ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ವಾಚನ – ಗಾಯನ – ಕುಂಚ ಕಾರ್ಯಕ್ರಮ
ಬಂಟ್ವಾಳ : ಮಂಚಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ವಾಚನ – ಗಾಯನ – ಕುಂಚ ಕಾರ್ಯಕ್ರಮ ಜನವರಿ 5ರಂದು ಭಾನುವಾರ ನಡೆಯಿತು.
ಕವಿಗೋಷ್ಠಿಯ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಮುಳಿಯ ಶಂಕರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕವಿ ಅಥವಾ ಬರಹಗಾರ ಸಮಾಜದ ತಲ್ಲಣಗಳಿಗೆ ಸದಾ ಸ್ಪಂದಿಸುವ ತುಡಿತವನ್ನು ಹೊಂದಿದ್ದು ಸಾಮಾಜಿಕ ಬದಲಾವಣೆಗಳಿಗೆ ಬಹುಬೇಗನೆ ಪ್ರತಿಕ್ರಿಯಿಸುವ ಶಕ್ತಿ ಸಾಹಿತ್ಯದ ಇತರ ಪ್ರಕಾರಗಳಿಗಿಂತಲೂ ಕವನ, ವಚನಗಳಿಗೆ ಹೆಚ್ಚಿದೆ ಎಂದು ಆಶಯ ನುಡಿಗಳನ್ನಾಡಿದ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅಭಿಪ್ರಾಯ ಪಟ್ಟರು.
ಕವಿಗೋಷ್ಠಿಯಲ್ಲಿ ಕವಿಗಳಾದ ಎಂ.ಪಿ. ಬಶೀರ್ ಅಹ್ಮದ್ ಬಂಟ್ವಾಳ, ದಾ.ನಾ. ಉಮಾಣ್ಣ ಕೊಕ್ಕಪುಣಿ, ಗೀತಾ ಎಸ್. ಕೊಂಕೋಡಿ, ರವೀಂದ್ರ ಕುಕ್ಕಾಜೆ, ಗಣೇಶ ಪ್ರಸಾದ್ ಪಾಂಡೇಲು, ಅಶೋಕ್ ಕಡೇಶ್ವಾಲ್ಯ, ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್, ಅಬೂಬಕ್ಕರ್ ಅಮ್ಮುಂಜೆ, ಪ್ರತಿಮಾ ತುಂಬೆ, ಎಂ.ಡಿ. ಮಂಚಿ ಇವರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಪ್ರವೀಣ್ ಜಯ ವಿಟ್ಲ, ಎಲ್.ಕೆ. ಧರಣ್ ಮಾಣಿ, ಯೋಗೀಶ್ ಆಳ್ವ ಪುದ್ದೊಟ್ಟು, ಕಾವ್ಯಶ್ರೀ ಗಡಿಯಾರ ಗಾಯನ ಪ್ರಸ್ತುತಪಡಿಸಿದರು. ಬಾಲಕೃಷ್ಣ ಶೆಟ್ಟಿ ಖಂಡಿಗ, ತಾರಾನಾಥ್ ಕೈರಂಗಳ, ಮುರಳಿ ಕೃಷ್ಣ ರಾವ್, ಮುರಳೀಧರ ಆಚಾರ್ಯ ಕುಂಚದ ಮೂಲಕ ಭಾವ ಮೂಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಪೂವಪ್ಪ ನೇರಳಕಟ್ಟೆ, ಇರಾ ಬಂಟರ ಸಂಘದ ಅಧ್ಯಕ್ಷ ಜಗದೀಶ ಶೆಟ್ಟಿ, ಪತ್ರಕರ್ತ ಲತೀಫ್ ನೇರಳಕಟ್ಟೆ, ಶಿಕ್ಷಕ ದಾಮೋದರ ಕಾರ್ಯ ಉಪಸ್ಥಿತರಿದ್ದರು. ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಣೇಶ ಪ್ರಸಾದ್ ಪಾಂಡೇಲು ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಮೆಲ್ಕಾರ್ ವಂದಿಸಿದರು.