“ಬ್ರಾಹ್ಮಣ್ಯಶಾಹಿತನದ ವಿರುದ್ಧ ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟ” – ಶಿವಸುಂದರ್

ಮಂಗಳೂರು: “ಕುಂಭಮೇಳದ ಸಂದರ್ಭ ಮನುವಾದಿಗಳು ಪರ್ಯಾಯ ಸಂವಿಧಾನ ರಚಿಸುವ ಘೋಷಣೆ ಮಾಡಿದ್ದಾರೆ. ರಾಮರಾಜ್ಯ, ಚಾಣಕ್ಯ, ಮನುಸ್ಮೃತಿ ಆಧಾರದಲ್ಲಿ ಸಂವಿಧಾನ ರಚನೆ ಮಾಡುವ ಘೋಷಣೆ ಮಾಡಿದ್ದಾರೆ. ಈ ದೇಶದಲ್ಲಿ ಮೂರುವರೆ ಸಾವಿರ ವರ್ಷಗಳಿಂದ ಬ್ರಾಹ್ಮಣ ಶಾಹಿ ಸಿದ್ಧಾಂತವಿದ್ದು ನಾವದನ್ನು ಸೋಲಿಸಬೇಕು” ಎಂದು ಅಂಕಣಕಾರ, ಬರಹಗಾರ ಶಿವಸುಂದರ್ ಕರೆ ನೀಡಿದ್ದಾರೆ.
ಅವರು ಮಂಗಳೂರಿನ ಪುರಭವನದಲ್ಲಿ ಇಂದು ಜನವರಿ 27ರಂದು ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಬಣ, ದಕ್ಷಿಣ ಕನ್ನಡ ಜಿಲ್ಲಾ ಶಾಖೆಯು ಭಾರತ ಸಂವಿಧಾನ ಜಾರಿಯಾಗಿ 75ನೇ ವರ್ಷಾಚರಣೆ ಹಾಗೂ ದಲಿತ ಸಂಘರ್ಷ ಸಮಿತಿಯ 50ರ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ವಿಚಾರ ಸಂಕೀರ್ಣದಲ್ಲಿ “ಭಾರತದ ಸಂವಿಧಾನದ ಆಶಯಗಳು ಮತ್ತು ಮನುವಾದಿಗಳ ಷಡ್ಯಂತ್ರಗಳು” ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿದರು.
“ಸ್ವಾತಂತ್ರ ಹೋರಾಟದ ಸಮಯದಲ್ಲಿ ಸಾವರ್ಕರ್, ಗೋವಳ್ಕರ್ರಂತವರು ಬ್ರಿಟಿಷರ ಜೊತೆ ಕೈಜೋಡಿಸಿದ್ದರು. ಅವರು ಭಾರತದ ಜನರನ್ನು ಬ್ರಿಟಿಷರೊಂದಿಗೆ ಸೇರಿಸಿ ಸೈನ್ಯದ ತರಬೇತಿ ಪಡೆದು ಮುಸ್ಲಿಂ ಮತ್ತು ದಲಿತರ ವಿರುದ್ದ ಹೋರಾಟಕ್ಕೆ ಸಜ್ಜುಗೊಳಿಸಿದ್ದರು. ಅವರು ಇದೀಗ ಸಾವರ್ಕರ್ ವಾದಿಗಳು ಮತ್ತೆ ಬ್ರಾಹ್ಮಣ್ಯವನ್ನು ಹೇರುವ ಸಿದ್ಧತೆಯಲ್ಲಿದ್ದಾರೆ. ಅದಕ್ಕಾಗಿ ಸೈದ್ಧಾಂತಿಕವಾಗಿ ಒಟ್ಟಾಗಿ ಆಂತರಿಕ ಬ್ರಾಹ್ಮಣ್ಯಶಾಹಿತನದ ವಿರುದ್ಧ ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟ ಆಗಬೇಕಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಇತ್ತೀಚಿಗೆ ಮೋಹನ್ ಭಾಗವತ್ ಭಾಷಣ ಮಾಡಿ 2024 ಜನವರಿ 