May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜನವರಿ 8ರಂದು ಕಲ್ಲೇಗದಲ್ಲಿ ಸಯ್ಯಿದುಲ್ ಉಲಮಾರ ನೇತೃತ್ವದಲ್ಲಿ ಸಮಸ್ತ ಯುವ ಸಮಾವೇಶ

ಬಂಟ್ವಾಳ : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರ ಸಮಿತಿಯ ವತಿಯಿಂದ ಜನವರಿ 8ರಂದು ಪುತ್ತೂರಿನ ಕಲ್ಲೇಗ ಜುಮಾ ಮಸೀದಿಯ ವಠಾರದ ಶಂಸುಲ್ ಉಲಮಾ ನಗರ ಪುತ್ತೂರು ತಂಙಳ್ ವೇದಿಕೆಯಲ್ಲಿ ಸಮಸ್ತ ಯುವ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಸ್ತ ಕರ್ನಾಟಕ ಮುಶಾವರದ ಕಾರ್ಯದರ್ಶಿ ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಹೇಳಿದರು.

ಬಿ.ಸಿ. ರೋಡ್ ನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸಕ್ತ ಸನ್ನಿವೇಶದಲ್ಲಿ ಯುವ ಸಮೂಹ ಮಾದಕ ದ್ರವ್ಯದ ದಾಸರಾಗುತ್ತಿದ್ದು ಇದರಿಂದಾಗಿ ಸಮಾಜದಲ್ಲಿ ದೈನಂದಿನ ಕೆಡುಕುಗಳು, ಅನ್ಯಾಯ, ಹಿಂಸೆ ಹಾಗೂ ಅಪರಾಧ ಕೃತ್ಯಗಳು ವೃದ್ಧಿಸುತ್ತಾ ಇದೆ.  ಅದೇ ರೀತಿ ಮದುವೆ ಇನ್ನಿತರ ಶುಭ ಕಾರ್ಯಗಳ ಹೆಸರಿನಲ್ಲಿ ದುಂದು ವೆಚ್ಚ, ಅನಾಚಾರಗಳು ಕೂಡ ನಿಯಂತ್ರಿಸಲಾರದಷ್ಟು ಬೆಳೆಯುತ್ತಿದೆ, ಇದರ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಯುವಕರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಒಂದು ಉತ್ತಮ ಸಮಾಜ ನಿರ್ಮಾಣ ಮಾಡುವ ಸಲುವಾಗಿ ಯುವ ಸಮೂಹವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಜ್ಯದ ಪ್ರತೀ ಮೊಹಲ್ಲಾಗಳ ಇಮಾಮರುಗಳು, ಜಮಾಅತ್ ಮತ್ತು ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿಗಾಗಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಲ್ಲೇಗ ಜುಮಾ ಮಸೀದಿಯ ಅಧ್ಯಕ್ಷ ಕೆ.ಪಿ. ಮುಹಮ್ಮದ್ ಹಾಜಿಯವರು ಸಮಸ್ತದ ಧ್ವಜಾರೋಹಣ ಮಾಡಲಿದ್ದಾರೆ. ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಸಮಸ್ತ ಕರ್ನಾಟಕ ಮುಶಾವರದ ಅಧ್ಯಕ್ಷರಾದ ಸಯ್ಯಿದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕರವರು ಅಧ್ಯಕ್ಷತೆ ವಹಿಸುವರು. ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್‌ ಪತ್ತೂರುರವರು ದುಆ ನೆರವೇರಿಸುವರು.

ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರೀ ತಂಙಳ್ ಬೆಳ್ತಂಗಡಿ, ಸಮಸ್ತ ಕರ್ನಾಟಕ ಮುಶಾವರದ ಪ್ರಧಾನ ಕಾರ್ಯದರ್ಶಿ ಖಾಝಿ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ, ಕಾರ್ಯಾಧ್ಯಕ್ಷ ಕೆ.ಎಂ. ಉಸ್ಮಾನುಲ್ ಫೈಝಿ ತೋಡಾರು ಮೊದಲಾದವರು ಭಾಗವಹಿಸಲಿದ್ದಾರೆ. ಪಿ.ಎಂ. ಅಬ್ದುಸ್ಸಲಾಂ ಬಾಖವಿ ವಡಕ್ಕೇಕಾಡ್ ಮತ್ತು ಅನ್ವರಲಿ ಮುಹಿಯುದ್ದೀನ್ ಹುದವಿಯ ಆಲುವಾ ಅವರು ವಿಷಯ ಮಂಡಿಸಲಿದ್ದಾರೆ ಎಂದವರು ವಿವರಿಸಿದರು. ಕಚೇರಿ ಕಾರ್ಯದರ್ಶಿ ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಸದಸ್ಯರಾದ ಅಹ್ಮದ್ ದಾರಿಮಿ ಕಂಬಳಬೆಟ್ಟು, ಉಸ್ಮಾನ್ ದಾರಿಮಿ ಕಲ್ಲಡ್ಕ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page