7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮೈಸೂರಿನಲ್ಲಿ ಬಂಧಿಸಿದ ಧರ್ಮಸ್ಥಳ ಪೊಲೀಸರು

ಕಳೆದ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಮೈಸೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ:
ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಸರಗೂರು ನಿವಾಸಿ 32 ವರ್ಷ ಪ್ರಾಯದ ಎಸ್.ಎನ್. ಕಿಶೋರ್ ಬಂಧಿತ ಆರೋಪಿ. ಈತನ ಮೇಲೆ 2018ರಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 379 ಮತ್ತು 201 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು (ಅ.ಕ್ರ 09/2018). ಪ್ರಕರಣ ದಾಖಲಾದ ದಿನದಿಂದಲೂ ಈತ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದನು.

ಪೊಲೀಸ್ ಕಾರ್ಯಾಚರಣೆ:
ಬೆಳ್ತಂಗಡಿ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ, ಧರ್ಮಸ್ಥಳ ಠಾಣಾ ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೇಬಲ್ ವೃಷಭ ಮತ್ತು ಕಾನ್ಸ್ಟೇಬಲ್ ಚರಣ್ ರಾಜ್ ಅವರು ಆರೋಪಿಯ ಪತ್ತೆಗಾಗಿ ಮೈಸೂರು ಜಿಲ್ಲೆಯ ಸರಗೂರಿಗೆ ತೆರಳಿ, ಅಲ್ಲಿ ಆತನನ್ನು ದಸ್ತಗಿರಿ ಮಾಡಿದ್ದಾರೆ.
ನ್ಯಾಯಾಂಗ ಬಂಧನ:
ಬಂಧಿತ ಆರೋಪಿಯನ್ನು ದಿನಾಂಕ 08/05/2026 ರಂದು ಶುಕ್ರವಾರ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.



