ಬೈಕ್ ಮೇಲೆ ಮರದ ಕೊಂಬೆ ಮುರಿದುಬಿದ್ದು ಬ್ಯಾಂಕ್ ಉದ್ಯೋಗಿ ಮೃತ್ಯು

ಬೆಳ್ತಂಗಡಿ: ಸಂಚಾರದಲ್ಲಿದ್ದ ಬೈಕ್ ಮೇಲೆ ಮರದ ಕೊಂಬೆಯೊಂದು ಮುರಿದುಬಿದ್ದು ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಬೆಳ್ತಂಗಡಿಯ ಗೇರುಕಟ್ಟೆ ಜಾರಿಗೆಬೈಲು ಎಂಬಲ್ಲಿ ಮಾರ್ಚ್ 20ರಂದು ಗುರುವಾರ ರಾತ್ರಿಯ ವೇಳೆ ಸಂಭವಿಸಿದೆ. ಬೆಳಾಲು ಗ್ರಾಮದ ನಿವಾಸಿ 25ವರ್ಷ ಪ್ರಾಯದ ಪ್ರವೀಣ್ ಮೃತಪಟ್ಟ ಯುವಕ.
ಪ್ರವೀಣ್ ಮಂಗಳೂರಿನ ಖಾಸಗಿ ಬ್ಯಾಂಕ್ ಒಂದರಲ್ಲಿ ಲೋನ್ ಸೆಕ್ಷನ್ನಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಎಂದಿನಂತೆ ಕೆಲಸ ಮುಗಿದ ಬಳಿಕ ಬೈಕ್ನಲ್ಲಿ ಉಪ್ಪಿನಂಗಡಿ ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಮನೆಯತ್ತ ತೆರಳುತ್ತಿದ್ದರು. ಆದರೆ ಜಾರಿಗೆಬೈಲು ಎಂಬಲ್ಲಿ ಬರುತ್ತಿದ್ದಾಗ ರಸ್ತೆಬದಿಯ ಮರದ ಕೊಂಬೆಯೊಂದು ಏಕಾಏಕಿ ಮುರಿದು ಬಿದ್ದು ಅವರು ಸವಾರಿ ಮಾಡುತ್ತಿದ್ದ ಬೈಕ್ ಮೇಲೆಯೇ ಬಿದ್ದಿದೆ. ಪರಿಣಾಮ ಪ್ರವೀಣ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.