ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ಹುಟ್ಟು ಹಬ್ಬದ ಅಮೃತ್ಸೋವ ಹಾಗೂ ಧರ್ಮಾಧ್ಯಕ್ಷ ದೀಕ್ಷೆಯ ಬೆಳ್ಳಿ ಹಬ್ಬ – ವಿಜೃಂಭಣೆಯಿಂದ ಆಚರಣೆ

ಉಡುಪಿ ಧರ್ಮಕ್ಷೇತ್ರದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋರವರಿಗೆ ಅವಳಿ ಸಂಭ್ರಮ
ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಇವರ 75 ವರ್ಷಗಳ ಹುಟ್ಟುಹಬ್ಬ ಹಾಗೂ ಧರ್ಮಾಧ್ಯಕ್ಷ ದೀಕ್ಷೆಯ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯು ಫೆಬ್ರವರಿ 9ರಂದು ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಮೈದಾನದಲ್ಲಿ ಅದ್ದೂರಿಯಾಗಿ ವಿಜೃಂಭಣೆಯಿಂದ ಜರುಗಿತು. ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ವಿವಿಧ ಧರ್ಮಕ್ಷೇತ್ರಗಳ ಧರ್ಮಾಧ್ಯಕ್ಷರು, ಧರ್ಮಗುರುಗಳು ಹಾಗೂ ಭಕ್ತಾದಿಗಳೊಂದಿಗೆ ಕೃತಜ್ಞತಾ ದಿವ್ಯ ಬಲಿಪೂಜೆ ಅರ್ಪಿಸಿದರು.
ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪ್ರಾನ್ಸಿಸ್ ಸೆರಾವೊ ತಮ್ಮ ಪ್ರವಚನದಲ್ಲಿ ಬಿಷಪ್ ಜೆರಾಲ್ಡ್ ರವರು ತಮ್ಮ ಸೇವೆಯಲ್ಲಿ ಯೇಸು ಕ್ರಿಸ್ತರಂತೆ ಒಳ್ಳೆಯ ಕುರುಬರಾಗಿ ತನ್ನ ಅಧೀನದಲ್ಲಿರುವ ಪ್ರಜೆಗಳಿಗೆ ನಾಯಕತ್ವ ನೀಡುವುದರೊಂದಿಗೆ ತನ್ನನ್ನೇ ಅರ್ಪಿಸಿಕೊಂಡಿದ್ದಾರೆ. ಯೇಸು ಸ್ವಾಮಿ ತೋರಿದ ದಾರಿಯಲ್ಲಿ ತಾನು ಸಾಗುವುದರೊಂದಿಗೆ ತನ್ನ ಧರ್ಮಕ್ಷೇತ್ರವನ್ನು ಮುನ್ನಡೆಸಿದ್ದಾರೆ. 25 ವರ್ಷಗಳ ಸುಧೀರ್ಘ ಧರ್ಮಾಧ್ಯಕ್ಷರಾಗಿ ಮಾತ್ರ ಉಳಿಯದೆ ಒರ್ವ ಒಳ್ಳೆಯ ಗುರುವಾಗಿ ತನ್ನ ಧರ್ಮಕ್ಷೇತ್ರದಲ್ಲಿ ಸೇವೆಯನ್ನು ನೀಡುವುದರೊಂದಿಗೆ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ದಿವ್ಯ ಬಲಿಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಭಾರತ ಮತ್ತು ನೇಪಾಳದ ರಾಯಭಾರಿ ಅತೀ ವಂದನೀಯ ಡಾ. ಲಿಯೊಪೊಲ್ಡೊ ಗಿರೆಲ್ಲಿ ತಮ್ಮ ಆಶೀರ್ವಚನ ಸಂದೇಶದಲ್ಲಿ ಬಿಷಪ್ ಜೆರಾಲ್ಡ್ ರವರ ಜೀವನ ಇಡೀ ಸಮಾಜಕ್ಕೆ ಒಂದು ಮಾದರಿಯಾಗಿದ್ದು ಅವರ ಆಧ್ಯಾತ್ಮಿಕ ಜೀವನದ ಮೂಲಕ ತನ್ನ ಪ್ರಜೆಗಳಿಗೆ ಯೇಸು ಕ್ರಿಸ್ತರ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಿದ್ದಾರೆ. ಅವರ ಸೇವಾ ಮನೋಭಾವದ ಕಾರ್ಯವೈಖರಿಯಿಂದಾಗಿ ಧರ್ಮಕ್ಷೇತ್ರದಲ್ಲಿ ಪಾಲನಾ ಯೋಜನೆಯನ್ನು ಜಾರಿಗೆಗೊಳಿಸಿರುವುದು ದೇಶದ ಇತರ ಧರ್ಮಕ್ಷೇತ್ರಗಳಿಗೂ ಮಾದರಿಯಾಗಿದೆ. ಇವರ ಸೇವೆ ಇನ್ನಷ್ಟು ಮುಂದುವರೆಯಲಿ ಎಂದರು.