22ರಂದು ರಾಮಮಂದಿರ ಲೋಕಾರ್ಪಣೆಯಾದ ದಿನವೇ ನಮಗೆ ನಿಜವಾದ ಸ್ವಾತಂತ್ರ್ಯ ಬಂತು ಎಂದು ಹೇಳಿದ್ದಾರೆ. ಆರೆಸ್ಸೆಸ್ ನವರು ಸರ್ಕಾರವನ್ನು ನಿಯಂತ್ರಿಸುವವರು. ಕೇಶವ ಕೃಪ ನಮ್ಮನ್ನು ಆಳುತ್ತಿದೆ. ಆರೆಸ್ಸೆಸ್ ಗೆ ನೂರು ವರ್ಷ ಆಗುವ ಹೊತ್ತಿಗೆ ಭಾರತವನ್ನು ಹಿಂದೂ ರಾಷ್ಟ ಮಾಡಲು ಹೊರಟಿದ್ದಾರೆ. ಅವರ ರಾಮ ಸೀತೆಯ ಅವಮಾನಿಸಿವನು. ಅವರ ರಾಮ ಶೂದ್ರ ಶಂಬೂಕನನ್ನು ಕೊಂದವನು, ನೀತಿ ಉಲ್ಲಂಘಿಸಿ ವಾಲಿಯನ್ನು ಕೊಂದವನು. ಮೋಸದಿಂದ ರಾವಣನನ್ನು ರಾಮ ಕೊಂದಿದ್ದಾನೆ. ಇಂತಹಾ ರಾಮರಾಜ್ಯದಲ್ಲಿ ಕೊರಗಜ್ಜನಿಗೆ ಏನು ಸ್ಥಾನವಿದೆ?” ಎಂದು ಶಿವಸುಂದರ್ ಪ್ರಶ್ನಿಸಿದರು.
“ಮುಂದಿನ ಒಂದು ವರ್ಷದಿಂದ ಆರ್.ಎಸ್.ಎಸ್. ನವರು ಹಳ್ಳಿಹಳ್ಳಿಗಳ ದಲಿತರನ್ನು ಭೇಟಿ ಮಾಡಿ ಅಂಬೆಡ್ಕರ್ ರ ಬಗ್ಗೆ ಹೇಳಲಿದ್ದಾರೆ. ಅವರು ಅಂಬೇಡ್ಕರ್ಗೆ ಹಿಂದೂ ಸಂತನ ಪಟ್ಟ ಕಟ್ಟುತ್ತಿದ್ದಾರೆ. ಆದ್ದರಿಂದ ಅವರ ಅಂಬೇಡ್ಕರ್ ಬೇರೆ ನಮ್ಮ ಅಂಬೇಡ್ಕರ್ ಬೇರೆ. ನಮ್ಮ ಅಂಬೇಡ್ಕರ್ ಮನುಸ್ಮೃತಿಯನ್ನು ಸುಟ್ಟ ಅಂಬೇಡ್ಕರ್ ಎಂದರು. ಮೋಹನ್ ಭಾಗವತ್ ನಮ್ಮ ಸಂವಿಧಾನದಲ್ಲಿ ಭಾರತೀಯತೇ ಇಲ್ಲ ಎಂದು ಅದನ್ನು ಬದಲಿಸಲು ಹೊರಟಿದ್ದಾರೆ. ಇದರ ವಿರುದ್ದ ನಾವೆಲ್ಲಾ ಒಟ್ಟಾಗಿ ಸಂವಿಧಾನವನ್ನು ಉಳಿಸುವ ಕಾರ್ಯ ಮಾಡಬೇಕಿದೆ” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ರಮಾನಾಥ ರೈ, “ಸಾಮಾಜಿಕ ನ್ಯಾಯದಿಂದ ವಂಚಿತರಾದ ಜನವರ್ಗದ ಸಂಘಟನೆ ದಲಿತ ಸಂಘಟನೆ. ಇದರ ಹೋರಾಟ ನಡೆದು ಬಂದ ದಾರಿ, ಇತಿಹಾಸಸದ ನೆನಪುಗಳಿಂದ ವರ್ತಮಾನದ ಹೇಗೆ ಬದುಕಬೇಕೆಂಬ ವಿಚಾರ ಮಂಥನ ನಡೆಯಬೇಕಿದೆ. ದಕ್ಷಿಣ ಕನ್ನಡದಲ್ಲಿ ದಲಿತರ ಸಂಖ್ಯಾಬಲ ಕಡಿಮೆ. ಸಾಮಾಜಿಕ ನ್ಯಾಯದಿಂದ ವಂಚಿತರಾದವರು ಈ ಹೋರಾಟಕ್ಕೆ ಸೇರಿದರೆ ದೊಡ್ಡ ಮಟ್ಟದ ಯಶಸ್ವಿ ಸಿಗುತ್ತದೆ. ಭಾರತಕ್ಕೆ ಅವಶ್ಯಕತೆಗನುಗುಣವಾದ ಸಂವಿಧಾನವನ್ನು ನಮಗೆ ಅಂಬೇಡ್ಕರ್ ಕೊಟ್ಟಿದ್ದಾರೆ” ಎಂದರು.
