June 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಏಮಾಜೆ ಸರಕಾರಿ  ಕಿರಿಯ ಪ್ರಾಥಮಿಕ ಶಾಲಾ “ಪ್ರತಿಭಾ ಪುರಸ್ಕಾರ ” ಹಾಗೂ “ಅಕ್ಷರ ರತ್ನ” ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ

ಜಗತ್ತಿನ ಅಂದಕಾರವನ್ನು ಹೋಗಲಾಡಿಸುವ ಶಕ್ತಿ ಇರುವುದು  ಶಿಕ್ಷಣಕ್ಕೆ ಮಾತ್ರಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ.

ಬಂಟ್ವಾಳ :   ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವ ಶಕ್ತಿ ಇರುವುದು  ಶಿಕ್ಷಣಕ್ಕೆ ಮಾತ್ರ. ಶಿಕ್ಷಕರಲ್ಲಿ ತಾಯಿಯ ಮಮತೆಯನ್ನು ಹೊಂದಿರುವಂತಹ ವಾತ್ಸಲ್ಯ ಗುಣವಿರಬೇಕು ಆಗ ಮಗು ಆಸಕ್ತಿಯಿಂದ ಕಲಿಯುತ್ತದೆ. ತನ್ನೆಲ್ಲ ಉತ್ತಮ ವಿಚಾರಗಳನ್ನು ಮಗುವಿಗೆ ಧಾರೆಯೆರೆಯುವ ಮೂಲಕ ಮಗುವನ್ನು ಮಾನವೀಯ ಮೌಲ್ಯಯುತವಾದ ಸತ್ಪ್ರಜೆಯನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇದಕ್ಕೆ  ಜೊತೆಯಾಗಿ ನಿಲ್ಲಬೇಕಾಗಿರುವುದು ಪೋಷಕರ ಕರ್ತವ್ಯವಾಗಿದೆ. ಮಗುವಿಗೆ ಎಲ್ಲರೊಳಗೆ ಒಂದಾಗಿ ಸಂಸ್ಕಾರಯುತ ಜೀವನವನ್ನು ಸಾಗಿಸುವ ಗುಣಗಳನ್ನು ಬೆಳೆಸುವಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಮಹತ್ತರವಾದದ್ದು.

ಶಿಕ್ಷಣದ ಸೌಲಭ್ಯಗಳಲ್ಲಿ ಏನೇ ಸಮಸ್ಯೆಗಳಿದ್ದರೂ ಅದನ್ನು ಶಾಲೆಯ ಮತ್ತು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ನಡೆಸುವ ಮೂಲಕ ಊರಿನ ವಿದ್ಯಾಭಿಮಾನಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಶೈಕ್ಷಣಿಕ ವಿಚಾರಗಳಿಗಾಗಿ ಯಾವುದೇ ಭೇದ ಭಾವವನ್ನು ತೋರದೆ ಒಂದಾಗಿ ಒಗ್ಗಟ್ಟಿನಲ್ಲಿ ಕಾರ್ಯರೂಪಕ್ಕೆ ತರುವ ಕಾರ್ಯಕ್ರಮಗಳು ಅಭಿವೃದ್ಧಿಗೆ ಬಹಳಷ್ಟು ಸಹಾಯವಾಗುತ್ತದೆ. ಯಾರು ತ್ಯಾಗಮಯಿಯಾಗಿ ಶೈಕ್ಷಣಿಕ ವಿಚಾರಗಳಿಗಾಗಿ ಸೇವೆಯನ್ನು ಮಾಡುತ್ತಾರೋ ಅವರಿಗೆ ದೇವರ ಅನುಗ್ರಹ ಸದಾ ಇರುತ್ತದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್  ಎಂ.ಜಿ.  ಹೇಳಿದರು. ಅವರು ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯ ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ  ಶ್ರೀದೇವಿ ಗೆಳೆಯರ ಬಳಗ ಇದರ ಆಶ್ರಯದಲ್ಲಿ ನಡೆದ 2024 -25 ನೇ ಸಾಲಿನ  “ಪ್ರತಿಭಾ ಪುರಸ್ಕಾರ” ಹಾಗೂ “ಅಕ್ಷರ ರತ್ನ “ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಮಿತಾ ಡಿ. ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಗತಿಗೆ ಸೇವೆ ಸಲ್ಲಿಸಿದ 7 ನಿಕಟ ಪೂರ್ವ ಅಧ್ಯಕ್ಷರುಗಳನ್ನು ಶಾಲಾ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.  ಶಾಲಾ ವತಿಯಿಂದ ಸದರಿ ವರ್ಷದಿಂದ ಪ್ರಾರಂಭಿಸಲಾದ “ಅಕ್ಷರ ರತ್ನ” ಪ್ರಶಸ್ತಿಯನ್ನು ಸರಕಾರಿ ಶಾಲೆಗಳ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀಯುತ ಚಿನ್ನಾ ಕಲ್ಲಡ್ಕ ಇವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರಾಮೀಣ ಪ್ರದೇಶದ ಪುಟ್ಟ ಶಾಲೆಯ ಪ್ರತಿಭಾ ಪುರಸ್ಕಾರಕ್ಕೆ ಪ್ರಪ್ರಥಮವಾಗಿ ಭೇಟಿ ಕೊಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಶಾಲೆ ಹಾಗೂ ಊರವರ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು. ಶಾಲಾ ಅಭಿವೃದ್ಧಿಯಲ್ಲಿ ವಿಶೇಷ ಮುತುವರ್ಜಿ ವಹಿಸುತ್ತಿರುವ ಶಾಲಾ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀಧರ ಶೆಟ್ಟಿ ರವರನ್ನು  ಗೌರವಿಸಲಾಯಿತು. ಶಾಲೆಯ ಅಭಿವೃದ್ಧಿಯಲ್ಲಿ ವಿಶೇಷವಾಗಿ ಸಹಕರಿಸುತ್ತಿರುವ ಸಂಘ ಸಂಸ್ಥೆ ಹಾಗೂ ಮಹನೀಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

