ಫೆಬ್ರವರಿ 28ರಂದು ಅವಳಿ ಸಂಭ್ರಮಾಚರಣೆ – ದೇವರ ಸೇವಕ ರೈಮಂಡ್ ಫ್ರಾನ್ಸಿಸ್ ಕಾಮಿಲಸ್ ಮಸ್ಕರೇನ್ಹಸ್ರವರ 150ನೇ ಜನ್ಮ ಮಹೋತ್ಸವ ಮತ್ತು 125ನೇ ಗುರುದೀಕ್ಷಾ ಮಹೋತ್ಸವ

ಮಂಗಳೂರು ಸೈಂಟ್ ಸೆಬಾಸ್ಟಿಯನ್ ಬೆಂದೂರ್ ಚರ್ಚ್ ನಲ್ಲಿ ಆದ್ದೂರಿ ಸಂಭ್ರಮ
ಅತೀ ವಂದನೀಯ ಡಾ. ಫಿಲಿಪ್ ನೆರಿ ಕಾರ್ಡಿನಲ್ ಫೆರಾವೊ ಹಾಗೂ ಇತರ ಧರ್ಮಾಧ್ಯಕ್ಷರಿಂದ ಸಂಭ್ರಮದ ಬಲಿಪೂಜೆ
ಮಂಗಳೂರು ಬೆಥನಿ ಸಂಸ್ಥೆಯ ಸಂಸ್ಥಾಪಕ ದೇವರ ಸೇವಕ ರೈಮಂಡ್ ಫ್ರಾನ್ಸಿಸ್ ಕಮಿಲಸ್ ಮಸ್ಕರೇನ್ಹಸ್ ಅವರ 150ನೇ ಜನ್ಮಮಹೋತ್ಸವ ಮತ್ತು 125ನೇ ಗುರುದೀಕ್ಷಾ ಮಹೋತ್ಸವವನ್ನು ಫೆಬ್ರವರಿ 28ರಂದು ಶುಕ್ರವಾರ ಸಾಯಂಕಾಲ 4.30ಕ್ಕೆ ನಗರದ ಬೆಂದೂರ್ ಸಂತ ಸೆಬಾಸ್ಟಿಯನ್ ಚರ್ಚ್ ನಲ್ಲಿ ಭಕ್ತಿಪೂರ್ಣ ಮತ್ತು ಸಂತಸದ ಸಂಭ್ರದೊಂದಿಗೆ ಜರುಗಲಿದೆ ಎಂದು ಮಂಗಳೂರು ಬೆಥನಿ ಸಂಸ್ಥೆಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪವಿತ್ರ ಬಲಿಪೂಜೆ ಮತ್ತು ಸಭಾ ಕಾರ್ಯಕ್ರಮ:
ಈ ದಿವ್ಯ ಮಹೋತ್ಸವದ ಬಲಿಪೂಜೆಯನ್ನು ಗೋವಾ ಮತ್ತು ಡಾಮನ್ ಮಹಾ ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಗೌರವಾನ್ವಿತ ಅತೀ ವಂದನೀಯ ಡಾ. ಫಿಲಿಪ್ ನೆರಿ ಕಾರ್ಡಿನಲ್ ಫೆರಾವೊರವರು ನೆರವೇರಿಸಲಿದ್ದಾರೆ.
ದಿವ್ಯ ಬಲಿಪೂಜೆಯ ಬಳಿಕ ಸಂಜೆ 6:15ಕ್ಕೆ ಬೆಂದೂರು ಪ್ಲಾಟಿನಂ ಜ್ಯುಬಿಲಿ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವು ನಡೆಯಲಿರುವುದು. ಈ ಮಹತ್ವಪೂರ್ಣ ಸುಸಂದರ್ಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ವಹಿಸಲಿದ್ದಾರೆ.
