April 27, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಹೆರಿಗೆ ಬಳಿಕ ಬಾಣಂತಿ ಹೊಟ್ಟೆಯೊಳಗೆ ಬಾಕಿಯಾದ ಬಟ್ಟೆ – ವೈದ್ಯರ ನಿರ್ಲಕ್ಷ್ಯಕ್ಕೆ ಪತಿ ಆಕ್ರೋಶ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಸಿಝೇರಿಯನ್ ಹೆರಿಗೆಯಾದ ಬಳಿಕ ಬಾಣಂತಿಯ ಹೊಟ್ಟೆಯೊಳಗೆ ಬಟ್ಟೆಯ ತುಂಡು ಬಾಕಿಯಾಗಿದ್ದು, ಇದೀಗ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಬಾಣಂತಿಯ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಬಾಣಂತಿ ಮಹಿಳೆ ಶರಣ್ಯಾ ಲಕ್ಷ್ಮೀ ಅವರ ಪತಿ ಗಗನ್ ದೀಪ್ ಬಿ. ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಲು ಆಗ್ರಹಿಸಿದ್ದಾರೆ.

ಹೆರಿಗೆ ಸಂದರ್ಭ ಪುತ್ತೂರಿನ ಸಿಟಿ ಆಸ್ಪತ್ರೆಯ ವೈದ್ಯ ಡಾ. ಅನಿಲ್‌ರವರ ನಿರ್ಲಕ್ಷ್ಯದಿಂದ ಹೊಟ್ಟೆಯಲ್ಲಿ ಬಟ್ಟೆ ಬಾಕಿಯಾಗಿದ್ದು, ಈ ವಿಚಾರ ಅವರ ಗಮನಕ್ಕೆ ಬಂದ ಬಳಿಕವೂ ನಿರ್ಲಕ್ಷ್ಯ ಮುಂದುವರಿಸಿದ್ದಾರೆ. ಇದರಿಂದಾಗಿ ಪತ್ನಿಗೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಿದೆ ಎಂದು ಪತಿ ಗಗನ್ ದೀಪ್ ಆರೋಪಿಸಿದ್ದಾರೆ.

2024ರ ನವಂಬರ್ 27ರಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ 33 ವರ್ಷ ಪ್ರಾಯದ ಶರಣ್ಯಾ ಲಕ್ಷ್ಮೀ ಬಿ. ಎಂಬವರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗಿತ್ತು. ಡಿಸೆಂಬರ್ 2ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದಾದ ಬಳಿಕ ವಿಪರೀತ ಜ್ವರ ಬಂದಿತ್ತು. ಇದನ್ನು ಹೆರಿಗೆ ಮಾಡಿಸಿದ ವೈದ್ಯರ ಗಮನಕ್ಕೆ ತಂದಾಗ ಜ್ವರದ ಔಷಧಿ ನೀಡಿದ್ದರು. ಕೆಲವು ದಿನಗಳ ಬಳಿಕ ಮಗುವನ್ನು ಹಾಸಿಗೆಯಿಂದ ಎತ್ತಲಾಗದ ಮತ್ತು ನಿಲ್ಲಲಾಗದ ಸ್ಥಿತಿ ನಿರ್ಮಾಣವಾಗಿದ್ದು ಬೇರೆ ವೈದ್ಯರಲ್ಲಿ ಪರೀಕ್ಷೆ ನಡೆಸಿದ ಬಳಿಕ ಬಟ್ಟೆ ಬಾಕಿ ಆಗಿರುವುದು ತಿಳಿದು ಬಂದಿದೆ. ಬಳಿಕ ಜನವರಿ 25ರಂದು ಪುತ್ತೂರಿನ ಆಸ್ಪತ್ರೆಯಲ್ಲಿ ಡಾ. ವಿವೇಕ್ ಕಜೆ ನೇತೃತ್ವದಲ್ಲಿ ಸುಮಾರು 4 ತಾಸಿನ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿ ಬಾಕಿಯಾಗಿದ್ದ ಬಟ್ಟೆಯನ್ನು ತೆರವು ಮಾಡಲಾಗಿದೆ. ಇದರಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗಿದ್ದಲ್ಲದೇ, ಹಣವೂ ಖರ್ಚಾಗಿದೆ ಎಂದು ಅವರು ಆರೋಪಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯದ ಬಗ್ಗೆ ಪಿ.ಜಿ. ಪೋರ್ಟಲ್‌ನಲ್ಲಿ ಮೊದಲು ದೂರು ದಾಖಲಿಸಲಾಗಿದೆ. ಫೆಬ್ರವರಿ 22ರಂದು ಜಿಲ್ಲಾ ಆರೋಗ್ಯಧಿಕಾರಿಗಳಿಗೆ ವೈದ್ಯರ ನಿರ್ಲಕ್ಷ್ಯದ ಬಗ್ಗೆ ದೂರು ನೀಡಲಾಗಿದೆ. ಫೆಬ್ರವರಿ 23ರಂದು ಪುತ್ತೂರು ಸಿಟಿ ಆಸ್ಪತ್ರೆಯ ಡಾ. ಅನಿಲ್ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಡಿಯನ್ ಮೆಡಿಕಲ್ ಬೋರ್ಡ್ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲೂ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗಗನ್ ದೀಪ್, ಸಂಬಂಧಿಕರಾದ ಶಿವಪ್ರಸಾದ್ ಸರಳಿ ಮತ್ತು ಶಿವಕುಮಾರ್ ಉಪಸ್ಥಿತರಿದ್ದರು.

You may also like

News

‘ಪಿದಾಯಿ’ ತುಳು ಚಿತ್ರ ಮೇ 9ಕ್ಕೆ ಬೆಳ್ಳಿತೆರೆಗೆ

ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ರವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ
News

ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ MCC ಬ್ಯಾಂಕ್ ವತಿಯಿಂದ ಗೌರವ ನಮನ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ MCC ಬ್ಯಾಂಕ್ ಇದರ ಆಡಳಿತ ಕಛೇರಿಯಲ್ಲಿ ಕಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಎಪ್ರಿಲ್ 24ರಂದು

You cannot copy content of this page