ಬಂಟ್ವಾಳದಲ್ಲಿ ಕರಾವಳಿ ಕಲೋತ್ಸವ 2024-25 ಮತ್ತು ಬಹುಸಂಸ್ಕ್ರತಿ ಸಂಭ್ರಮಕ್ಕೆ ಅದ್ದೂರಿ ಚಾಲನೆ
ಬಂಟ್ವಾಳ : ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ , ಚಿಣ್ಣರ ಲೋಕ ಸೇವಾಬಂಧು (ರಿ) ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 20 ರಿಂದ ಜನವರಿ 26 ವರೆಗೆ ಬಿ.ಸಿ. ರೋಡಿನ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ನಡೆಯುವ ಕರಾವಳಿ ಕಲೋತ್ಸವ 2024-25 ಮತ್ತು ಬಹುಸಂಸ್ಕ್ರತಿ ಸಂಭ್ರಮಕ್ಕೆ ಅದ್ದೂರಿ ಚಾಲನೆ ದೊರಕಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗೋಲ್ಡ್ ನ್ ಪಾರ್ಕ್ ಅಸೋಸಿಯೇಟ್ಸ್ ಪಾಲುದಾರ ಉದ್ಯಮಿ ಜಗನ್ನಾಥ ಚೌಟ ಮಾಣಿ ಬದಿಗುಡ್ಡೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಸಾಹಿತ್ಯದ ಕಾರ್ಯಕ್ರಮಗಳು ಬೇರೆ ಯಾವ ಜಿಲ್ಲೆಯಲ್ಲಿ ನಡೆಯುವುದಿಲ್ಲ. ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿ, ಇತರರಿಗೆ ಪ್ರೇರಣೆಧಾಯಕ ಕಾರ್ಯಕ್ರಮವಾಗಿದೆ. ಮಕ್ಕಳಿಗೆ ಜಿಲ್ಲೆಯ ಸಂಸ್ಕೃತಿಯ ವಿಚಾರವನ್ನು ತಿಳಿಸುವುದರ ಜೊತೆ ವ್ಯಕ್ತಿಗತ ಬೆಳವಣಿಗೆಗೆ ಚಿಣ್ಣರ ಲೋಕ ಸಂಸ್ಥೆಯು ಕಾರಣೀಕರ್ತವಾಗಿದೆ ಎಂದರು.
ಜ್ಯೋತಿಷಿ ಅನಿಲ್ ಪಂಡಿತ್, ದಕ್ಷಿಣ ಕನ್ನಡ ಜಿಲ್ಲಾ ಮ್ಯಾನೆಜ್ಮೆಂಟ್ ವರ್ಕಿಂಗ್ ಕಾರ್ಯದರ್ಶಿ ಕೆ.ಪಿ. ಉಮ್ಮರ್ ಮುಸ್ಲಿಯಾರ್ ಪಾಂಡವರಕಲ್ಲು, ಚಿಣ್ಣರ ಅಧ್ಯಕ್ಷೆ ಕು| ದಿಯಾ ರಾವ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಧಾನ ಸಂಚಾಲಕ ಮೋಹನ್ ದಾಸ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಂಟ್ವಾಳ ಪುರಸಭಾ ಅಧ್ಯಕ್ಷ ವಾಸು ಪೂಜಾರಿ, ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್, ಗೌರವಾಧ್ಯಕ್ಷ ನೋಟರಿ ಜಯರಾಮ ರೈ, ಉಪಾಧ್ಯಕ್ಷೆ ಪೌಝಿಯಾ, ಗೌರವ ಸಲಹೆಗಾರ ಅಶೋಕ್ ಶೆಟ್ಟಿ ಸರಪಾಡಿ, ನಿರ್ದೇಶಕರಾದ ಇಬ್ರಾಹಿಂ ಕೈಲಾರ್, ಶೋಭಾ ಶೆಟ್ಟಿ, ರಾಜಾ ಚೆಂಡ್ತಿಮಾರ್, ಪ್ರೇಮನಾಥ ಶೆಟ್ಟಿ ಅಂತರ, ಶಶಿಧರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು
ಅಂತರಾಷ್ಟ್ರೀಯ ಕ್ರೀಡಾಪಟು ಸಚಿನ್ ಸುವರ್ಣ ಅವರಿಗೆ ಉದಯ ಚೌಟ ಸಾಧನಾ ಪ್ರಶಸ್ತಿ, ಬಹುಮುಖ ಪ್ರತಿಭೆ ಮಾ| ಆಶಿಕ್ ಎಂ. ರಾವ್ ಮಂಗಳೂರು ಅವರಿಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿದ್ದ ತಾಲೂಕಿನ ಎರಡು ಕುಟುಂಬಗಳಿಗೆ ಸಹಾಯ ಧನ ವಿತರಿಸಲಾಯಿತು.
ಬಿ.ಸಿ. ರೋಡಿನ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂಟಪದಿಂದ ಹೊರಟ ಜಾನಪದ ದಿಬ್ಬಣದ ಮೆರವಣಿಗೆಗೆ ಮೊಡಂಕಾಪು ಇನ್ಪೆಂಟ್ ಜೀಸಸ್ ಚರ್ಚ್ ನ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ವಲೇರಿಯನ್ ಡಿಸೋಜ, ದಕ್ಷಿಣ ಕನ್ನಡ ಜಿಲ್ಲಾ ಮ್ಯಾನೆಜ್ಮೆಂಟ್ ವರ್ಕಿಂಗ್ ಕಾರ್ಯದರ್ಶಿ ಕೆ.ಪಿ. ಉಮ್ಮರ್ ಮುಸ್ಲಿಯಾರ್ ಪಾಂಡವರಕಲ್ಲು, ಅನ್ನಪೂರ್ಣೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಈಶ್ಚರ ಭಟ್ ಮಾದಕಟ್ಟೆ ಜೊತೆಯಾಗಿ ಚಾಲನೆ ನೀಡಿದರು.
ಸುಮಾರು 250 ಮಂದಿ ವಿವಿಧ ಕ್ಷೇತ್ರಗಳ ಕಲಾವಿದರ ಜೊತೆ ರಾಜ್ಯ ಹಾಗೂ ಹೊರ ರಾಜ್ಯದ ಜಾನಪದ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಸ್ವಾಗತ ಸಮಿತಿ ಅಧ್ಯಕ್ಷ ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು. ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.