ನೆಲ್ಲಿ ಗುಡ್ಡೆ ನೂರುಲ್ ಹುದಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ
ನೂತನ ಗೌರವಾಧ್ಯಕ್ಷರಾಗಿ ಸಯ್ಯಿದ್ ಮಸ್ಊದ್ ಅಲ್ ಬುಖಾರಿ ಆಯ್ಕೆ
ಹಾಲಿ ಕಮಿಟಿಯನ್ನು ಮುಂದುವರಿಸಲು ತೀರ್ಮಾನ
ಬಂಟ್ವಾಳ ; ನೆಲ್ಲಿಗುಡ್ಡೆ ನೂರುಲ್ ಹುದಾ ಜುಮಾ ಮಸೀದಿ ಇದರ ವಾರ್ಷಿಕ ಮಹಾಸಭೆಯು ಮರ್ಹೂಂ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ರವರ ಸುಪುತ್ರ ಸಯ್ಯಿದ್ ಮಸ್ಊದ್ ಅಲ್ ಬುಖಾರಿ ಕೂರತ್ ಅವರ ನೇತೃತ್ವದಲ್ಲಿ ಡಿಸೆಂಬರ್ 20ರಂದು ಶುಕ್ರವಾರ ಮಸೀದಿಯಲ್ಲಿ ನಡೆಯಿತು.
ಆಡಳಿತ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ನೆಲ್ಲಿಗುಡ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಭೆಯಲ್ಲಿ ಮಸೀದಿ ಗೌರವಾಧ್ಯಕ್ಷರಾಗಿದ್ದ ಕೂರತ್ ತಂಙಳ್ ರವರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರು ಸುಪುತ್ರ ಸಯ್ಯಿದ್ ಮಸ್ಊದ್ ಅಲ್ ಬುಖಾರಿ ಅವರನ್ನು ಗೌರವಾಧ್ಯಕ್ಷರಾಗಿ ಆಯ್ಕೆ ಮಾಡುವುದು, ಪ್ರಸ್ತುತ ಕಮಿಟಿಯನ್ನು ಮುಂದುವರಿಸುವುದು, ಕಮಿಟಿಯಲ್ಲಿ ತೆರವಾದ ಸದಸ್ಯ ಸ್ಥಾನಕ್ಕೆ ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ ಹಾಗೂ ಶಬೀರ್ ಸಾಹಿಬ್ ರವರನ್ನು ಸೇರ್ಪಡೆಗೊಳಿಸುವುದು ಹಾಗೂ ಲೆಕ್ಕ ಪರಿಶೋಧಕರಾಗಿ ಅಬ್ದುಲ್ ರಹಿಮಾನ್ ಎಸ್.ಐ. ಅವರನ್ನು ನೇಮಿಸುವುದು ಎಂದು ಮಹಾ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಇದೇ ವೇಳೆ ಜಮಾಅತ್ ನ ಗೌರವಾಧ್ಯಕ್ಷರಾಗಿ ಆಯ್ಕೆಯಾದ ತಂಙಳ್ ಅವರನ್ನು ಜಮಾಅತ್ ವತಿಯಿಂದ ಸನ್ಮಾನಿಸಲಾಯಿತು. ಸ್ಥಳೀಯ ಖತೀಬ್ ಉನೈಸ್ ಸಖಾಫಿ ಅಲ್ ಅಫ್ಲಲಿ ಅಲ್ ಅರ್ಷದಿ ಸ್ವಾಗತಿಸಿ, ಹಿತವಚನ ನೀಡಿದರು. ಪ್ರಧಾನ ಕಾರ್ಯದರ್ಶಿ ಮುಸ್ತಾಕ್ ಬೇಗ್ ವರದಿ ವಾಚಿಸಿ, ಲೆಕ್ಕ ಪತ್ರ ಮಂಡಿಸಿದರು.