April 27, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಆರ್‌ಟಿಐ ಕಾಯ್ದೆ ವಿಳಂಬ ಮಾಹಿತಿಗೆ ಶಿಕ್ಷೆ – ತಹಶೀಲ್ದಾರ್‌ಗೆ 25 ಸಾವಿರ ರೂಪಾಯಿ ದಂಡ

ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ 30 ದಿನದೊಳಗಾಗಿ ಮಾಹಿತಿ ಒದಗಿಸದೆ 240ಕ್ಕೂ ಹೆಚ್ಚು ದಿನ ವಿಳಂಬ ಮಾಡಿದ ತಹಶೀಲ್ದಾರ್‌ಗೆ 25 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರದ ತಹಶೀಲ್ದಾರ್ ಎಸ್. ಸಂತೋಷ್ ಅವರು ಈ ಶಿಕ್ಷೆಗೊಳಗಾದವರು. ಈ ದಂಡದ ಮೊತ್ತವನ್ನು ಒಂದೇ ಕಂತಿನಲ್ಲಿ ತಹಶೀಲ್ದಾರ್ ಅವರ ಮುಂದಿನ ಸಂಬಳದಲ್ಲೇ ಕಡಿತ ಮಾಡಿ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲಾಗುವುದು. ಜಮಾ ಮಾಡಿದ ರಶೀದಿಯೊಂದಿಗೆ ವರದಿ ಸಲ್ಲಿಸಲು ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್ ಅವರಿಗೆ ಆಯೋಗ ನಿರ್ದೇಶನ ನೀಡಿದೆ. ಈ ನಿರ್ದೇಶನವನ್ನು ಯಥಾವತ್ತಾಗಿ ಪಾಲಿಸಲು ವಿಫಲವಾದರೆ, ನಾಗರಿಕ ಸೇವಾ ನಿಯಮಗಳ ಪ್ರಕಾರ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಆಯೋಗ ತನ್ನ ನಿರ್ದೇಶನದಲ್ಲಿ ಸ್ಪಷ್ಟಪಡಿಸಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ 240ಕ್ಕೂ ಹೆಚ್ಚು ದಿನ ವಿಳಂಬ ಮಾಡಿರುವ ಪ್ರಕರಣವನ್ನು ಮಾಹಿತಿ ಆಯೋಗ ಗಂಭೀರವಾಗಿ ಪರಿಗಣಿಸಿದೆ. 30 ದಿನದೊಳಗಾಗಿ ಮಾಹಿತಿ ಒದಗಿಸದೆ ಇರುವುದೇ ದೊಡ್ಡ ತಪ್ಪು. ಅದು ಬಿಟ್ಟು ಮತ್ತಷ್ಟು ವಿಳಂಬ ಮಾಡಿರುವುದು ಸಮರ್ಥನೀಯವಲ್ಲ ಎಂದು ಆಯೋಗ ಹೇಳಿದೆ.

ಅರ್ಜಿದಾರರಾದ ಎಲ್.ಎಂ. ಚಂದ್ರು ಅವರು ಅನುಭವಿಸುವ ಯಾತನೆ ಮತ್ತು ಮಾನಸಿಕ ನೋವು ಹಾಗೂ ಖರ್ಚಿಗೆ 10 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆಯೋಗ ಆದೇಶ ನೀಡಿದೆ. ಈ ಪರಿಹಾರದ ಮೊತ್ತವನ್ನು 15 ದಿನದೊಳಗಾಗಿ ರಾಷ್ಟ್ರೀಕೃತ ಬ್ಯಾಂಕಿನಿಂದ ಕ್ರಾಸ್ ಮಾಡಿದ ಡಿಮ್ಯಾಂಡ್ ಡ್ರಾಫ್ಟ್‌ ಪಡೆದು ಮೇಲ್ಮನವಿದಾರರಿಗೆ ನೋಂದಾಯಿತ ಅಂಚೆ ಸ್ವೀಕೃತಿ ಮೂಲಕ ಕಳುಹಿಸಿಕೊಡಬೇಕು ಎಂದು ಆರೋಪಿ ತಹಶೀಲ್ದಾರ್ ಎಸ್. ಸಂತೋಷ್ ಅವರಿಗೆ ಸೂಚಿಸಿದೆ.

ಮೇಲ್ಮನವಿದಾರರಿಗೆ ಮಾಹಿತಿ ಒದಗಿಸಿರುವ ಬಗ್ಗೆ ಆಯೋಗಕ್ಕೆ ಯಾವುದೇ ದಾಖಲೆಗಳನ್ನು ಸಲ್ಲಿಸದೆ ಸತತವಾಗಿ ವಿಚಾರಣೆಗೆ ಗೈರು ಹಾಜರಾಗಿ ಪ್ರಕರಣದ ಶೀಘ್ರ ವಿಲೇವಾರಿಗೆ ಅಡ್ಡಿ ಪಡಿಸುತ್ತಿರುವುದಕ್ಕಾಗಿ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಏಕೆ ಕ್ರಮಕ್ಕೆ ಶಿಫಾರಸ್ಸು ಮಾಡಬಾರದು ಎಂಬುದಕ್ಕೆ ಕಾರಣ ಕೇಳಿ ಲಿಖಿತ ಉತ್ತರವನ್ನು ಮುಂದಿನ ವಿಚಾರಣೆ ದಿನದಂದು ಸಲ್ಲಿಸಬೇಕು ಎಂದು ತಹಶೀಲ್ದಾರ್ ಸಂತೋಷ್ ಅವರಿಗೆ ಆಯೋಗ ನಿರ್ದೇಶನ ನೀಡಿದೆ.

You may also like

News

‘ಪಿದಾಯಿ’ ತುಳು ಚಿತ್ರ ಮೇ 9ಕ್ಕೆ ಬೆಳ್ಳಿತೆರೆಗೆ

ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ರವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ
News

ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ MCC ಬ್ಯಾಂಕ್ ವತಿಯಿಂದ ಗೌರವ ನಮನ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ MCC ಬ್ಯಾಂಕ್ ಇದರ ಆಡಳಿತ ಕಛೇರಿಯಲ್ಲಿ ಕಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಎಪ್ರಿಲ್ 24ರಂದು

You cannot copy content of this page