ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಸಂತ ಎಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ಗಾಂಧಿ ಸ್ಮೃತಿ ಕಾರ್ಯಕ್ರಮ

ಪ್ರೊಫೆಸರ್ ಸ್ಟೀವನ್ ಕ್ವಾಡ್ರಸ್ ಪೆರ್ಮುದೆಯವರು ಮಹಾತ್ಮ ಗಾಂಧೀಜಿಯವರ ಕುರಿತು ಬರೆದ ಪುಸ್ತಕದ ಲೋಕಾರ್ಪಣೆ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಗಾಂಧಿ ಸ್ಮೃತಿ ಇಂದು ಜನವರಿ 30ರಂದು ಸಂತ ಎಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಸಂತ ಎಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ಗಾಂಧಿ ಸ್ಮೃತಿ ಹಾಗೂ ಪ್ರೊಫೆಸರ್ ಸ್ಟೀವನ್ ಕ್ವಾಡ್ರಸ್ ಪೆರ್ಮುದೆಯವರು ಮಹಾತ್ಮ ಗಾಂಧೀಜಿಯವರ ಕುರಿತು ಬರೆದ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ವಿಜೃಂಬಣೆಯಿಂದ ಜರುಗಿತು.
ಸಂತ ಎಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಅತೀ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ರವರು ಸಭೆಯ ಮುಖ್ಯ ಅತಿಥಿಗಳಾಗಿ ಮಾತನಾಡಿ ಗಾಂಧೀಜಿಯವರ ತತ್ವಗಳು ನಮ್ಮ ಜೀವನದ ಎಲ್ಲಾ ಹಂತಗಳಲ್ಲಿ ಮಾರ್ಗದರ್ಶನ ನೀಡುವಂತವು ಆಗಿವೆ ಎಂದು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾಕ್ಟರ್ ಗಣಪತಿ ಗೌಡರವರು ಸಭೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅವರು ಗಾಂಧೀಜಿಯವರ ಜೀವನ ಸಿದ್ಧಾಂತ ಮತ್ತು ಸಾಹಿತ್ಯದ ಕುರಿತು ವಿಸ್ತೃತವಾದ ಪ್ರಬಂಧ ಮಂಡನೆ ಮಾಡಿದರು. ಪುಸ್ತಕದ ತಯಾರಿಯಲ್ಲಿ ಧನಸಹಾಯ ಮಾಡಿದ ಮಿಲಗ್ರಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಾರ್ಜ್ ಎಸ್. ಫೆರ್ನಾಂಡಿಸ್ ರವರು ಮಾತನಾಡಿ ಗಾಂಧೀಜಿಯವರ ಜೀವನ ಆದರ್ಶಗಳು ನಮಗೆ ಸದಾ ಮಾರ್ಗದರ್ಶಿ ಎಂದು ತಿಳಿಸಿದರು.
ಡಾಕ್ಟರ್ ಆಲ್ವಿನ್ ಡೇಸಾರವರು ಪುಸ್ತಕದ ಪರಿಚಯವನ್ನು ಮಾಡಿಕೊಟ್ಟು ಈ ಪುಸ್ತಕದ ಬಳಕೆ ಹೆಚ್ಚೆಚ್ಚು ಆಗುವ ಅಗತ್ಯ ಇದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಜೋಕಿಮ್ ಸ್ಟ್ಯಾನಿ ಅಲ್ವಾರಿಸ್ ಮಾತನಾಡಿ ಇಂದಿನ ಸಮಾಜದಲ್ಲಿ ವಿಭಜನಕಾರಿ ಚಿಂತನೆಗಳು ಹೆಚ್ಚುತಿದ್ದು ನಮ್ಮ ದೇಶಿ ಐಕ್ಯದ ಮತ್ತು ಭ್ರಾತೃತ್ವದ ಭಾವನೆಗಳು ಹೆಚ್ಚಾಗಲು ಗಾಂಧೀಜಿಯವರ ಪ್ರೇರಣೆ ಅತ್ಯಗತ್ಯ ಎಂದು ತಿಳಿಸಿದರು.
ಅಕಾಡಮಿಯ ರಿಜಿಸ್ಟರ್ ರಾಜೇಶ್ ಜಿ. ಅವರು ಎಲ್ಲರಿಗೂ ಸ್ವಾಗತ ಕೋರಿದರು. ಪುಸ್ತಕದ ಕರ್ತೃವಾದ ಪ್ರೊಫೆಸರ್ ಸ್ಟೀವನ್ ಕ್ವಾಡ್ರಸ್ ರವರು ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು. ಕಾಲೇಜಿನ ಉಪನ್ಯಾಸಕರಾದ ಫ್ಲೋರಾ ಕಾಸ್ತೆಲಿನೊರವರು ಕಾರ್ಯಕ್ರಮ ಸಂಯೋಜಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಗೀತಗಾರರು ರಾಷ್ಟ್ರಗೀತೆ ಹಾಡಿದರು.