ವಿಕಲಚೇತನರ ಬಸ್ಪಾಸ್ ನವೀಕರಣ
ಮಂಗಳೂರು, ಜನವರಿ 1: 2024ನೇ ಸಾಲಿನಲ್ಲಿ ವಿತರಿಸಿರುವ ಮಂಗಳೂರು ವಿಭಾಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಕಾಲ ಸಂಬಂಧಿತ ಸೇವೆಯಾದ ವಿಕಲಚೇತನರ ರಿಯಾಯಿತಿ ಬಸ್ ಪಾಸುಗಳ ಅವಧಿಯು ಮುಕ್ತಾಯಗೊಂಡಿದ್ದು, 2025ನೇ ಸಾಲಿಗಾಗಿ ಬಸ್ಸು ಪಾಸುಗಳನ್ನು ಜನವರಿ 1ರಿಂದ ನವೀಕರಿಸಲು ಕ್ರಮಕೈಗೊಳ್ಳಲಾಗಿದೆ.
ವಿಕಲಚೇತನರ ರಿಯಾಯಿತಿ ಬಸ್ಸು ಪಾಸುಗಳನ್ನು ಫಲಾನುಭವಿಗಳು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಕಾಲಮಿತಿ ನೀಡುವ ಉದ್ದೇಶದಿಂದ 2024ನೇ ಸಾಲಿನಲ್ಲಿ ವಿತರಿಸಿದ ಪಾಸುಗಳು ಫೆಬ್ರವರಿ 28ರವರೆಗೆ ಮಾನ್ಯವಾಗಿರುತ್ತದೆ. ವಿಕಲಚೇತನರ ರಿಯಾಯಿತಿ ಪಾಸುಗಳನ್ನು ಪಡೆಯಲು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ಮೂಲಕ ಅರ್ಜಿ ಸಲ್ಲಿಸಬೇಕು.
ಹೊಸ/ನವೀಕರಣ ಕ್ಕೆ ಬೇಕಾದ ದಾಖಲೆಗಳು:-
1 ಸ್ಟ್ಯಾಂಪ್ ಸೈಜಿನ ಮತ್ತು 2 ಪಾಸ್ ಪೋರ್ಟ್ ಸೈಜಿನ ಇತ್ತೀಚಿನ ಭಾವಚಿತ್ರ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿತರಿಸುವ ಗುರುತಿನ ಚೀಟಿಯ ಮೂಲ ಪ್ರತಿಯನ್ನು (ಮಾನ್ಯತಾ ಅವಧಿ ಮುಗಿದಿರಬಾರದು)ಅಥವಾ ವಿಕಲಚೇತನ ವ್ಯಕ್ತಿಗಳಿಗೆ ಹೊಸದಾಗಿ ನೀಡಲಾಗಿರುವ UDID ಕಾರ್ಡುನ ಮೂಲಪ್ರತಿ, ವಿಳಾಸದ ದೃಢೀಕರಣ ದಾಖಲಾತಿ (ಆಧಾರ್ಕಾರ್ಡ್) ಮೂಲಪ್ರತಿ, ನಿಗಮದ ವಿಕಲಚೇತನರ ರಿಯಾಯಿತಿ ಬಸ್ಸುಪಾಸನ್ನು ಪಡೆಯುವ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು JPEG ಹಾಗೂ PDF ನಮೂನೆಯಲ್ಲಿ ಸೇವಾಸಿಂಧು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಹಾಗೂ ಪಾಸ್ನ ಶುಲ್ಕ 660 ರೂಪಾಯಿ ನೀಡಿ ಪಾಸುಗಳನ್ನು ಪಡೆಯಬೇಕು. ಪಾಸುಗಳನ್ನು ನವೀಕರಿಸಲು ಫೆಬ್ರವರಿ 28 ಕೊನೆಯ ದಿನ.
2024ನೇ ಸಾಲಿನಲ್ಲಿ ವಿತರಿಸಿರುವ ಹಳೆಯ ಬಸ್ಸು ಪಾಸನ್ನು ಕಡ್ಡಾಯವಾಗಿ ಹಿಂತಿರುಗಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.