ಮಸಾಜ್ ಸೆಂಟರ್ ಮೇಲೆ ದಾಳಿ ಪ್ರಕರಣ – ರಾಮ ಸೇನಾ ಸಂಘಟನೆ ಮುಖ್ಯಸ್ಥ ಪ್ರಸಾದ್ ಅತ್ತಾವರ್ ಸಹಿತ 14 ಜನರ ಬಂಧನ

ಮಂಗಳೂರು ಬಿಜೈಯಲ್ಲಿರುವ ಕಲರ್ಸ್ ಯುನಿಸೆಕ್ಸ್ ಸೆಲೂನ್ ಗೆ ಇಂದು ಜನವರಿ 23ರಂದು ಸರಿಸುಮಾರು ಬೆಳಗ್ಗೆ 11:50ಕ್ಕೆ, ತಂಡವೊಂದು ಏಕಾಏಕಿ ನುಗ್ಗಿ ಧಾಂದಲೆ ನಡೆಸಿ ಸೆಲೂನ್ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಪೋಲಿಸರು ಒಟ್ಟು 14 ಜನರನ್ನು ಬಂಧಿಸಿದ್ದಾರೆ.
ಬರ್ಕೆ ಪೊಲೀಸ್ ವ್ಯಾಪ್ತಿಯಲ್ಲಿರುವ ಬಿಜೈ ಕೆಎಸ್ಆರ್ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್ನಲ್ಲಿರುವ “ಕಲರ್ಸ್” ಯುನಿಸೆಕ್ಸ್ ಸೆಲೂನ್ ಗೆ ವ್ಯಕ್ತಿಗಳು ಸೆಲೂನಿನಲ್ಲಿ ಅನೈತಿಕತೆ ನಡೆಯುತ್ತಿದೆ ಎಂದು ಆರೋಪಿಸಿ, ಏಕಾಏಕಿ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಮತ್ತು ಮಹಿಳಾ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿ, ಸೆಲೂನಿನಲ್ಲಿರುವ ಉಪಕರಣಗಳನ್ನು ಧ್ವಂಸಗೊಳಿಸಿ ನೌಕರರ ಮೇಲೆ ಹಲ್ಲೆ ನಡೆಸಿದ್ದಾರೆ.
ಸೆಲೂನ್ ಮಾಲಕ ಮಹಾಬಲ ಎಂಬವರ ಪುತ್ರ ಸುಧೀರ್ ಶೆಟ್ಟಿರವರು ನೀಡಿದ ದೂರಿನ ಮೇರೆಗೆ ಅರೋಪಿಗಳನ್ನು ಬಂಧಿಸಿದ್ದಾರೆ. ಅಪರಾಧ ಸಂಖ್ಯೆಃ 06/2025 ರಂತೆ ಠಾಣೆ. ಸೆಕ್ಷನ್ 329(2), 324(5), 74 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು BNS ನ 351(3), 115(2), 109, 352 ಮತ್ತು 190 ತನಿಖೆಯ ವೇಳೆ ನಿರ್ದಿಷ್ಟ ಸಂಘಟನೆಯ ಸದಸ್ಯರು ಇರುವುದು ಪತ್ತೆಯಾಗಿದ್ದು ಘಟನೆಯಲ್ಲಿ ಭಾಗಿಯಾದ ಒಟ್ಟು 14 ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ರಾಮಸೇನಾ ಸಂಘಟನೆಯ ಮುಖ್ಯಸ್ಥ ಪ್ರಸಾದ್ ಅತ್ತಾವರ್, ಹರ್ಷರಾಜ್, ಮೋಹನ್ ದಾಸ್, ಪುರಂದರ, ಸಚಿನ್, ಅವೀಶ್, ಸುಕೇತ್, ಅಂಕಿತ್, ಕಾಲಿ ಮುತ್ತು, ಅಭಿಲಾಶ್, ದೀಪಕ್, ವಿಘ್ನೇಶ್, ಪ್ರದೀಪ್ ಪೂಜಾರಿ ಮತ್ತು ಶರಣ್ ರಾಜ್ (ಛಾಯಗ್ರಾಹಕ) ಎಂದು ತಿಳಿದು ಬಂದಿದೆ.