ಕನ್ನಡದಲ್ಲಿ ನಮಸ್ತೆ ಎಂದು ಹೇಳುವ ಮೂಲಕ ತಮ್ಮ ಮಾತನ್ನು ಆರಂಭಿಸಿದ ಅತೀ ವಂದನೀಯ ಡಾ. ಗಿರೆಲ್ಲಿ ರವರು ಉಡುಪಿ ಜಿಲ್ಲೆ ಮೀನುಗಾರಿಕೆಗೆ ಹೆಸರುವಾಸಿಯಾಗಿದ್ದು ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿದಾಗ ಇಲ್ಲಿನ ವಾತಾವರಣ ನನಗೆ ಅತೀವ ಸಂತಸ ತಂದಿತು. ಉಡುಪಿಯ ಧರ್ಮಕ್ಷೇತ್ರದಲ್ಲಿ ನಡೆಯುತ್ತಿರುವ ಸಾಮಾಜಿಕ ಸೇವೆಯ ಮೂಲಕ ಎಲ್ಲಾ ಸಮುದಾಯದ ಜನರನ್ನು ಆಕರ್ಷಿಸುವ ಕೆಲಸ ಮಾಡಿರುವುದು ಅಭಿನಂದಾನರ್ಹ ಸಂಗತಿಯಾಗಿದೆ. ಜುಬಿಲಿ ವರ್ಷದಲ್ಲಿ ಕ್ರೈಸ್ತ ಬಾಂಧವರಿದ್ದು ಪ್ರತಿಯೊಬ್ಬರು ಭರವಸೆಯ ಯಾತ್ರಿಕರಾಗಿ ಯೇಸುವಿನ ನೈಜ ಶಿಷ್ಯರಾಗಿ ಬದುಕೋಣ ಎನ್ನುವರೊಂದಿಗೆ ಕೊಂಕಣಿಯಲ್ಲಿ ದೇವ್ ಬರೆಂ ಕರುಂ ಎನ್ನುವ ಮೂಲಕ ತಮ್ಮ ಅಭಿನಂದನಾ ಮಾತುಗಳನ್ನು ಕೊನೆಗೊಳಿಸಿದರು.
ಬೆಂಗಳೂರು ಮಹಾ ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಅತೀ ವಂದನೀಯ ಡಾ. ಪೀಟರ್ ಮಚಾದೊ ಮಾತನಾಡಿ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬಿಷಪ್ ಜೆರಾಲ್ಡ್ ರವರು ಒರ್ವ ಜನ ಸ್ನೇಹಿ ಧರ್ಮಗುರುವಾಗಿದ್ದು ಜನರ ಅಗತ್ಯತೆಗಳನ್ನು ತಿಳಿದು ಅದನ್ನು ಜಾರಿಗೆ ಮಾಡುವ ಉನ್ನತ ಗುಣವನ್ನು ಹೊಂದಿದ್ದಾರೆ. ಬಿಷಪ್ ಜೆರಾಲ್ಡ್ ಅವರು ಸಂಘಟನಾ ಚತುರರಾಗಿದ್ದು ಯಾವುದೇ ಕಾರ್ಯಕ್ರಮವನ್ನು ಮಾಡುವುದಿದ್ದರೆ ಅದನ್ನು ಶಿಸ್ತುಬದ್ಧವಾಗಿ ಮಾಡುವ ಉನ್ನತ ಕಲೆಯುನ್ನು ಹೊಂದಿರುವುದು ಅವರ ವಿಶೇಷಗುಣವಾಗಿದೆ. ಅವರ ಸಂಘಟನಾತ್ಮಕ ಹಾಗೂ ಶಿಸ್ತು ಬದ್ದ ಕಾರ್ಯವೈಖರಿಯನ್ನು ಇತರ ಧರ್ಮಕ್ಷೇತ್ರಗಳು ಕೂಡ ಕೊಂಡಾಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಧರ್ಮಕ್ಷೇತ್ರದ ವತಿಯಿಂದ ಅತೀ ವಂದನೀಯ ಡಾ. ಲಿಯೊಪೊಲ್ಡೊ ಗಿರೆಲ್ಲಿ ರವರನ್ನು ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಸನ್ಮಾನಿಸಿದರು. ಉಡುಪಿ ಧರ್ಮಕ್ಷೇತ್ರದ ಎಲ್ಲಾ ಆಯೋಗಗಳ ವತಿಯಿಂದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ರವರು ತಮ್ಮ ಜೀವನದಲ್ಲಿ ಸಹಕಾರ ನೀಡಿದ ಸರ್ವರಿಗೂ ಧನ್ಯವಾದವಿತ್ತರು. ತನಗೆ ನೀಡಿದ ಜೀವನದಲ್ಲಿ ದೇವರು ಮಾಡಿದ ಎಲ್ಲಾ ಉತ್ತಮ ಕಾರ್ಯಗಳಿಗೆ ಕೃತಜ್ಞತಾಪೂರ್ವಕವಾಗಿ ಸ್ಮರಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಮಹಾ ಧರ್ಮಪ್ರಾಂತ್ಯದ ನಿವೃತ್ತ ಮಹಾ ಧರ್ಮಾಧ್ಯಕ್ಷರು ಮತ್ತು ಪ್ರಸ್ತುತ ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಅತೀ ವಂದನೀಯ ಡಾ. ಬರ್ನಾಡ್ ಮೊರಾಸ್, ಆಗ್ರಾ ಮಹಾ ಧರ್ಮಪ್ರಾಂತ್ಯದ ನಿವೃತ್ತ ಆರ್ಚ್ ಬಿಷಪ್ ಅತೀ ವಂದನೀಯ ಡಾ. ಆಲ್ಬರ್ಟ್ ಡಿಸೋಜಾ, ಭದ್ರಾವತಿ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಜೊಸೇಫ್ ಅರುಮಚಾಡತ್, ಬೆಳಗಾವಿ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಡೆರಿಕ್ ಫೆರ್ನಾಂಡಿಸ್, ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಹೆನ್ರಿ ಡಿಸೋಜಾ, ಬೆಳ್ತಂಗಡಿ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಲೊರೆನ್ಸ್ ಮುಕ್ಕುಝಿ, ಚಿಕ್ಕಮಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ತೋಮಸಪ್ಪ ಅಂತೋನಿ ಸ್ವಾಮಿ, ಗುಲ್ಬರ್ಗಾ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ರೊಬರ್ಟ್ ಎಮ್ ಮಿರಾಂದಾ, ಕಾರವಾರ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ದುಮಿಂಗ್ ಡಯಾಸ್, ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ, ಪುತ್ತೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಗೀವರ್ಗಿಸ್ ಮಾರ್ ಮಕಾರಿಯೋಸ್ ಕಲಾಯಿಲ್, ಶಿವಮೊಗ್ಗ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪ್ರಾನ್ಸಿಸ್ ಸೆರಾವೊ, ಲಕ್ನೊ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಜೆರಾಲ್ಡ್ ಜೋನ್ ಮಥಾಯಸ್, ಬರಾಯಿಪುರ್ ಧರ್ಮಕ್ಷೇತ್ರದ ನಿವೃತ್ತ ಬಿಷಪ್ ಅತೀ ವಂದನೀಯ ಡಾ. ಸಾಲ್ವದೊರ್ ಲೋಬೊ, ಅಲಹಾಬಾದ್ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಲೂಯಿಸ್ ಮಸ್ಕರೇನ್ಹಸ್, ಬೆಂಗಳೂರು ಮಹಾ ಧರ್ಮಪ್ರಾಂತ್ಯದ ಸಹಾಯಕ ಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಜೊಸೇಫ್ ಸುಶಿನಾಥನ್, ಮೈಸೂರು ಧರ್ಮಕ್ಷೇತ್ರದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಆಲ್ಫ್ರೇಡ್ ಮೆಂಡೊನ್ಸಾ, ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಮ್ಯಾಕ್ಷಿಮ್ ಎಲ್. ನೊರೊನ್ಹಾ, ಕುಲಪತಿಗಳಾದ ಅತೀ ವಂದನೀಯ ಡಾ. ರೋಶನ್ ಡಿಸೋಜಾ, ಅತೀ ವಂದನೀಯ ಜೊರ್ಜ್ ವಿಕ್ಟರ್ ಡಿಸೋಜಾ, ಉಡುಪಿ ಧರ್ಮಕ್ಷೇತ್ರದ ಸಲಹೆಗಾರರಾದ ಅತೀ ವಂದನೀಯ ಚಾರ್ಲ್ಸ್ ಮಿನೇಜಸ್, ಅತೀ ವಂದನೀಯ ಆಲ್ಬನ್ ಡಿಸೋಜಾ, ಅತೀ ವಂದನೀಯ ರೆಜಿನಾಲ್ಡ್ ಪಿಂಟೊ, ಅತೀ ವಂದನೀಯ ಜೋರ್ಜ್ ಡಿಸೋಜಾ, ಅತೀ ವಂದನೀಯ ಡಾ. ಲೆಸ್ಲಿ ಡಿಸೋಜಾ, ಅತೀ ವಂದನೀಯ ಅನಿಲ್ ಡಿಸೋಜಾ, ಅತೀ ವಂದನೀಯ ಪಾವ್ಲ್ ರೇಗೊ, ಅತೀ ವಂದನೀಯ ಡೆನಿಸ್ ಡೆಸಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ಉಡುಪಿ ಧರ್ಮಕ್ಷೇತ್ರದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಧರ್ಮಕ್ಷೇತ್ರದ ಪಾಲನಾ ಮಂಡಳಿಯ ಕಾರ್ಯದರ್ಶಿ ಲೆಸ್ಲಿ ಅರೋಝಾ ವಂದಿಸಿದರು. ಧರ್ಮಕ್ಷೇತ್ರದ ಹಣಕಾಸು ಸಮಿತಿ ಸದಸ್ಯ ಪ್ರಿತೇಶ್ ಡೆಸಾ ಹಾಗೂ ಜೆನಿಶಾ ಕೆಮ್ಮಣ್ಣು ಕಾರ್ಯಕ್ರಮ ನಿರೂಪಿಸಿದರು.