 

ಪ್ರತಿಭಾ ಪುರಸ್ಕಾರದ ನಿಮಿತ್ತ ಶಾಲಾ ಮಕ್ಕಳಿಗೆ ಕಲಿಕೆ – ಆಟೋಟ, ವಿಶೇಷ ಸಾಧನೆಗೈದ ಕರಾಟೆ ಪಟು ಹಾಗೂ ಪ್ರತಿಭಾ ಕಾರಂಜಿ ಸ್ಪರ್ಧಾ ವಿಜೇತರಿಗೆ, ಅತ್ಯುತ್ತಮ ಅಂಕ ಗಳಿಸಿದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸನ್ಮಾನ, ಹಳೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಗಣೇಶ್ ಆಚಾರ್ಯ, ಉಪಾಧ್ಯಕ್ಷ ಪ್ರಸಾದ್ ಆಚಾರ್ಯ, ನೆಟ್ಲ ಮುಡ್ನೂರು ಪಂಚಾಯತ್ ಉಪಾಧ್ಯಕ್ಷ ಸಚ್ಚಿದಾನಂದ, ಸದಸ್ಯರುಗಳಾದ ಧನಂಜಯ ಗೌಡ, ಶಕೀಲಾ ಕೃಷ್ಣ ಮಿತ್ತಕೋಡಿ, ಪ್ರಧಾನ ಅಭ್ಯಾಗತ ಸಹ ಶಿಕ್ಷಕ ವೆಂಕಟೇಶ್ ಅನಂತಾಡಿ, ನಿವೃತ್ತ ಪ್ರಾಂಶುಪಾಲ ಜಯರಾಮ್ ರೈ, ಮಾಣಿ ಕ್ಲಸ್ಟರ್ ಸಿ.ಆರ್.ಪಿ. ಸತೀಶ್ ರಾವ್, ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಸ್ವಾಗತಿಸಿ, ಸಹ ಶಿಕ್ಷಕ ಉದಯ ಚಂದ್ರ ಕೆ. ಎಸ್. ಶಾಲಾ ವರದಿ ವಾಚಿಸಿ, ಶಿಕ್ಷಕಿ ದೀಕ್ಷಾ ಬಹುಮಾನಿತರ ಪಟ್ಟಿ ವಾಚಿಸಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀಧರ ಶೆಟ್ಟಿ ವಂದಿಸಿ, ಅತಿಥಿ ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಯಶ್ವಿತ ಸಹಕರಿಸಿದರು.

ಸಭಾ ಕಾರ್ಯಕ್ರಮದ ಮೊದಲು ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ, ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಕುಮಾರಿ ಪ್ರಗತಿ ನಿರ್ದೇಶನದಲ್ಲಿ ಶಾಲಾ ಮಕ್ಕಳಿಂದ ಪ್ರದರ್ಶಿಸಲ್ಪಟ್ಟ “ನವಶಕ್ತಿ ವೈಭವ” ನೃತ್ಯ ಪ್ರೇಕ್ಷಕರ ಗಮನಸೆಳೆಯಿತು. ಶಾಲೆಯನ್ನು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು.  ಕಾರ್ಯಕ್ರಮದ ನಿಮಿತ್ತ ಸಾರ್ವಜನಿಕ ಅನ್ನದಾನ ಏರ್ಪಡಿಸಲಾಗಿತ್ತು.

You may also like

News

ಕೋಳಿ ಅಂಕದ ಜೂಜಾಟದ ಅಡ್ಡೆಗೆ ವಿಟ್ಲ ಪೊಲೀಸರ ದಿಢೀರ್ ದಾಳಿ – ಮೂವರ ಬಂಧನ, ಸೊತ್ತುಗಳ ವಶ

ಸಾಲೆತ್ತೂರು ಗ್ರಾಮದ ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ಹಣ ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದ ಜಾಗಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿರುವ
News

Thousands Gather in Faith and Devotion as Saint Anthony’s Minor Basilica, Dornahalli Celebrates Grand Annual Feast 2026

Amid an atmosphere of deep faith, prayer, and jubilation, thousands of devotees from across Karnataka and neighbouring states converged at

You cannot copy content of this page