ಬಂಟ್ವಾಳದಲ್ಲಿ ಅಡಿಕೆ ಕೃಷಿ ರೋಗ ನಿಯಂತ್ರಣ ಮಾಹಿತಿ ಕಾರ್ಯಗಾರ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬಂಟ್ವಾಳ ವತಿಯಿಂದ ಲಯನ್ಸ್ ಕ್ಲಬ್ ಬಂಟ್ವಾಳ, ಹಾಗೂ ತೋಟಗಾರಿಕೆ ಇಲಾಖೆ ಬಂಟ್ವಾಳ ಇವುಗಳ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಪೂಪಾಡಿ ಕಟ್ಟೆಯ ತೀರ್ಥೊಟ್ಟು ಚಂದ್ರಶೇಖರ್ ಕೊಟ್ಟಾರಿಯವರ ನಿವಾಸದಲ್ಲಿ ಅಡಿಕೆ ಕೃಷಿಕರಿಗಾಗಿ “ಅಧಿಕ ಇಳುವರಿಗಾಗಿ ಅಡಿಕೆ ರೋಗ ನಿವಾರಣೆ”ಯ ಕುರಿತು ಮಾಹಿತಿ ಕಾರ್ಯಗಾರ ದಶಂಬರ್ 3ರಂದು ಮಂಗಳವಾರ ಜರುಗಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ದಕ್ಷಿಣ ಕನ್ನಡ ಜಿಲ್ಲಾ ರೈತರ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಯ ರೋಗ ನಿವಾರಣೆಗೆ ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಎಲ್ಲರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ರಾಧಾಕೃಷ್ಣ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಿ.ಪಿ.ಸಿ.ಆರ್.ಐ. (CPCRI) ವಿಟ್ಲ ಇದರ ಹಿರಿಯ ತಾಂತ್ರಿಕ ಅಧಿಕಾರಿಯಾಗಿ ಪುರಂದರ ಸಿ. ಕೂಟೇಲು, ಇವರು ಅಡಿಕೆ ಕೃಷಿಯಲ್ಲಿ ಬರುವಂತಹ ರೋಗಗಳನ್ನು, ಔಷಧಿಗಳು ಹಾಗೂ ಕಳೆನಾಶಕಗಳ ಮೂಲಕ ಯಾವ ರೀತಿ ನಿವಾರಣೆ ಮಾಡಬೇಕು, ಮಣ್ಣು ಪರೀಕ್ಷೆ ಹೇಗೆ ಮಾಡಬೇಕು, ಮಿಶ್ರ ಬೆಳೆಗಳನ್ನು ಬೆಳೆದು ಲಾಭದಾಯಕವನ್ನಾಗಿ ಯಾವ ರೀತಿ ಮಾಡಬಹುದು ಎಂಬ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಕೃಷಿ ಇಲಾಖೆಯ ಕೃಷಿ ಅಧಿಕಾರಿಯಾಗಿರುವ ನಂದನ್ ಶೆಣೈ ಇವರು ಇಲಾಖೆಯ ಸಹಾಯಧನದ ಮಾಹಿತಿ ಹಾಗೂ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ಅಧಿಕಾರಿಯಾಗಿರುವ ಹನುಮಂತ ಕಾಳಗಿಯವರು ಕೃಷಿ ಇಲಾಖೆಯಲ್ಲಿ ದೊರಕುವ ಯಂತ್ರೋಪಕರಣಗಳ ಸಹಾಯಧನಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.
ತೋಟಗಾರಿಕೆ ಇಲಾಖೆಯ ಪಾಣೆಮಂಗಳೂರು ಹೋಬಳಿಯ ಪ್ರಭಾರ ಸಹಾಯಕ ಹರೀಶ್ ಇವರು ತೋಟಗಾರಿಕೆ ಇಲಾಖೆಯಲ್ಲಿರುವ ನರ್ಸರಿ ಹಾಗೂ ಇತರ ಸೌಲಭ್ಯಗಳ ಸಹಾಯಧನದ ಕುರಿತು ವಿವರಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ವಲಯದ ಮೇಲ್ವಿಚಾರಕಿ ರೂಪ ರೈ ಸ್ವಾಗತಿಸಿ, ಸೇವಾ ಪ್ರತಿನಿಧಿ ವಸಂತಿ ವಂದಿಸಿ, ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ಕೃಷಿ ಮೇಲ್ವಿಚಾರಕ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.