ಆಕ್ಷೇಪಣೆ ಸಲ್ಲಿಕೆಗೆ ಲಂಚ ಸ್ವೀಕಾರ – ಸಹಾಯಕ ಸರ್ಕಾರಿ ಅಭಿಯೋಜಕನ ಬಂಧನ

ಮರಳು ಸಾಗಣೆಯ ವಾಹನದ ಬಿಡುಗಡೆಗೆ ಸಂಬಂಧ ಪಟ್ಟಂತೆ ನ್ಯಾಯಾಲಯಕ್ಕೆ ಅರ್ಜಿದಾರರು ಸಲ್ಲಿಸಿದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಲಂಚ ಪಡೆದುಕೊಂಡ ಸಹಾಯಕ ಸರಕಾರಿ ಅಭಿಯೋಜಕ ಗಣಪತಿ ನಾಯಕ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಲಂಚ ಪಡೆದ ಆರೋಪಿ ವಕೀಲರಾದ ಗಣಪತಿ ನಾಯ್ಕ ಉಡುಪಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದರು. ದೂರುದಾರ ವ್ಯಕ್ತಿಯು ತಮ್ಮ ಪರಿಚಯದ ವ್ಯಕ್ತಿಯೊಬ್ಬರ ವಾಹನದಲ್ಲಿ ಮುಲ್ಕಿಯಿಂದ ಉಡುಪಿಗೆ ಮರಳು ಸಾಗಿಸುತ್ತಿದ್ದರು. ಉಡುಪಿ ನಗರ ಪೊಲೀಸರು ಅಕ್ರಮವಾಗಿ ಮರಳು ಸಾಗಿಸುತ್ತಿರುವ ಆರೋಪದಲ್ಲಿ ನಿಟ್ಟೂರು ಬಳಿ ಆ ವಾಹನವನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿದ್ದರು.
ನ್ಯಾಯಾಲಯದಿಂದ ಈ ವಾಹನವನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಮುಂದಿನ ಕ್ರಮಗಳಿಗಾಗಿ ಅಧಿಕಾರ ಪತ್ರ ಹೊಂದಿದ್ದ ದೂರುದಾರರು ಪ್ರಧಾನ ಸಿವಿಲ್ ನ್ಯಾಯಾಲಯ ಜೆಎಂಎಫ್ ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ವಾಹನ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸರ್ಕಾರದ ಪರವಾಗಿ ಆಕ್ಷೇಪಣೆ ಸಲ್ಲಿಸಲು ಸಹಾಯಕ ಸರಕಾರಿ ಅಭಿಯೋಜಕ ಗಣಪತಿ ನಾಯಕ 2 ಸಾವಿರ ರೂಪಾಯಿ ನೀಡಲು ಬೇಡಿಕೆ ಇಟ್ಟಿದ್ದರು. ವಕೀಲರ ಈ ಬೇಡಿಕೆಯಿಂದ ಬೇಸತ್ತ ಅರ್ಜಿದಾರರು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಹಾಯಕ ಸರಕಾರಿ ಅಭಿಯೋಜಕ ಗಣಪತಿ ನಾಯಕ ಅವರು ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದರು. ನ್ಯಾಯಾಲಯ ಸಂಕೀರ್ಣದಲ್ಲಿರುವ ಎಪಿಪಿ ಅವರ ಕೊಠಡಿಯಲ್ಲಿ ಲೋಕಾಯುಕ್ತ ಪೊಲೀಸರು ಆರೋಪಿ ವಕೀಲರನ್ನು ಬಂಧಿಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಮಂಗಳೂರಿನ ಲೋಕಾಯುಕ್ತ ಪ್ರಭಾರ ಎಸ್ಪಿ ಕುಮಾರಚಂದ್ರ ಪ್ರಭಾರ ಡಿವೈಎಸ್ಪಿ ಮಂಜುನಾಥ ರಾಜೇಂದ್ರ ನಾಯಕ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.