ಮಣಿಪುರದಲ್ಲಿ ಪಾಸ್ಟರ್ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ
ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು ‘ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ’ ಅತ್ಯಂತ ತೀವ್ರವಾಗಿ ಖಂಡಿಸಿವೆ.
ವರದಿಗಳ ಪ್ರಕಾರ, ಚುರಾಚಾಂದ್ಪುರದಲ್ಲಿ ಆಯೋಜಿಸಲಾಗಿದ್ದ ಕ್ರೈಸ್ತ ಸಭೆಯನ್ನು ಮುಗಿಸಿ ಹಿಂದಿರುಗುತ್ತಿದ್ದ ಚರ್ಚ್ ನಾಯಕರ ವಾಹನಗಳ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಡಗಿಕುಳಿತು ಈ ಭೀಕರ ದಾಳಿ ನಡೆಸಿದ್ದಾರೆ.

ಮಾನವೀಯತೆ ಮೇಲಿನ ದಾಳಿ – ಮೆಟ್ರೋಪಾಲಿಟನ್ ಆರ್ಚ್ಬಿಷಪ್ ಕಳವಳ:
ಈ ಘಟನೆಯ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿರುವ ಡಿಎಪಿಸಿ (DAPC) ಸಂಸ್ಥೆಯ ಮೆಟ್ರೋಪಾಲಿಟನ್ ಆರ್ಚ್ಬಿಷಪ್ ಡಾ. ವಿನೋದ್ ಎಂ. ಚಾಕೊ ಅವರು, “ಹತ್ಯೆಗೀಡಾದವರು ಯಾವುದೇ ಆಯುಧವಿಲ್ಲದ, ಶಾಂತಿ ಬಯಸುವ ದೇವರ ಸೇವಕರಾಗಿದ್ದರು. ಅವರ ಮೇಲಿನ ಈ ಕ್ರೂರ ಹತ್ಯೆಯು ಕೇವಲ ವೈಯಕ್ತಿಕ ದಾಳಿಯಲ್ಲ; ಇದು ಮಾನವೀಯತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಣಿಪುರದಲ್ಲಿ ನೆಲೆಸಬೇಕಾದ ಶಾಂತಿಯ ಮೇಲಿನ ನೇರ ದಾಳಿಯಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ದಾಳಿಯಲ್ಲಿ ಮೃತಪಟ್ಟ ರೆವರೆಂಡ್ ವುಮ್ಥಾಂಗ್ ಸಿಟ್ಲ್ಹೌ, ರೆವರೆಂಡ್ ಕೈಗೌಲನ್, ಪಾಸ್ಟರ್ ಪಾವ್ಗೌಲನ್ ಹಾಗೂ ಅವರ ಚಾಲಕರ ನಿಧನಕ್ಕೆ ಮಹಾಸಭೆಯು ಆಳವಾದ ಸಂತಾಪ ಸೂಚಿಸಿದೆ. ಪ್ರಾಣಾಪಾಯದಿಂದ ಪಾರಾಗಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಗಡುವು; ಪಾರದರ್ಶಕ ತನಿಖೆಗೆ ಆಗ್ರಹ:
ಘಟನೆಯನ್ನು ಖಂಡಿಸಿ ಮಾತನಾಡಿರುವ ಅಸಿಸ್ಟಂಟ್ ಆರ್ಚ್ ಬಿಷಪ್ ಸುನಿಲ್ ವಿ. ಜೇಕಬ್ ಅವರು, “ಈ ರಕ್ತಪಾತದ ಹಿಂದೆ ಯಾರಿದ್ದಾರೆ ಎಂಬುದು ಜಗತ್ತಿಗೆ ತಿಳಿಯಬೇಕು. ಭಾರತ ಸರ್ಕಾರ ಮತ್ತು ಮಣಿಪುರ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ, ಈ ಕುರಿತು ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶೀಘ್ರವಾಗಿ ಕಠಿಣ ಶಿಕ್ಷೆಯಾಗುವ ಮೂಲಕ ನ್ಯಾಯ ಸಿಗಬೇಕು” ಎಂದು ಒತ್ತಾಯಿಸಿದರು.

ಶಾಂತಿ ಪುನಃಸ್ಥಾಪನೆಗೆ ಮನವಿ:
ಮಣಿಪುರದಲ್ಲಿ ದಿನೇ ದಿನೇ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರಲು, ಅಕ್ರಮ ಶಸ್ತ್ರಾಸ್ತ್ರಗಳನ್ನು ತಕ್ಷಣವೇ ವಶಪಡಿಸಿಕೊಳ್ಳಬೇಕು ಎಂದು DAPC ಆಗ್ರಹಿಸಿದೆ. ನಿರಪರಾಧಿ ನಾಗರಿಕರು ಹಾಗೂ ಚರ್ಚ್ ನಾಯಕರಿಗೆ ಸೂಕ್ತ ರಕ್ಷಣೆ ನೀಡುವ ಜೊತೆಗೆ, ವಿವಿಧ ಸಮುದಾಯಗಳ ನಡುವೆ ಶಾಂತಿ ಮೂಡಿಸಲು ಸರ್ಕಾರಗಳು ಅರ್ಥಪೂರ್ಣ ಸಂವಾದವನ್ನು ಆರಂಭಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಕಷ್ಟದ ಈ ಸಮಯದಲ್ಲಿ ಶಾಂತಿ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಿರುವ ಮಣಿಪುರದ ಚರ್ಚ್ ಗಳು ಹಾಗೂ ದುಃಖಿತ ಕುಟುಂಬಗಳೊಂದಿಗೆ ಇಡೀ ಕ್ರೈಸ್ತ ಮಹಾಸಭೆ ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದು ಸಂಸ್ಥೆ ಧೈರ್ಯ ತುಂಬಿದೆ. “ಹಿಂಸಾಚಾರದ ಮಾರ್ಗವನ್ನು ತೊರೆದು, ಪ್ರತಿಯೊಬ್ಬ ಮಾನವನ ಬದುಕುವ ಹಕ್ಕನ್ನು ಗೌರವಿಸೋಣ” ಎಂದು ಎಲ್ಲಾ ಸದ್ಭಾವನೆಯ ನಾಗರಿಕರಲ್ಲಿ ರೈಟ್ ರೆವ್. ಡಾ. ವಿನೋದ್ ಎಂ. ಚಾಕೊ ಮಾಧ್ಯಮಗಳ ಮೂಲಕ ವಿನಂತಿಸಿದ್ದಾರೆ.



