ಕಾಸರಗೋಡು ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ರಿಯಾಜ್, ಯಾಸೀನ್ ಮತ್ತು ಸಮದ್ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವು
ಕಾಸರಗೋಡು: ನಗರದ ಸಮೀಪ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಎರಿಂಜಿಪುಳ ಪಯಸ್ವಿನಿ ನದಿಯಲ್ಲಿ ಸಂಭವಿಸಿದೆ. ಸಿದ್ದೀಕ್ ಅವರ ಪುತ್ರ 17 ವರ್ಷ ಪ್ರಾಯದ ರಿಯಾಜ್ ಅಶ್ರಫ್ ಅವರ ಪುತ್ರ 13 ವರ್ಷ ಪ್ರಾಯದ ಯಾಸೀನ್ ಮತ್ತು ಮಜೀದ್ ಅವರ ಪುತ್ರ 13 ವರ್ಷ ಪ್ರಾಯದ ಸಮದ್ ಮೃತ ವಿದ್ಯಾರ್ಥಿಗಳು ಎಂದು ತಿಳಿಯಲಾಗಿದೆ.
ಮಂಜೇಶ್ವರದಲ್ಲಿ ಪಿಯುಸಿ ಓದುತ್ತಿರುವ ರಿಯಾಝ್ ಶುಕ್ರವಾರ ಎರಿಂಜಿಪುಳ ಬಳಿಯ ತನ್ನ ಪೂರ್ವಜರ ಮನೆಗೆ ಬಂದಿದ್ದು, ಮೂವರು ಮಕ್ಕಳು ಮಧ್ಯಾಹ್ನ ತಮ್ಮ ಮನೆಯ ಸಮೀಪ ಇರುವ ಪಯಸ್ವಿನಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಸಂದರ್ಭ ಈ ದುರಂತ ಸಂಭವಿಸಿದೆ. ಕಾಸರಗೋಡು ಮತ್ತು ಕುಟ್ಟಿಕೋಲ್ ನ ಅಗ್ನಿಶಾಮಕ ಮತ್ತು ಸ್ಕೂಬಾ ತಂಡಗಳ ಶೋಧಕಾರ್ಯದಿಂದ ಮೂವರ ಬಾಲಕರ ಮೃತ ದೇಹ ಪತ್ತೆಯಾಗಿದೆ. ಮೃತದೇಹವನ್ನು ಚೆರ್ಕಳ ಕೆ.ಕೆ. ಪುರಂ ಹೊರವಲಯದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.