ಯುವವಾಹಿನಿ (ರಿ.) ಬಂಟ್ವಾಳ ವತಿಯಿಂದ ನಾರಾಯಣಗುರು ವಸತಿ ಶಾಲೆ ಪೂಂಜಲಕಟ್ಟೆಯಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ
![](https://karavalisuddi.com/wp-content/uploads/2024/11/yuvavahini-11.webp)
ಬಂಟ್ವಾಳ : ಯುವವಾಹಿನಿ (ರಿ.) ಬಂಟ್ಟಾಳ ಘಟಕದ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಹಾಗೂ ಗುರುತತ್ವವಾಹಿನಿ ವಿಶೇಷ ಮಾಲಿಕೆ ಕಾರ್ಯಕ್ರಮ ಪೂಂಜಲಕಟ್ಟೆಯ ನಾರಾಯಣ ವಸತಿ ಶಾಲೆಯಲ್ಲಿ ನವಂಬರ್ 14ರಂದು ಗುರುವಾರ ನಡೆಸಲಾಯಿತು.
ಮಕ್ಕಳ ದಿನಾಚರಣೆ ಪ್ರಯುಕ್ತ ವಸತಿ ಶಾಲೆಯ ಮಕ್ಕಳಿಗೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಿ, ಶಾಲಾ ಮಕ್ಕಳಿಂದಲೇ ದೀಪ ಬೆಳಗಿಸಿ ಉದ್ಘಾಟಿಸಿ, ಸಭಾ ಕಾರ್ಯಕ್ರಮ ನಡೆಸಲಾಯಿತು ಹಾಗೂ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಾರಾಯಣ ಗುರುಗಳು ಆಧ್ಯಾತ್ಮಿಕದ ಜೊತೆಗೆ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಔದ್ಯೋಗಿಕ ಕ್ರಾಂತಿಗೆ ಮುನ್ನುಡಿ ಬರೆದ ಲೋಕ ಶಾಂತಿಯ ಹರಿಕಾರರು ಎಂದು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಸಂತೋಷ್ ಕುಮಾರ್ ಮಾತನಾಡಿ ಯುವವಾಹಿನಿ ಬಂಟ್ಟಾಳ ಘಟಕದ ವಿನೂತನ ಕಾರ್ಯಕ್ರಮ ಗುರುತತ್ವವಾಹಿನಿ ವಸತಿ ಶಾಲಾ ಮಕ್ಕಳಲ್ಲಿ ವಿಶೇಷ ಪರಿಣಾಮ ಬೀರಿದೆ, ಇಂತಹ ಕಾರ್ಯಕ್ರಮ ಮನಸ್ಸಿಗೆ ತುಂಬಾ ಮುದ ನೀಡಿದೆ. ಇಂತಹ ಉತ್ತಮ ಕಾರ್ಯಕ್ರಮ ನೀಡಿದ ಯುವವಾಹಿನಿ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ವಸತಿ ಶಾಲಾ ಮಕ್ಕಳ ಕುಣಿತ ಭಜನೆಯ ಜತೆಗೆ ಗುರುತತ್ವವಾಹಿನಿ ಭಜನಾ ಸಂಕೀರ್ತನೆ ನೋಡುಗರ ಕಣ್ಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮಕ್ಕಳ ಭಜನಾ ತರಬೇತುದಾರ ಸಂದೇಶ್ ಮದ್ದಡ್ಕ, ಶಾಲಾ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ, ಯುವವಾಹಿನಿ ಸಲಹೆಗಾರ ಅಣ್ಣು ಪೂಜಾರಿ, ಮಾಜಿ ಅಧ್ಯಕ್ಷ ನಾಗೇಶ್ ಪೊನ್ನೊಡಿ, ಪ್ರಥಮ ಉಪಾಧ್ಯಕ್ಷ ನಾರಾಯಣ ಪಲ್ಲಿಕಂಡ, ನಿರ್ದೇಶಕರುಗಳಾದ ಮಹೇಶ್ ಬೊಳ್ಳಾಯಿ, ಲೋಹಿತ್ ಕನಪಾದೆ, ಸದಸ್ಯರಾದ ಪ್ರಶಾಂತ್ ಏರಮಲೆ, ನಾಗೇಶ್ ಏಲಬೆ, ಯತೀಶ್ ಬೊಳ್ಳಾಯಿ, ಅರ್ಜುನ್ ಅರಳ, ಚಿನ್ನಾ ಕಲ್ಲಡ್ಕ, ಶ್ರವಣ್ ಅಜ್ಜಿಬೆಟ್ಟು, ಯಶೋಧರ ಕಡಂಬಳಿಕೆ, ಸುದೀಪ್ ಸಾಲ್ಯಾನ್ ರಾಯಿ, ನಾಗೇಶ್ ಕೊಡಕ್ಕಲ್ ಮತ್ತಿತರರು ಉಪಸ್ಥಿತರಿದ್ದರು.
ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಗುರುತತ್ವವಾಹಿನಿ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಟ್ಟರು.