ಕಲ್ಲಡ್ಕದಲ್ಲಿ ಕನ್ನಡ ಶಾಲೆಗಳಿಗೆ ಸಮ್ಮಾನ, ಮಾತೃ ಭಾಷೆಗೆ ಪ್ರಾಧಾನ್ಯ ಸಿಗಬೇಕು – ಸಿ.ಎ. ಶಾಂತಾರಾಮ ಶೆಟ್ಟಿ
ಬಂಟ್ವಾಳ ನವಂಬರ್ 11: ಕನ್ನಡ ಭಾಷೆ ಸಂಸ್ಕೃತಿ ಉಳಿಯ ಬೇಕಾದರೆ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರಿಗೂ ಇದೆ. ಭಾರತೀಯ ಎಲ್ಲಾ ಭಾಷೆಗಳು ಶ್ರೀಮಂತವಾಗಿದ್ದು ಮಾತೃ ಭಾಷೆಗೆ ಹೆಚ್ಚಿನ ಪ್ರಾಧಾನ್ಯ ಸಿಗಬೇಕು ಎಂದು ಮಂಗಳೂರಿನ ಲೆಕ್ಕಪರಿಶೋಧಕ ಸಿ.ಎ. ಶಾಂತಾರಾಮ ಶೆಟ್ಟಿ ಹೇಳಿದರು. ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಇದರ ವತಿಯಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂಘಟಿಸಲಾದ ರಾಜ್ಯದ ಕನ್ನಡ ಶಾಲೆಗಳ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾಷೆ ಸಂಸ್ಕೃತಿಯ ಜೀವಾಳ
ಭಾಷೆ ನಾಡಿನ ಸಂಸ್ಕೃತಿಯ ಜೀವಾಳ. ಭಾಷೆ ಸತ್ತರೆ ಭಾವನೆಗಳೇ ಸತ್ತಂತೆ. ಭಾವನೆಗಳಿಲ್ಲದೆ ಸಂಬಂಧ, ಶಾಂತಿ, ನೆಮ್ಮದಿ ಉಳಿಯಲು ಸಾಧ್ಯವಿಲ್ಲ. ರಾಷ್ಟ್ರೀಯ ಭಾವನೆಗಳು ಜಾಗೃತ ಗೊಳ್ಳಬೇಕಾದರೆ ಮಾತೃ ಭಾಷೆಯ ಶಿಕ್ಷಣ ಅನಿವಾರ್ಯ. ಕಳೆದ ಅರುವತ್ತು ವರ್ಷಗಳಿಂದ ಅಭಾಸಾಪ ಸಾಹಿತ್ಯ ಪರಿಷತ್ತು ರಾಷ್ಟ್ರೀಯ ವಿಚಾರಧಾರೆಯಿಂದ ಸಾಹಿತಿಗಳ, ಚಿಂತಕರ ಸಂಘಟನೆಯಲ್ಲಿ ಸರಳ ಕಾರ್ಯಕ್ರಮಗಳ ಮೂಲಕ ತೊಡಗಿಸಿಕೊಂಡಿದೆ ಎಂದು ಅಭಾಸಾಪ ಕರ್ನಾಟಕ ರಾಜ್ಯ ಸಂಪರ್ಕ ಪ್ರಮುಖ್ ಡಾ.ವಿ. ರಂಗನಾಥ ಮೈಸೂರು ದಿಕ್ಸೂಚಿ ಭಾಷಣ ಮಾಡಿದರು.
ಕನ್ನಡ ಶಾಲೆಗಳ ಸವಾಲುಗಳು:-
ವಿಚಾರ ಗೋಷ್ಠಿಯಲ್ಲಿ ಕನ್ನಡ ಶಾಲೆಗಳ ಸವಾಲುಗಳು ಮತ್ತು ಸಮಾದಾನಗಳು ಎಂಬ ವಿಷಯದ ಕುರಿತು ಶಿಕ್ಷಣ ತಜ್ಞ ರಾಷ್ಟ್ರೋತ್ಥಾನ ಶಾಲೆ ಹೊಳೆ ಹೊನ್ನೂರಿನ ರಾಜಾರಾಮ ವಿಚಾರ ಮಂಡಿಸಿದರು. ಸ್ವಾಭಿಮಾನ ಭರಿತ ರಾಷ್ಟ್ರ ನಿರ್ಮಾಣವೇ ಶಿಕ್ಷಣ ಅಂತಿಮ ಗುರಿಯಾಗಿರಬೇಕು. ಶಿಕ್ಷಣದ ಚಿಂತನೆ ಇರುವವರು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳಬೇಕು. ಕನ್ನಡ ಶಾಲೆಗಳಿಗೆ ಕಲ್ಲಡ್ಕ ಶ್ರೀರಾಮ ಶಾಲೆ ಮಾದರಿಯಾಗಿದೆ ಎಂದರು. ಶ್ರದ್ಧೆ ಇದ್ದಾಗ ಏಕಾಗ್ರತೆ, ಗ್ರಹಿಕೆ, ಹೇಳುವ ಸಾಮರ್ಥ್ಯ, ಕ್ರಿಯಾಶೀಲತೆಯಿಂದ ಉತ್ತಮ ಫಲಿತಾಂಶ ದೊರಕುತ್ತದೆ. ವಿಷಯಗಳನ್ನು ಮಾತೃ ಭಾಷೆಯಲ್ಲಿ ಕಲಿಸುವುವುದರಿಂದ ಭಾವನೆಗಳು ಅರಳಲು ಸಾಧ್ಯ ವಾಗುವುದು ಎಂದು ಉದಾಹರಣೆಗಳ ಮೂಲಕ ತಿಳಿಸಿದರು.
