ಪಾಲ್ದನೆ ಸಂತ ತೆರೆಸಾ ಚರ್ಚ್ನಲ್ಲಿ ವಾರ್ಷಿಕ ಹಬ್ಬ, ಸಮುದಾಯ ದಿನಾಚರಣೆ ಹಾಗೂ ವಿಂಶತಿ ಸಂಭ್ರಮ ವಿಜೃಂಭಣೆಯಿಂದ ಆಚರಣೆ
ಮನುಷ್ಯನು ಸಂಘ ಜೀವಿಯಾಗಿ ಸಮುದಾಯದಲ್ಲಿ ಬದುಕುವವನು – ಫಾದರ್ ಅಜಿತ್ ಮಿನೇಜಸ್

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾಲ್ದನೆ ಸಂತ ತೆರೆಸಾ ಚರ್ಚ್ನಲ್ಲಿ ವಾರ್ಷಿಕ ಹಬ್ಬ, ಸಮುದಾಯ ದಿನಾಚರಣೆ ಹಾಗೂ ಚರ್ಚ್ನ ವಿಂಶತಿ ಸಂಭ್ರಮವನ್ನು ಇಂದು ಫೆಬ್ರವರಿ 15ರಂದು ಭಾನುವಾರ ಭಕ್ತಿಭಾವ, ಉತ್ಸಾಹದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.








ಬೆಳಗ್ಗೆ 8 ಗಂಟೆಗೆ ನಡೆದ ಸಂಭ್ರಮದ ಬಲಿ ಪೂಜೆಯ ನೇತೃತ್ವವನ್ನು ಬೆಂಗಳೂರಿನ ಸೈಂಟ್ ಜೋನ್ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಡೈರೆಕ್ಟರ್ ವಂದನೀಯ ಫಾದರ್ ಅಜಿತ್ ಮಿನೇಜಸ್ ಅವರು ವಹಿಸಿದ್ದರು. ತಮ್ಮ ಧರ್ಮೋಪದೇಶದಲ್ಲಿ ಅವರು ಸಮುದಾಯ ದಿನಾಚರಣೆಯ ಮಹತ್ವವನ್ನು ವಿವರಿಸಿ, ಮನುಷ್ಯನು ಸಂಘ ಜೀವಿಯಾಗಿ ಸಮುದಾಯದಲ್ಲಿ ಬದುಕುವವನು. ಮನೆ, ನೆರೆಹೊರೆಯವರು, ವಾರ್ಡ್ ಹಾಗೂ ಚರ್ಚ್ನಿಂದ ದೂರವಿದ್ದು ಬದುಕಿದರೆ ಒಂಟಿತನ ಎದುರಾಗುತ್ತದೆ. ಒಳ್ಳೆಯ ಕೆಲಸ ಮಾಡುವಾಗ ಟೀಕೆ-ಟಿಪ್ಪಣಿಗಳು ಸಹಜ; ಆದರೆ ಅದನ್ನು ಮೀರಿ ಕಾರ್ಯ ಮುಂದುವರಿಸಿದರೆ ಯಶಸ್ಸು ಹಾಗೂ ಮನಶಾಂತಿ ದೊರೆಯುತ್ತದೆ ಎಂದು ತಿಳಿಸಿದರು.











ಬಲಿ ಪೂಜೆಯಲ್ಲಿ ಭಾಗವಹಿಸಿದ್ದ ಕಾರವಾರ ಧರ್ಮಕ್ಷೇತ್ರದ ವಂದನೀಯ ಫಾದರ್ ಪಾವುಸ್ತೀನ್ ಫುರ್ತಾಡೊ ಅವರು ಭಕ್ತವೃಂದವನ್ನು ಆಶೀರ್ವದಿಸಿದರು. ಪಾಲ್ದಾನೆ ಚರ್ಚ್ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಹಬ್ಬದ ಆಯೋಜನೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.











ಸಂಜೆ ನಡೆದ ಸಭಾ ಕಾರ್ಯಕ್ರಮಕ್ಕೆ ಫಾದರ್ ಅಜಿತ್ ಮಿನೇಜಸ್ ಹಾಗೂ ಇತರ ಧರ್ಮ ಗುರುಗಳು ಶುಭಾಶಯ ಕೋರಿದರು ಮತ್ತು ಭೋಜನ ವ್ಯವಸ್ಥೆಗೆ ಆಶೀರ್ವಚನ ನೀಡಿದರು.


ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ರೋಷನ್ ಮೊಂತೇರೊ, ಡೀಕನ್ ವಂದನೀಯ ರೋವಿನ್ ಲೋಪೆಜ್, ಆಹಾರ ಸಮಿತಿಯ ಸಂಯೋಜಕ ಆಲ್ಬನ್ ಮೊಂತೇರೊ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಮಾರಿಯೋ ರೇಗೊ, ಆಧ್ಯಾತ್ಮಿಕ ಸಮಿತಿಯ ಸಂಯೋಜಕ ಆಸ್ಟಿನ್ ಮೊಂತೇರೊ, ಗಾಯನ ಮಂಡಳಿಯ ಅಧ್ಯಕ್ಷೆ ಲಿಝಿ ಫೆರ್ನಾಂಡಿಸ್ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.




