ಬಾಲಬಂಧು ಪುರಸ್ಕಾರಕ್ಕೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯ ಸಹಶಿಕ್ಷಕಿ ಸುಧಾ ನಾಗೇಶ್ ಆಯ್ಕೆ

ಬಂಟ್ವಾಳ : ನವಂಬರ್ 19ರಂದು ಬಂಟ್ವಾಳ ತಾಲೂಕಿನ ಶಂಭೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಲಿರುವ ಬಂಟ್ವಾಳ ತಾಲೂಕಿನ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನಲ್ಲಿ ಮಕ್ಕಳ ಸಾಹಿತ್ಯಾದಿ ಕಲೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗೆ ನೀಡಲಾಗುವ ಬಾಲಬಂಧು ಪುರಸ್ಕಾರಕ್ಕೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯ ಸಹ ಶಿಕ್ಷಕಿ ಸುಧಾ ನಾಗೇಶ್ ಇವರನ್ನು ಆಯ್ಕೆ ಮಾಡಲಾಗಿದೆಯೆಂದು ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ ಬಾಯಾರು ತಿಳಿಸಿದ್ದಾರೆ.
ಕವಯಿತ್ರಿಯಾಗಿರುವ ಇವರು ಮೂಡಲಮನೆ, ಹೃದಯರಾಗ, ಹನಿ ಕವನ ಸಂಕಲನ ಪ್ರಕಟಿಸಿದ್ದಾರೆ. ಹೀಗೆ ಸುಮ್ಮನೆ ಎಂಬ ಹಾಸ್ಯ ಲಹರಿ, ಮಿನಿ ಎನ್ ಸೈಕ್ಲೋಪೀಡಿಯ, ಫಾರ್ ಸ್ಟೂಡೆಂಟ್ಸ್ ಎಂಬ ಮಿನಿ ಅರ್ಥ ಕೋಶ, ಜೀನಿಯಸ್ ಎಂಬ ವಿದ್ಯಾರ್ಥಿ ಕೈಪಿಡಿ, ರಂಗ ಕಲಾ ಭೂಷಕೆರ್ ಶ್ರೀ ಸೀತಾರಾಮ ಕುಲಾಲೆರ್ ಎಂಬ ತುಳು ಕೃತಿ ಸುಧಾರವರ ಇತರೆ ಪ್ರಕಟಣೆಗಳು.
ಕಳೆದ 15 ವರ್ಷಗಳಿಂದ ಶಾರದಾ ವಾಣಿ ಎಂಬ ಮಕ್ಕಳ ಸ್ವರಚನೆಗಳ ಹಸ್ತ ಪತ್ರಿಕೆ ಬಿಡುಗಡೆಯಲ್ಲಿ ಇವರ ಶ್ರಮವಿದೆ. 2022ರಲ್ಲಿ ‘ಮಕ್ಕಳ ಕಲಾ ಲೋಕ’ ದಿಂದ “ಸಾಹಿತ್ಯ ತಾರೆ” ಪ್ರಶಸ್ತಿ ಇವರ ಶಾಲೆ ಸಂದಿದೆ. ಇವರು ಮಕ್ಕಳಿಗೆ ಶಿಬಿರಗಳ ಸಂಘಟನೆ ವಿದ್ಯಾರ್ಥೀ ಸಾಹಿತ್ಯ ಗೋಷ್ಠಿ ಆಯೋಜನೆ ಮಾಡುತ್ತಾ ಬಂದಿರುವುದೂ ಪುರಸ್ಕಾರಕ್ಕೆ ಅವಕಾಶ ನೀಡಿದೆ ಎಂದು ಬಾಯಾರ್ ಹೇಳಿದರು.
ರಾಜ್ಯ ಪುರಸ್ಕಾರ ಮತ್ತು ರಾಷ್ಟ್ರಪತಿ ಪುರಸ್ಕಾರಕ್ಕಾಗಿ ಗೈಡ್ಸ್ ಗಳಿಗೆ ತರಬೇತಿ ನೀಡಿ ಸತ್ಪ್ರಜೆಗಳಾಗಿ ಬೆಳೆಸಿದ್ದಾರೆ. ಈವರೆಗೆ 576 ವಿದ್ಯಾರ್ಥಿಗಳಿಗೆ ಗೈಡ್ಸ್ ತರಬೇತಿ ನೀಡಿದ್ದು, 5 ಗೈಡ್ಸ್ ಗಳು ರಾಷ್ಟ್ರಪತಿ ಪುರಸ್ಕಾರವನ್ನು, 55 ಗೈಡ್ಸ್ ಗಳು ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಅಲ್ಲದೆ 12 ಸ್ಕೌಟ್ಸ್ ಮತ್ತು 15 ಗೈಡ್ಸ್ ಗಳು ‘ವಿಶ್ವ ಸಾಂಸ್ಕೃತಿಕ ಜಾಂಬೂರಿಯಲ್ಲಿ ಭಾಗವಹಿಸಿದ್ದಾರೆ. 4 ಸ್ಕೌಟ್ ಮತ್ತು ಇಬ್ಬರು ಗೈಡ್ಸ್ ವಿಟ್ಲ ಸ್ಥಳೀಯ ಸಂಸ್ಥೆಯು ಹಮ್ಮಿಕೊಂಡಿದ್ದ ಜಿಲ್ಲಾ ಕ್ಯಾಂಪೊರಿಯಲ್ಲಿ ಭಾಗವಹಿಸಿದ್ದಾರೆ. ಇವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.