ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್(ರಿ.) ಕಡೇಶಿವಾಲಯ ಇದರ ವಾರ್ಷಿಕೋತ್ಸವ ಹಾಗೂ ಪದಗ್ರಹಣ ಸಮಾರಂಭ

ಮಕ್ಕಳಿಗೆ ಸಂಸ್ಕಾರ ಮನೆಯಿಂದಲೇ ಪ್ರಾರಂಭವಾಗಬೇಕು – ಬನ್ನಂಜೆ ಬಾಬು ಅಮೀನ್.
ಬಂಟ್ವಾಳ : ಮಕ್ಕಳಿಗೆ ಸಂಸ್ಕಾರ ಮನೆಯಿಂದಲೇ ಪ್ರಾರಂಭವಾಗಬೇಕು. ಉತ್ತಮ ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿಯನ್ನು ಕಲಿಸುವ ಅಗತ್ಯತೆ ಇದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳು ಜಾನಪದ ವಿದ್ವಾಂಸಕ ಬನ್ನಂಜೆ ಬಾಬು ಅಮೀನ್ ಹೇಳಿದರು.
ಅವರು ಫೆಬ್ರವರಿ 2ರಂದು ಆದಿತ್ಯವಾರ ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಪೆರ್ಲಾಪು ಸರಕಾರಿ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್(ರಿ.) ಕಡೇಶಿವಾಲಯ ಇದರ 8 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪದಗ್ರಹಣ -2025 ಕಾರ್ಯಕ್ರಮದಲ್ಲಿ ಗೌರವ ಅಭಿನಂದನೆಯನ್ನು ಸ್ವೀಕರಿಸಿ ಪ್ರಧಾನ ಭಾಷಣ ಮಾಡಿದರು. ಟ್ರಸ್ಟಿನ ಗೌರವಾಧ್ಯಕ್ಷರಾದ ಮೋಹನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬೆಳಿಗ್ಗೆ ಪುರೋಹಿತ ಅರುಣ್ ಶಾಂತಿ ನೇತೃತ್ವದಲ್ಲಿ ಶ್ರೀ ನಾರಾಯಣ ಗುರುಪೂಜಾ ಕಾರ್ಯಕ್ರಮ ನಡೆಯಿತು. ಬಳಿಕ ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಶಿಕ್ಷಕಿ ಸಂಧ್ಯಾ ವಿದ್ಯಾಧರ್ ಪೂಜಾರಿ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದ ಕೋಟಿ ಚೆನ್ನಯ ನೃತ್ಯ ರೂಪಕ ಪ್ರೇಕ್ಷಕರ ಗಮನಸೆಳೆಯಿತು.
ಅತಿಥಿಗಳು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಸಭಾ ಕಾರ್ಯಕ್ರಮ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮಿನ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಜಿಪ ಮುನ್ನೂರು ಮುರ್ತೆದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕೆ. ಸಂಜೀವ ಪೂಜಾರಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಬೆಂಗಳೂರು ಇದರ ಟೆಕ್ನಿಕಲ್ ಆಫೀಸರ್ ಶರತ್ ಕುಮಾರ್ ಕಂಪದ ಕೋಡಿ, ಗ್ರಾಮ ಲೆಕ್ಕಾಧಿಕಾರಿಯಾದ ಕೃತಿಕಾ ಕೊರತಿಗಿರಿ, ಅರಣ್ಯ ಇಲಾಖೆಯ ಗಸ್ತು ಅರಣ್ಯಪಾಲಕ ಹೇಮಂತ್ ಕುಮಾರ್ ಪಿ. ರವರುಗಳನ್ನು ಅಭಿನಂದಿಸಿ ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಟ್ರಸ್ಟ್ ವತಿಯಿಂದ ದತ್ತು ಪಡೆದ ವಿದ್ಯಾರ್ಥಿ ಆತ್ಮಿಕಾ ಹಾಗೂ ಮುಕ್ತಿ ದಾಮದಲ್ಲಿ ಕೈತೋಟ ರಚಿಸಲು ಲೋಕಯ್ಯ ಪಿ. ರವರಿಗೆ ಸಹಾಯಧನದ ಚೆಕ್ ಹಸ್ತಾಂತರಿಸಲಾಯಿತು
ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್(ರಿ.) ಕಡೇಶಿವಾಲಯ ಇದರ ನೂತನ ಅಧ್ಯಕ್ಷ ಯಶವಂತ್ ಸಾಲ್ಯಾನ್ ಪತ್ತು ಕೊಡಂಗೆ ನೇತೃತ್ವದ ತಂಡಕ್ಕೆ ಅಧಿಕಾರ ಹಸ್ತಾಂತರ ಹಾಗೂ ಪದಗ್ರಹಣ ಕಾರ್ಯಕ್ರಮ ಜರಗಿತು. ವೇದಿಕೆಯಲ್ಲಿ ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರು ಸ್ಥಾಪಕ ಅಧ್ಯಕ್ಷರಾದ ಲೋಕೇಶ್ ಕೋಡಿಕೆರೆ, ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ಮಹಿಳಾ ಸಂಘಟನಾ ನಿರ್ದೇಶಕಿ ವನಿತ ಕೃಷ್ಣಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಟ್ರಸ್ಟ್ ನ ಅಧ್ಯಕ್ಷ ವಿದ್ಯಾದರ ಪೂಜಾರಿ ಪ್ರಾಸ್ತಾವಿಕ ವರದಿಯೊಂದಿಗೆ ಸ್ವಾಗತಿಸಿ, ಸಂಧ್ಯಾ ವಿದ್ಯಾದರ, ಕಾವ್ಯ ಉಮೇಶ್, ಕೀರ್ತಿ, ಸನ್ಮಾನ ಪತ್ರ ವಾಚಿಸಿದರು, ಟ್ರಸ್ಟಿನ ಪ್ರಧಾನ ಸಂಚಾಲಕ ದಿನೇಶ್ ಪೂಜಾರಿ ಸುರ್ಲಾಜೆ ವಂದಿಸಿದರು. ದಿನೇಶ್ ಸುವರ್ಣ ರಾಯೀ ಕಾರ್ಯಕ್ರಮ ನಿರೂಪಿಸಿದರು.