January 20, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜಿಲ್ಲಾ ಮಟ್ಟದ ಮರಾಟಿ ವಧು-ವರರ ಸಮಾವೇಶ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಬೆಳ್ತಂಗಡಿ : ಪ್ರಸ್ತುತ ಕಾಲಘಟ್ಟದಲ್ಲಿ ವಿವಾಹ ಕಾರ್ಯಕ್ಕೆ ಸೂಕ್ತ ವಧು ಅಥವಾ ವರರ ಆಯ್ಕೆ ಮಾಡುವ ಕಾರ್ಯ ಸವಾಲಿನದ್ದಾಗಿದೆ. ಜಿಲ್ಲೆಯ ಸಮುದಾಯದ ಜನತೆಗೆ ವಧು – ವರರ ಅನ್ವೇಷಣೆಗೆ ಸಮಾವೇಶ ಬಡ ಕುಟುಂಬಗಳಿಗೆ ಸಹಾಯಕವಾಗಲಿದೆ. ಇಂತಹ ವಿಭಿನ್ನವಾದ ಸಮಾವೇಶಗಳು ಮರಾಟಿ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಧರ್ಮಣ್ಣ ನಾಯ್ಕ್ ಹೇಳಿದರು.

ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ನವಂಬರ್ 24ರಂದು ಭಾನುವಾರ ಬೆಳ್ತಂಗಡಿ ತಾಲೂಕು ಮರಾಟಿ ಸೇವಾ ಸಂಘ ಆಯೋಜಿಸಿದ್ದ ಮರಾಟಿ ವಧು – ವರರ ಸಮಾವೇಶ, ಪ್ರತಿಭಾ ಪುರಸ್ಕಾರ, ಸಾಧನಾ ಪುರಸ್ಕಾರ ಹಾಗೂ ಯೋಧರಿಗೆ ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದ ಅಭಿವೃದ್ಧಿಗೆ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದ್ದು, ಸೈನಿಕರಿಗೆ ಸನ್ಮಾನ, ಸಾಧಕರಿಗೆ ಸನ್ಮಾನದಂತಹ ಇನ್ನಷ್ಟು ಕ್ರೀಯಾಶೀಲಾ ಯೋಜನೆಗಳು ರೂಪುಗೊಳ್ಳಬೇಕಿದೆ. ಸಂಘದ ಚಟುವಟಿಕೆಗಳು ವಿಸ್ತಾರಗೊಂಡಲ್ಲಿ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಹೇಳಿದರು.

ಸಂಘದ ಸ್ಥಾಪಕಾಧ್ಯಕ್ಷ ಹಾಗೂ ಕೆ.ಡಿ.ಪಿ. ಸದಸ್ಯ ಸಂತೋಷ್ ಕುಮಾರ್ ಲಾಯಿಲ ಮಾತನಾಡಿ, ಸಮುದಾಯದ ಜನತೆ ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬೇಕು, ಸಮುದಾಯದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ದೂರವಿಟ್ಟು ಕೆಲಸ ನಿರ್ವಹಿಸಬೇಕಿದೆ ಎಂದರು. ಮುಖಂಡ ಚೆನ್ನಕೇಶವ ಅರಸಮಜಲು ಮಾತನಾಡಿ, ರಾಜಕೀಯ ರಹಿತವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿ ಸಂಘಟನಾತ್ಮಕವಾಗಿ ಶಕ್ತಿ ಶಾಲಿಯಾಗಿ ಹೊರಹೊಮ್ಮವುದು ಅಗತ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ಎಚ್.ಎಲ್. ಮಾತನಾಡಿ ತಾಲೂಕಿನ ಪ್ರತಿಯೊಬ್ಬರ ಅಭಿವೃದ್ಧಿಗೆ ಸಂಘ ಕಾರ್ಯ ನಿರ್ವಹಿಸುತ್ತಿದ್ದು, ಮುಂದೆ ಇನ್ನಷ್ಟು ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ, ಸಮಾಜದ ಮಂದಿ ಸದಸ್ಯತ್ವ ಪಡೆದುಕೊಂಡು ಸಮಾಜಮುಖಿ ಕೆಲಸದಲ್ಲಿ ಕೈ ಜೋಡಿಸಬೇಕು ಎಂದು ಹೇಳಿದರು. ಮುಖ್ಯ ಅತಿಥಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ದೇವಪ್ಪ ನಾಯ್ಕ್, ಆದಾಯ ತೆರಿಗೆ ನಿವೃತ್ತ ಆಯುಕ್ತ ಕೆ.ಎ. ಚಂದ್ರಕುಮಾರ್ ಮಾತನಾಡಿದರು. ಸೇವಾ ನಿವೃತ್ತಿ ಹೊಂದಿದ ಯೋಧರಾದ ಗಣೇಶ್ ಬಿ.ಎಲ್. ಲಾಯಿಲಾ ಮತ್ತು ಮಂಜುನಾಥ್ ನಾಯಕ್ ಮಡ್ದಡ್ಕ ಅವರನ್ನು ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯತಿನ್ ನಾಯ್ಕ್ ಕಲ್ಲೇರಿ, ಪಿ.ಎಚ್.ಡಿ. ಪದವಿ ಪೂರೈಸಿದ ಡಾ. ಸುಚೇತಾ ಎನ್.ವಿ. ಅವರನ್ನು ಸನ್ಮಾನಿಸಲಾಯಿತು. ವೃತ್ತಿಯಲ್ಲಿ ಪದೋನ್ನತಿ ಹೊಂದಿದ ಪದಾಧಿಕಾರಿಗಳಾದ ತಾರಾನಾಥ ನಾಯ್ಕ್, ಉಪಾಧ್ಯಕ್ಷ ವಸಂತ್ ನಾಯ್ಕ್ ಮುಂಡಾಜೆ, ಕೆ.ಡಿ.ಪಿ. ಸದಸ್ಯ ಸಂತೋಷ್ ಕುಮಾರ್ ಲಾಯಿಲ, ಮಾಜಿ ಅಧ್ಯಕ್ಷ ಉಮೇಶ್ ನಾಯ್ಕ್ ಕೇಳ್ತಡ್ಕ ಅವರನ್ನು ಗೌರವಿಸಲಾಯಿತು.

ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಕೀರ್ತಿ ಮುಂಡಾಜೆ, ಪ್ರಜ್ಞಾ ಯು.ಪಿ. ಗಿಳಿಕಾಪು, ದೀಕ್ಷಾ ಎಲ್. ಮಚ್ಚಿನ, ಹರ್ಷಿತಾ ಕೆ. ಪದ್ಮುಂಜ, ಯಶಶ್ವಿನಿ ಮುಂಡಾಜೆ, ಪವಿತ್ರಾ ಉಜಿರೆ, ಶ್ರೀ ಲಕ್ಷ್ಮೀ ಮುಂಡಾಜೆ, ರಂಜಿತಾ ಉಜಿರೆ, ಸಂಧ್ಯಾ ಕಲ್ಮಂಜ, ಧನ್ಯಾ ಮುಂಡಾಜೆ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಶ್ರಾವ್ಯ ಮಚ್ಚಿನ, ದೀಕ್ಷಾ ನಾಯ್ಕ್ ಮೂಡುಕೋಡಿ, ಶ್ರದ್ಧಾ ಮುಂಡಾಜೆ ಅವರನ್ನು ಗೌರವಿಸಲಾಯಿತು. ವಧು – ವರರ ಸಮಾವೇಶದಲ್ಲಿ ನೂರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡು ಅನ್ವೇಷನಾ ಕಾರ್ಯ ನಡೆಸಿದರು. ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪೆನಿ ನಿವೃತ್ತ ಅಧಿಕಾರಿ ಪಿ. ಕುಮಾರಯ್ಯ ನಾಯ್ಕ್, ಪುತ್ತೂರು ಮಹಮ್ಮಾಯಿ ಸೌಹಾರ್ದ ಸಹಕಾರಿ ನಿರ್ದೇಶಕ ಡಿ. ರಾಮಕೃಷ್ಣ ನಾಯ್ಕ್ ಪಿಂಡಿವನ, ಸಂಘದ ಮಾಜಿ ಅಧ್ಯಕ್ಷ ಉಮೇಶ್ ನಾಯ್ಕ್ ಕೇಳ್ತಡ್ಕ, ಗೌರವಾಧ್ಯಕ್ಷ ಎಚ್. ಕೊರಗಪ್ಪ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರೀಕ್ಷಾ ಹಾಗೂ ನಿಶ್ಯೂಷಾ ಪ್ರಾರ್ಥಿಸಿದರು. ಸನ್ಮಾನಿತರ ಪಟ್ಟಿಯನ್ನು ಕಾರ್ಯದರ್ಶಿ ಪವಿತ್ರಾ ಲೋಕೇಶ್ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ತಾರನಾಥ ನಾಯ್ಕ್ ನಿರೂಪಿಸಿದರು. ಕಾರ್ಯದರ್ಶಿ ಪ್ರಸಾದ್ ನಾಯ್ಕ್ ಸ್ವಾಗತಿಸಿ ಹರ್ಷಿತ್ ಪಿಂಡಿವನ ವಂದಿಸಿದರು.

You may also like

News

ಕನ್ನಡ ಭವನ ಜಿಲ್ಲಾಧ್ಯಕ್ಷರಾಗಿ ಎಸ್. ನಂಜುಂಡಯ್ಯ ಚಾಮರಾಜನಗರ ಆಯ್ಕೆ

ಕಾಸರಗೋಡು : ಸಂಘಟಕ, ಸಾಹಿತಿ ಶಿಕ್ಷಕ, ಸಾಹಿತ್ಯ ಪರಿಷತ್, ಜಾನಪದ ಪರಿಷತ್ ಮೊದಲಾಗಿ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಹೆಚ್ಚಿನ ಸಂಘ, ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸಕ್ರಿಯರಾಗಿರುವ ಎಸ್.
News

ಕಾಜೂರು ಉರೂಸ್ ಪ್ರಯುಕ್ತ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

ಬೆಳ್ತಂಗಡಿ ಇತಿಹಾಸ ಪ್ರಸಿದ್ಧ ಧಾರ್ಮಿಕ ಸಮನ್ವಯ ಕೇಂದ್ರ, ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಕಾಜೂರು ಮಖಾಂ ಶರೀಫ್ ನಲ್ಲಿ ಈ‌ ವರ್ಷದ ಉರೂಸ್ ಮಹಾ

You cannot copy content of this page