ಕನ್ನಡ ಭಾಷೆ ಜಗತ್ತಿನ ಭಾಷೆಗಳಿಗೆ ಶಕ್ತಿ – ಡಾ.ಪ್ರಭಾಕರ ಭಟ್
ಶ್ರೀ ರಾಮನೇ ಈ ದೇಶಕ್ಕೆ ಆದರ್ಶ. ಒಳ್ಳೆಯದರ ಕಡೆಗೆ ಹೋಗುವುದೇ ಭಾರತೀಯತೆ. ದೀಪದಿಂದ ದೀಪ ಹಚ್ಚಿದಂತೆ ಜ್ಞಾನ ವನ್ನು ಪಸರಿಸಬೇಕು. ಕನ್ನಡ ಭಾಷೆ ಬೆಳೆಸಿದರೆ ಜಗತ್ತಿನ ಭಾಷೆಗಳಗೆ ಶಕ್ತಿ ನೀಡಿದಂತಾಗುತ್ತದೆ. ಭಾರತದಲ್ಲಿ ಕೊನೆಗೆ ಗೆಲ್ಲುವುದು ಧರ್ಮವೇ ಹೊರತು ಅಧರ್ಮವಲ್ಲ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಹೇಳಿದರು. ಅವರು ರಾಜ್ಯದ ಉತ್ತಮ ಕನ್ನಡ ಮಾಧ್ಯಮ ಶಾಲೆಗಳನ್ನು ಅವರು ಸ್ಮರಣಿಕೆ ನೀಡಿ ಅಭಿನಂದಸಿ ಮಾತನಾಡಿದರು.
ಸಮ್ಮಾನಗೊಂಡ ಶಾಲೆಗಳು:- ಜ್ಞಾನ ಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆ – ಶಹಾಪುರ ಯಾದಗಿರಿ ಜಿಲ್ಲೆ, ಜೈಹಿಂದ್ ಪ್ರೌಢ ಶಾಲೆ – ಅಂಕೋಲಾ ಉತ್ತರ ಕನ್ನಡ ಜಿಲ್ಲೆ, ಶಾಂತಿಧಾಮ ಪೂರ್ವ ಗುರುಕುಲ – ಕೋಟೇಶ್ವರ ಉಡುಪಿ ಜಿಲ್ಲೆ, ವನಿತಾ ಸದನ – ಕೃಷ್ಣ ಮೂರ್ತಿಪುರಂ ಮೈಸೂರು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ – ತೆಂಕಿಲ ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆ.
ಅಭಾಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪಿ.ಬಿ. ಹರೀಶ ರೈ ಸ್ವಾಗತಿಸಿದರು. ರಾಜ್ಯ ಕಾರ್ಯದರ್ಶಿ ರಘುನಂದನ್ ಭಟ್, ನಾರಾಯಾಣ ಶೇವಿರೆ ಹಾಗೂ ಪದಾಧಿಕಾರಿಗಳಾದ ಶೈಲೇಶ್ ಮಂಗಳೂರು, ಸುಂದರ ಇಳಂತಿಲ ಉಪಸ್ಥಿತರಿದ್ದರು. ತಾಲೂಕು ಅಧ್ಯಕ್ಷ ರಾಜಮಣಿ ರಾಮಕುಂಜ ಸ್ವಾಗತಿಸಿದರು. ಕಾರ್ಯದರ್ಶಿ ಮಧುರಾ ಕಡ್ಯ ವಂದಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ಅಶೋಕ ಕಲ್ಯಾಟೆ ಮತ್ತು ಡಾ. ಮೀನಾಕ್ಷಿ ರಾಮಚಂದ್ರ ನಿರೂಪಿಸಿದರು. ವಿದ್ಯಾ ಶ್ರೀ ಕಡೂರು, ಡಾ. ಕವಿತಾ, ಜಯಾನಂದ ಪೆರಾಜೆ ಸಹಕರಿಸಿದರು.