ನಾನೊಬ್ಬ ಬಲಿಷ್ಟ ಸಮಾಜದಿಂದ ಬಂದವನು. ನನ್ನ ಕಾಲಘಟ್ಟದ ಸಂದರ್ಭ ನಾನು ಪೆರ್ಲ ಶಾಲೆಗೆ ಹೋಗುತ್ತಿದ್ದೆ. ನಮ ಊರಲ್ಲಿ ಪರಿಶಿಷ್ಟ ಸಮುದಾಯ, ಹಿಂದುಳಿದ ವರ್ಗ ಜಾಸ್ತಿ ಇದ್ದರೂ ಶಾಲೆಯಲ್ಲಿ ಪರಿಶಿಷ್ಟರು ಇರಲಿಲ್ಲ. ಇಷ್ಟು ಜನರಿದ್ದ ಈ ಗ್ರಾಮದಲ್ಲಿ ಸಾಮಾಜಿಕ ಅಸಮಾನತೆ ಎಷ್ಟು ಕ್ರೂರವಾಗಿತ್ತು ಎನ್ನುವುದು ಇದರಿಂದ ಅರ್ಥವಾಗುತ್ತಿದೆ ಶಿಕ್ಷಣ ನಮ್ಮ ಹಕ್ಕು ಎಂಬ ಘೋಷಣೆಯ ನಂತರ ನಮ್ಮ ಜಿಲ್ಲೆ ಸಂಪೂರ್ಣ ಸಾಕ್ಷರತೆ ಎಂಬ ಘೋಷಣೆಯಾಗಿದೆ. ದೇವರು, ಧರ್ಮ, ದೇಶಪ್ರೇಮದ ಬಗ್ಗೆ ದೊಡ್ಡ ತತ್ವಜ್ಞಾನಿಗಳಂತೆ ಮಾತಾಡುವ ಮೂಲಭೂತವಾದಿಗಳನ್ನು, ಕೋಮುವಾದಿಗಳನ್ನು ಸೋಲಿಸಿ ಸಂವಿಧಾನದ ರಕ್ಷಣೆ ನಮ್ಮ ಅಜೆಂಡಾ ಆಗಿರಬೇಕು ಎಂದರು. “ದಲಿತ ಸಂಘರ್ಷ ಸಮಿತಿಯ ಹುಟ್ಟು, ಹೋರಾಟ ಹಾಗೂ ನಮ್ಮ ಮುಂದಿರುವ ಸವಾಲುಗಳು” ಎಂಬ ಬಗ್ಗೆ ಕೇಂದ್ರೀಯ ವಿ.ವಿ. ಕಲಬುರಗಿ ಇದರ ಪ್ರಾಧ್ಯಾಪಕ ಅಪ್ಪೆಗೆರೆ ಸೋಮಶೇಖರ್, ವಿಚಾರ ಮಂಥನ ಮಾಡಿ, “ಯಾವ ಸಮುದಾಯ ತನ್ನ ಪರಂಪರೆ, ಚರಿತ್ರೆಯನ್ನು ಮರೆಯುತ್ತದೆಯೋ ಅದು ತನ್ನ ಹಕ್ಕನ್ನು ಕಳೆದುಕೊಳ್ಳುತ್ತದೆ. ಸಮಾಜದ ಪ್ರಗತಿ ಸಾಧಿಸಬೇಕಿಂದಿದ್ದರೆ ಮಾನಸಿಕ ಗುಲಾಮಗಿರಿಯಿಂದ ಬಿಡುಗಡೆಗೊಳ್ಳಬೇಕು ಎಂಬ ಅಂಬೇಡ್ಕರ್ ಮಾತಿನಂತೆ ಎನ್ನುವುದು ನಮ್ಮ ನೆನಪಲ್ಲಿರಬೇಕು. ದಲಿತ ಸಂಘರ್ಷ ಸಮಿತಿಯ ಐವತ್ತು ವರ್ಷಗಳ ಹೋರಾಟದ ಕಿಚ್ಚು ಆರಬಾರದು. ದಲಿತ ಒರ ಹೋರಾಟಗಾರ ಪ್ರೊ. ಕೃಷ್ಣಪ್ಪರು ನನ್ನ ಗುಡಿಸಲಲ್ಲಿ ಹಣತೆ ಹಚ್ಟಿಟ್ಟಿದ್ದೇನೆ ಅದು ಆರದಂತೆ ನೋಡಿಕೊಳ್ಳಬೇಕು ಎಂದು ಕರೆ ಕೊಟ್ಟಿದ್ದರು. ಆದರೆ ಇದನ್ನು ಆರಿಸಲು