ಅತಿಥಿಗಳಾಗಿ ಉಡುಪಿ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ, ಶಿವಮೊಗ್ಗ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಫ್ರಾನ್ಸಿಸ್ ಸೆರಾವೋ, ಪುತ್ತೂರು ಸಿರೋ ಮಲಂಕರ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಗಿವರ್ಗೀಸ್ ಮಾರ್ ಮಕಾರಿಯೋಸ್, ಮಂಗಳೂರು ಧರ್ಮಕ್ಷೇತ್ರದ ವಿಶ್ರಾಂತ ಬಿಷಪ್ ಅತೀ ವಂದನೀಯ ಡಾ. ಅಲೋಸಿಯಸ್ ಪಾವ್ಲ್ ಡಿಸೋಜ ಇವರೊಂದಿಗೆ ಶ್ರೇಷ್ಠಗುರುಗಳು, ಧರ್ಮಗುರುಗಳು, ಅನೇಕ ಧಾರ್ಮಿಕ ಸಹೋದರ ಸಹೋದರಿಯರು ಹಾಗೂ ಭಕ್ತಾದಿಗಳು ಈ ಭವ್ಯ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಪ್ರೀತಿ ಮತ್ತು ಸೇವೆಯ ಪರಂಪರೆ
1875ರ ಜನವರಿ 23ರಂದು ಕರ್ನಾಟಕದ ಶಿವಮೊಗ್ಗದಲ್ಲಿ ಜನಿಸಿದ ದೇವರ ಸೇವಕ ರೈಮಂಡ್ ಮಸ್ಕರೇನ್ಹಸ್ ಅವರ ಜೀವನದ ಧ್ಯೇಯ ಸ್ಪಷ್ಟ ಮತ್ತು ಸರಳ. ಸಮಾಜದ ಬಡ, ದೀನ ಮತ್ತು ನಿರಾಶ್ರಿತರಿಗೆ ಪ್ರೀತಿಯ ಸೇವೆ ನೀಡುವುದು, ಅದರಲ್ಲೂ ವಿಶೇಷವಾಗಿ ಯುವ ಹುಡುಗಿಯರ ಶಿಕ್ಷಣಕ್ಕಾಗಿ ಮುಡಿಪಾಗಿಟ್ಟ ಆವರ ಜೀವನ, ಇಂದು ಬೆಥನಿ ಸಂಸ್ಥೆಯ ಎಲ್ಲಾ ಧರ್ಮಭಗಿನಿಯರ ಭಕ್ತಿ ಭಾವದ ಸೇವಾಜೀವನಕ್ಕೆ ಪ್ರೇರಣೆ.
ಭಕ್ತಿಪೂರ್ಣ ಕುಟುಂಬದಲ್ಲಿ ಬೆಳೆದ ಫಾದರ್ ಮಸ್ಕರೇನ್ಹಸ್, 16ನೇ ವಯಸ್ಸಿಗೆ ಮಂಗಳೂರಿನ ಸಂತ ಜೋಸೆಫ್ ಅಂತರ-ಧರ್ಮಕ್ಷೇತ್ರದ ಗುರುಮಠಕ್ಕೆ ಪ್ರವೇಶಿಸಿದರು. 1900ರ ಮಾರ್ಚ್ 4ರಂದು ಅವರು ಧರ್ಮಗುರುಗಳಾಗಿ ಮಂಗಳೂರು ಧರ್ಮಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಮುಂದಾದರು.
ಫಾದರ್ ಮಸ್ಕರೇನ್ಹಸ್ ಅವರು ದೇವರ ಮತ್ತು ಧರ್ಮಸಭೆಯ ಮೇಲಿನ ಅಪಾರ ಪ್ರೀತಿಯು ಅವರನ್ನು ಮಂಗಳೂರಿನಲ್ಲಿ ಕಿರಿಯ ಪುಷ್ಪದ ಸಹೋದರಿಯರ ಬೆಥನಿ ಸಂಸ್ಥೆಯ ಸ್ಥಾಪನೆಗೆ ಪ್ರೇರೇಪಿಸಿತು. ಈ ಸಂಸ್ಥೆ ಬಡವರಿಗೆ ಮತ್ತು ಸಂತ್ರಸ್ತರಿಗೆ ಸೇವೆ ಸಲ್ಲಿಸುವ ಬಲವಾದ ಸಂಕಲ್ಪವನ್ನು ಹೊಂದಿದೆ. ಬೆಥನಿ ಸಂಸ್ಥೆಯನ್ನು ಫಾದರ್ ಮಸ್ಕರೇನ್ಹಸ್ ಅವರು “ದಿವ್ಯ ಕೃಪೆಯ ಜಲದಿಂದ” ನಯವಾಗಿ ಪೋಷಿತಗೊಂಡ ಹಾಗೂ “ಯೇಸು ಮತ್ತು ಮಾತೆ ಮರಿಯಮ್ಮನ ಪವಿತ್ರ ಹೃದಯಗಳಲ್ಲಿ ನೆಡಲಾದ” “ಒಂದು ತೋಟ” ಎಂದು ಬಣ್ಣಿಸುತ್ತಿದ್ದರು.
ಇಂದು ಬೆಥನಿ ಸಂಸ್ಥೆಯು ಮಹತ್ತರವಾದ ‘ಬೆಥನಿ ಮರವಾಗಿ ಬೆಳೆದು’ 194 ಶಾಖೆಗಳೊಂದಿಗೆ, 1,363 ಸಹೋದರಿಯರನ್ನು ಒಳಗೊಂಡಿದ್ದು ವಿಶ್ವದಾದ್ಯಂತ ಸೇವೆ ಸಲ್ಲಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿಲು
- 📞 ಭಗಿನಿ ಮರಿಯೋಲಾ ಬಿಎಸ್. :
+91 95918 85468 [email protected]
- 📞 ಮಾಧ್ಯಮ ಸಹಕಾರ: ಕೆನರಾ ಕಮ್ಯುನಿಕೇಷನ್ ಸೆಂಟರ್:
+91 82779 37790 [email protected]
ಇವರನ್ನು ಬೆಥನಿ ಸಂಸ್ಥೆಯ ಮುಖ್ಯಸ್ಥರು ವಿನಂತಿಸಿಕೊಂಡಿದ್ದಾರೆ.