ ಹಾಗೂ ಸಂಘಟಕರಾದ ಜೆ. ನಾಗೇಂದ್ರ ಕುಮಾರ್, ಟಿ.ಡಿ. ವಿಕಾಸ್ ಶೆಟ್ಟಿ, ಕೆ. ಭಾಸ್ಕರ ರಾವ್, ಸತೀಶ್ ಪೆಂಗಲ್, ಇಮ್ರಾನ್ ಕುದ್ರೋಳಿ, ಪ್ರಗತಿ ಬೇಕಲ್ ಮತ್ತಿತರರು ಉಪಸ್ಥಿತರಿದ್ದರು.

ಗೂಡುದೀಪ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಜನಪದ ನೃತ್ಯ ಸ್ಪರ್ಧೆಗಳ ಮೂಲಕ ಮಕ್ಕಳು ಮತ್ತು ಯುವಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

🌼 ಒಗ್ಗಟ್ಟಿನ ಬೆಳಕಿನಿಂದ ಹೃದಯಗಳ ದೀಪಾಲಂಕಾರ

ಭಾವೈಕ್ಯದ ದೀಪಾವಳಿ ಸಂಭ್ರಮವು ಕೇವಲ ಹಬ್ಬವಲ್ಲ, ಒಗ್ಗಟ್ಟಿನ ದೀಪವನ್ನು ಹಚ್ಚಿದ ಹೃದಯಗಳ ಸಂಗಮವಾಗಿತ್ತು. ಮಂಗಳೂರಿನ ಆಕಾಶದಲ್ಲಿ ಹೊಳೆಯುತ್ತಿದ್ದ ಆ ಸಾವಿರಾರು ದೀಪಗಳು, ಪ್ರೀತಿ, ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಹರಡಿದವು. 🪔

You may also like

News

ಓಣಂ ಸಂಭ್ರಮದ ನಡುವೆ ದುರಂತ – ತೆರೆದ ಬಾವಿಗೆ ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು

ಓಣಂ ಆಚರಣೆಯ ಸಂಭ್ರಮದ ನಡುವೆ ಸಂಭವಿಸಿದ ದಾರುಣ ಘಟನೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಕನ್ಹಂಗಾಡ್ ಸಮೀಪದ ಚೀಮೇನಿಯಲ್ಲಿ ನಡೆದಿದೆ. ಮೃತ
News

National Library Day Celebrated at Father Muller Charitable Institutions Mangaluru

The National Library Day was celebrated at Father Muller Charitable Institutions Central Library on 29th August 2026 at 3.00p.m. in

You cannot copy content of this page