ಮನುವಾದಿಗಳು ಮುಂದಾಗುತ್ತಿದ್ದಾರೆ. ಕೋಮುವಾದಿ, ಮನುವಾದಿ ಜಾತಿವಾದಿಗಳ ವಿರುದ್ಧದ ಹೋರಾಟ ಮಾಡಬೇಕಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಕೃಷ್ಣಾನಂದ ಡಿ., ಅಸಮಾನತೆಯ ಕೂಡಿದ ದೇಶದ ಸಂವಿಧಾನ ರಚಿಸುವುದು ಸುಲಭವಾಗಿರಲಿಲ್ಲ. ಜನಸಂಘ, ಆರೆಸ್ಸೆಸ್, ಮನುವಾದಿಗಳ ಪ್ರಬಲ ವಿರೋಧದ ನಡುವೆಯೂ ದೇಶಕ್ಕೆ ಸಂವಿಧಾನವನ್ನು ದೇಶಕ್ಕೆ ಅರ್ಪಿಸಿ ಇದೀಗ 75 ವರ್ಷಗಳಾಗಿದೆ. 74-75 ಬಿ. ಕೃಷ್ಣಪ್ಪ ದಲಿತ ಸಂಗರ್ಷ ಸಮಿತಿ ರಚಿಸಿ ದಲಿತರಿಗೆ ಧ್ವನಿಯಾದರು. ದಸಂಸ ಹಲವು ಹೋರಾಟಗಳ ಪಾಲ್ಗೊಂಡು ಯಶಸ್ವಿಯಾಗಿದೆ ಎಂದರು. ಅಧ್ಯಕ್ಷತೆಯನ್ನು ದ.ಸಂ.ಸ. ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ ವಹಿಸಿದ್ದರು. ಡಾ| ಬಿ.ಆರ್ ಅಂಬೇಡ್ಕರ್ ಹಾಗೂ ಪ್ರೊ.ಬಿ. ಕೃಷ್ಣಪ್ಪರವರ ಭಾವಚಿತ್ರಕ್ಕೆ ದಲಿತ ನೌಕರರ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹೆಚ್.ಡಿ. ಲೋಹಿತ್ ಮಾಲಾರ್ಪಣೆ ಮಾಡಿದರು. ಶಿವಸುಂದರ್ ವಿರಚಿತ ‘ಸಂವಿಧಾನ ವರ್ಸಸ್ ಸಂವಿಧಾನ ಅಭಿಯಾನ’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ದ.ಸಂ.ಸ. ಹಿರಿಯ ಮುಖಂಡರಾದ ಆನಂದ ಮಿತ್ತಬೈಲ್, ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕೃಷ್ಣಾನಂದ, ದ.ಸಂ.ಸ ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ದ.ಸಂ.ಸ. ರಾಜ್ಯ ಸಂಚಾಲಕ ಎಂ. ದೇವದಾಸ್, ಮಂಗಳೂರು ತಾಲೂಕು ಸಂಚಾಲಕರಾದ ರಾಘವೇಂದ್ರ ಎಸ್., ಅಣ್ಣು ಸಾಧನ ಮತ್ತಿತರರಿದ್ದರು.