ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ‘ಆಬೊಲಿಂ’ ಕೊಂಕಣಿ ಮಹಿಳಾ ಕವಿಗೋಷ್ಠಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಕಾಡೆಮಿ ಸಭಾಂಗಣದಲ್ಲಿ ಮಾರ್ಚ್ 7ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ‘ಆಬೊಲಿಂ’ ಶೀರ್ಷಿಕೆಯಡಿ ಮಹಿಳಾ ಕವಿಗೋಷ್ಠಿಯನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಶ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಇವರು ವಹಿಸಿ, ನೆರೆದಿರುವ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅವಿರತ ಸಾಧನೆಗಾಗಿ ಡಾ. ಗ್ರೇಸ್ ನೊರೊನ್ಹಾ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಇವರು ‘ಈ ಗೌರವವು ನನಗೆ ಖುಶಿ ಕೊಟ್ಟಿದೆ. ಶಿಕ್ಷಣ ಕ್ಷೇತ್ರದಲ್ಲಿ ನನ್ನ ಜವಾಬ್ದಾರಿಯು ಹೆಚ್ಚಾಗಿದೆ. ನನ್ನ ಸಾಧನೆಯನ್ನು ಪರಿಗಣಿಸಿ, ನನ್ನನ್ನು ಸನ್ಮಾನಿಸಿದ್ದಕ್ಕಾಗಿ ಕೊಂಕಣಿ ಅಕಾಡೆಮಿಗೆ ನಾನು ಚಿರಋಣಿ’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರಿನ ರತ್ನಾಸ್ ವೈನ್ ಗೇಟ್ ಮಾಲಕಿ, ನಟಿ ಹಾಗೂ ಸಮಾಜ ಸೇವಕಿಯಾದ ಸುಚಿತ್ರಾ ನಾಯಕ್ ಇವರು ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಎಲ್ಲಾ ದಿನವೂ ಸಂತೋಷದಿಂದ ಮಹಿಳಾ ದಿನಾಚರಣೆಯನ್ನು ಆಚರಿಸಬೇಕು. ಮಹಿಳೆಯರಿಗೆ ಸಮಾನತೆ, ನ್ಯಾಯವನ್ನು ಒದಗಿಸಿ ನಾರಿಶಕ್ತಿ, ಮಹಿಳೆಯರ ಅಸ್ಮಿತೆಯನ್ನು ಸಮಾಜಕ್ಕೆ ಪರಿಚಯಿಸಬೇಕು ಎಂದರು. ಕಾರ್ಯಕ್ರಮದ ಪ್ರಮುಖ ಉಪನ್ಯಾಸಕಿಯಾದ, ಸಂತ ಆಲೋಶಿಯಸ್ ಕಾಲೇಜಿನ ಮಾಜಿ ಉಪಪ್ರಾಂಶುಪಾಲರು ಹಾಗೂ ಆಪ್ತ ಸಮಾಲೋಚಕಿಯಾದ ಡಾ. ಜೂಡಿ ಪಿಂಟೊ ಇವರು ಮಹಿಳಾ ದಿನಾಚರಣೆ ಇತಿಹಾಸ, ಹಿಂದಿನ ಮತ್ತು ಪ್ರಸ್ತುತ ಮಹಿಳೆಯರ ಸ್ಥಿತಿಗತಿ ಬಗ್ಗೆ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಡಾ. ಆನಿ ಡಿಂಪಲ್ ಕ್ಯಾಸ್ತೆಲಿನೊ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ವಿತಾಶಾ ರಿಯಾ ರೊಡ್ರಿಗಸ್, ಭಗಿನಿ ಸಿಲ್ವಿಯಾ ಸುವಾರಿಸ್ ಎ.ಸಿ. ಚಂದ್ರಿಕಾ ಮಲ್ಯ, ಫೆಲ್ಸಿ ಲೋಬೊ, ಪ್ರತಿಮಾ ಕ್ಲಾರಾ ಪ್ರಭು, ಪ್ಲಾವಿಯಾ ಆಲ್ಬುಕರ್ಕ್, ಎಸ್. ಜಯಶ್ರೀ ಶೆಣೈ, ಅಸುಂತಾ ಡಿಸೋಜ, ಡಾ. ಫ್ಲಾವಿಯಾ ಕ್ಯಾಸ್ತೆಲಿನೊ, ಲೀಡಿಯಾ ಡಿಕೋಸ್ತ, ಜ್ಯೂಲಿಯೆಟ್ ಫೆರ್ನಾಂಡಿಸ್, ಲವಿ ಗಂಜೀಮಠ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು.
ಅಕಾಡೆಮಿ ಸದಸ್ಯೆ ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕಿ ಸಪ್ನಾ ಮೇ. ಕ್ರಾಸ್ತಾ ಇವರು ವಂದಿಸಿದರು. ಮೆಲ್ವಿರಾ ರೊಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಕಾಡೆಮಿ ಸದಸ್ಯರಾದ ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೊ, ಸಮರ್ಥ್ ಭಟ್, ದಯಾನಂದ ಮಡ್ಕೇಕರ್, ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ. ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕವಿಗಳಿಗೆ ಹೂವು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.