3 ಸಾವಿರ ರೂಪಾಯಿ ಲಂಚ ಸ್ವೀಕಾರ – ಸಂಚಾರ ಠಾಣಾ ಇನ್ಸ್ಪೆಕ್ಟರ್ ಷರೀಫ್ ಹಾಗೂ ಸಿಬ್ಬಂದಿ ಪ್ರವೀಣ್ ಲೋಕಾಯುಕ್ತ ಬಲೆಗೆ

ಮಂಗಳೂರು: ಠಾಣೆಯಿಂದ ಸ್ಕೂಟರ್ ಬಿಡುಗಡೆಗೊಳಿಸಲು 3 ಸಾವಿರ ರೂಪಾಯಿ ಲಂಚ ಪಡೆದ ಹಿನ್ನಲೆಯಲ್ಲಿ ನಗರದ ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ಷರೀಫ್ ಹಾಗೂ ಸಿಬ್ಬಂದಿ ಪ್ರವೀಣ್ ನಾಯ್ಕನನ್ನು ಲೋಕಾಯುಕ್ತ ಪೊಲೀಸರು ಜನವರಿ 27ರಂದು ಸೋಮವಾರ ಬಂಧಿಸಿದ್ದಾರೆ.
ಪೊಲೀಸರ ವಶದಲ್ಲಿದ್ದ ಸ್ಕೂಟರ್ ಬಿಡುಗಡೆಗೊಳಿಸಲು ನ್ಯಾಯಾಲಯವು ಆದೇಶ ಮಾಡಿತ್ತು. ಈ ಸಲುವಾಗಿ ದೂರುದಾರರು ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ಷರೀಫ್ ಅವರನ್ನು ಭೇಟಿ ಮಾಡಿದ್ದರು. ಸ್ಕೂಟರ್ ಬಿಡುಗಡೆಗೊಳಿಸಲು 5 ಸಾವಿರ ರೂಪಾಯಿ ಲಂಚ ನೀಡುವಂತೆ ಷರೀಫ್ ಬೇಡಿಕೆ ಇಟ್ಟಿದ್ದರು. ಮೊತ್ತವನ್ನು ಕಡಿಮೆ ಮಾಡುವಂತೆ ಕೋರಿದಾಗ ಠಾಣಾ ಬರಹಗಾರರಾದ ನಾಗರತ್ನ ಅವರನ್ನು ಭೇಟಿ ಮಾಡಲು ತಿಳಿಸಿದ್ದರು. ಆಕೆಯ ಬಳಿ ಹೋದಾಗ, ಅವಾಚ್ಯವಾಗಿ ಬೈದು 3 ಸಾವಿರ ರೂಪಾಯಿ ಲಂಚ ನೀಡುವಂತೆ ಹೇಳಿದ್ದರು.
ಲಂಚ ನೀಡಲು ಮನಸ್ಸಿಲ್ಲದ ಕಾರಣ ದೂರುದಾರರು, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎಂದು ಲೋಕಾಯುಕ್ತ ಪೊಲೀಸರರು ತಿಳಿಸಿದ್ದಾರೆ. ‘ದೂರುದಾರ ವ್ಯಕ್ತಿಯಿಂದ ರೂಪಾಯಿ 3 ಸಾವಿರವನ್ನು ಪಡೆದ ತಕ್ಷಣ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ’ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ (ಪ್ರಭಾರ) ನಂದಿನಿ ಬಿ.ಎನ್., ಡಿವೈಎಸ್ಪಿ ಗಾನ ಪಿ. ಕುಮಾರ್, ಇನ್ಸ್ಪೆಕ್ಟರ್ ಅಮಾನುಲ್ಲಾ ಎ., ಚಂದ್ರಶೇಖರ್ ಕೆ.ಎನ್. ಮತ್ತು ಉಡುಪಿ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.