ಕಾರು ಡಿಕ್ಕಿ – ವೃದ್ಧೆ ಸಾವು

ಮಗನ ಅಂಗಡಿ ಎದುರು ಕುಳಿತಲ್ಲಿಗೇ ಬಂದು ಜೀವತೆಗೆದ ಜವರಾಯ
ಬಂಟ್ವಾಳ: ಮಗನ ಅಂಗಡಿ ಹೊರಗೆ ಕುಳಿತುಕೊಂಡಿದ್ದ ವೃದ್ದೆಯೋರ್ವರಿಗೆ ಕಾರೊಂದು ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಪಾಲೆದಮರ ಎಂಬಲ್ಲಿ ಫೆಬ್ರವರಿ 23ರಂದು ನಡೆದಿದೆ.
ವಾಮದಪದವು ನಿವಾಸಿ 91 ವರ್ಷ ಪ್ರಾಯದ ಸುಮತಿ ಎಂಬವರು ಮೃತಪಟ್ಟ ಮಹಿಳೆಯಾಗಿದ್ದಾರೆ. ಸುಮತಿಯವರು ತನ್ನ ಮಗನಾದ ಮಂಜುನಾಥ್ ರವರ ದಿನಸಿ ಅಂಗಡಿಯ ಹೊರಗಡೆ ಕುರ್ಚಿಯಲ್ಲಿ ಕುಳಿತುಕೊಂಡಿದ್ದರು. ಫೆಬ್ರವರಿ 23 ಆದಿತ್ಯವಾರದಂದು ಸುಮಾರು 6.45ರ ಸಮಯದಲ್ಲಿ ಬಂಟ್ವಾಳ ಮಣಿಹಳ್ಳ ಕಡೆಯಿಂದ ವಾಮದಪದವು ಕಡೆಗೆ ಕಾರು ಚಲಾಯಿಸಿಕೊಂಡು ಬಂದ ಶೋಭಾ ಅವರು ನಿಯಂತ್ರಣ ಸಾಧಿಸಲು ಸಾಧ್ಯವಾಗದೆ ಮಂಜುನಾಥ್ ರವರ ಅಂಗಡಿಯೊಳಗೆ ನುಗ್ಗಿಸಿದರು. ಈ ವೇಳೆ ಅಂಗಡಿಗೆ ಬಂದಿದ್ದ ಗ್ರಾಹಕರಾದ ಲೂಯಿಸ್ ಡಿಕೋಸ್ತ ಎಂಬವರಿಗೆ ಡಿಕ್ಕಿ ಹೊಡೆದ ಕಾರು ಸುಮತಿಯವರಿಗೂ ಡಿಕ್ಕಿಹೊಡೆದಿದೆ.
ತೀವ್ರವಾಗಿ ಗಾಯಗೊಂಡಿದ್ದ ವೃದ್ದೆಯನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರಾತ್ರಿ ಸುಮಾರು 11.45ರ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಇದೇ ವೇಳೆಯಲ್ಲಿ KA19EJ9797 ನೇ ದ್ವಿಚಕ್ರ ವಾಹನಕ್ಕೂ ಹಾನಿಯಾಗಿದ್ದು ಮುಂಭಾಗ ಜಖಂಗೊಂಡಿರುತ್ತದೆ.
ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಅಪಘಾತ ನಡೆಯುವ ದೃಶ್ಯ ಸಿ.ಸಿ.ಟಿ.ವಿ ಯಲ್ಲಿ ಸೆರೆಯಾಗಿದ್ದು, ಇದೀಗ ಪುಲ್ ವೈರಲ್ ಆಗಿದೆ. ಕಾರು ವೇಗವಾಗಿ ಬಂದು ಅಂಗಡಿಯೊಳಗೆ ನುಗ್ಗಿದ ದೃಶ್ಯ ಹಾಗೂ ಅಂಗಡಿಯ ಹೊರಗಡೆ ಕುಳಿತುಕೊಂಡಿದ್ದ ಅಜ್ಜಿಗೆ ಡಿಕ್ಕಿ ಹೊಡೆಯುವ ದೃಶ್ಯ ಕೂಡ ಇದರಲ್ಲಿ ಸೆರೆಯಾಗಿದೆ. ಗಣೇಶ್ ಮಲ್ಯ ಎಂಬವರ ದೂರಿನಂತೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.