ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಸಂಪಾದಕ ಶಶಿ ಆರ್. ಬಂಡಿಮಾರ್ ಹೃದಯಾಘಾತದಿಂದ ನಿಧನ

ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಸಂಸ್ಥಾಪಕರು, ಶಶಿ ಆರ್. ಬಂಡಿಮಾರ್ ರವರು ನಾಗಾಲ್ಯಾಂಡ್ ನಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಟೈಮ್ಸ್ ಆಫ್ ಕುಡ್ಲ ಎನ್ನುವ ತುಳುಪತ್ರಿಕೆಯನ್ನು ಸಮಾಜಕ್ಕೆ ಸಮರ್ಪಿಸಿ, ತುಳು ನಾಡು ನುಡಿ ಸಂಸ್ಕೃತಿಯ ಹಿರಿಮೆಯನ್ನು ವಿಶ್ವದಾದ್ಯಂತ ಮೆರೆಸುವುದಕ್ಕಾಗಿ, ಬಪ್ಪನಾಡು ದುರ್ಗಾಪರಮೇಶ್ವರಿ ತಾಯಿಯ ಕ್ಷೇತ್ರದ ಆವರಣದಲ್ಲಿ ತುಳು ಸಮ್ಮೇಳನವನ್ನ ಗೈದು ಅಸಂಖ್ಯ ತುಳು ಸಾಧಕರನ್ನು ಗುರುತಿಸಿ ತುಳುವಿನ ಬಗ್ಗೆ ಸರಕಾರದ ಕಣ್ತೆರೆಸುವ ಪ್ರಯತ್ನ ಮಾಡಿದ್ದಾರೆ.
15 ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಇವರ ತುಳು ಪತ್ರಿಕೆ ಅಪಾರ ನಷ್ಟದಲ್ಲಿ ನಡೆಯುತ್ತಿದ್ದರು ಸಹ ಪತ್ರಿಕೋದ್ಯಮವನ್ನು ಬಲಿಷ್ಠ ಪಡಿಸುವುದಕ್ಕಾಗಿ, ದೂರದ ನಾಗಾಲ್ಯಾಂಡ್ ನಲ್ಲಿ ಫರ್ನಿಚರ್ ತಯಾರಿಸಿ ಅದರ ವ್ಯಾಪಾರ ಮೂಲಕ ಬಂದ ಸಂಪತ್ತನ್ನು ತುಳುಪತ್ರಿಕೆಗೆ ಭಾಷಾ ಸಾಹಿತ್ಯಕ್ಕೆ ವಿನಿಯೋಗ ಮಾಡುತ್ತಿದ್ದ ಬಂಡಿಮಾರ್ ರವರು ತುಳು ಭಾಷೆಗೆ ತನ್ನದೇ ರೀತಿಯಲ್ಲಿ ಕೊಡುಗೆಯನ್ನು ನೀಡಿದ್ದಾರೆ.
ಶಶಿ ಆರ್. ಬಂಡಿಮಾರ್ ರವರಿಗೆ ಜೈ ತುಲುನಾಡ್ (ರಿ.) ಸಂಘಟನೆ “ತುಳುವ ನೇಸರೆ” ಎನ್ನುವ ಬಿರುದು ಸೇರಿದಂತೆ ಅನೇಕ ಬಿರುದು ಪ್ರಶಸ್ತಿಗಳನ್ನು ಅನೇಕ ತುಳು ಸಂಘಟನೆಗಳು ನೀಡಿ ಗೌರವಿಸಿದ್ದವು. ಮೂಲಗಳ ಪ್ರಕಾರ ನಾಳೆ ಜನವರಿ 31ರಂದು ಶುಕ್ರವಾರ ಮಂಗಳೂರಿಗೆ ಏರಲಿಫ್ಟ್ ಮೂಲಕ ಶವ ತೆರಳಲಿದ್ದು ತನ್ನ ಹುಟ್ಟೂರಾದ ನಿರುಮಾರ್ಗದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.