ಕಲ್ಲಡ್ಕ ಶ್ರೀರಾಮ ಹಿರಿಯ ಪಾಥಮಿಕ ಶಾಲೆಯಲ್ಲಿ ಭಜನೆ ಹಾಗೂ ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ

ಕಲ್ಲಡ್ಕ ಶ್ರೀರಾಮ ಹಿರಿಯ ಪಾಥಮಿಕ ವೇದವ್ಯಾಸ ಧ್ಯಾನಮಂದಿರದಲ್ಲಿ ಭಜನೆ ಹಾಗೂ ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು.
ಶ್ರೀರಾಮ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಧ್ಯಾಪಕರಾದ ರಶ್ಮಿತಾ ಮಾತನಾಡಿ, “ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ರೂಢಿಯಾಗಿದ್ದೇವೆ. ಅದನ್ನು ಬಿಟ್ಟು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವ. ಸಾಮೂಹಿಕ ಆಚರಣೆ ಹಾಗೂ ಸಹಭೋಜನೆ ಇವುಗಳಿಂದ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ಇಂದು ನೀವು ಭಾರತ ಮಾತೆಗೆ ಸಮರ್ಪಿಸಿದ ನಿಧಿಸಂಗ್ರಹವು ಅಶಕ್ತರಿಗೆ ಸಲ್ಲುತ್ತದೆ. ಇದೇ ರೀತಿ ನಮ್ಮ ಕೈಲಾದ ಸಹಾಯವನ್ನು ನಾವು ಅಶಕ್ತರಿಗೆ ನೀಡಿದಾಗ ನಮ್ಮ ಹುಟ್ಟುಹಬ್ಬ ಸಾರ್ಥಕವಾಗುತ್ತದೆ.
ಅದೇ ರೀತಿ ಭಜನೆಯಿಂದ ನಮ್ಮ ಸಂಸ್ಕೃತಿ, ಆಚಾರ–ವಿಚಾರಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ. ತಾಯಿ ಹೇಳಿದ ಜೀವನ ಮೌಲ್ಯ ಹಾಗೂ ಶಿಕ್ಷಕರು ಹೇಳಿದ ಪಾಠ ಜೀವನದಲ್ಲಿ ಅಳವಡಿಸಿಕೊಳ್ಳಿ, ನಿಮ್ಮ ಜೀವನವು ಉತ್ತುಂಗಕ್ಕೆ ಹೋಗಲಿ” ಎಂದು ಹಾರೈಸಿದರು. ನಂತರ 7ನೇ ತರಗತಿಯ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಅಧ್ಯಾಪಕ ವೃಂದದವರು ಹುಟ್ಟುಹಬ್ಬ ಆಚರಿಸಿಕೊಳ್ಳುವ ಮಕ್ಕಳಿಗೆ ಆರತಿ ಬೆಳಗಿ, ಅಕ್ಷತೆ ಹಾಕಿ, ತಿಲಕಧಾರಣೆ ಮಾಡಿ, ಸಿಹಿ ನೀಡಿದರು. ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ, ನಿಧಿ ಸಮರ್ಪಿಸಿದರು. ವೇದಿಕೆಯಲ್ಲಿ ಹಿರಿಯ ಅಧ್ಯಾಪಕರಾದ ಅನ್ನಪೂರ್ಣ ಎನ್. ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಭವಿಷ್ ನಿರೂಪಿಸಿ, ಮಾನ್ಯ ಸ್ವಾಗತಿಸಿ, ತನ್ಮಯಿ ರೈ ವಂದಿಸಿದರು.