ಸರ್ಕಾರಿ ನೌಕರ 48 ಗಂಟೆಗೂ ಹೆಚ್ಚು ಕಾಲ ಬಂಧನದಲ್ಲಿದ್ದರೆ ಸೇವೆಯಿಂದ ತಂತಾನೇ ಅಮಾನತು- ಹೈಕೋರ್ಟ್

ರಾಜ್ಯ ಸರ್ಕಾರಿ ನೌಕರನೊಬ್ಬ 48 ಗಂಟೆಗಳಿಗೂ ಹೆಚ್ಚು ಕಾಲ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಕಾಯಿದೆಯ ಅಡಿಯಲ್ಲಿ ಬಂಧನದಲ್ಲಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆಯಾದರೆ ಆತನನ್ನು ಸೇವೆಯಿಂದ ತಂತಾನೇ ಅಮಾನತುಗೊಂಡಿರುತ್ತಾನೆ. ಈ ಹಿನ್ನಲೆಯಲ್ಲಿ ಸಕ್ಷಮ ಪ್ರಾಧಿಕಾರ ಅಮಾನತು ರದ್ದುಗೊಳಿಸಿ ಮುಂದಿನ ಔಪಚಾರಿಕ ಆದೇಶ ಹೊರಡಿಸುವ ತನಕ ಆತನ ಅಮಾನತು ಮುಂದುವರೆಯುತ್ತದೆ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಆಡಳಿತ ನ್ಯಾಯಾಧಿಕರಣ (ಕಎಟಿ) ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮ ಪಂಚಾಯ್ತಿ ಪಿಡಿಓ ಡಿ.ಎಂ. ಪದ್ಮನಾಭ ಎಂಬುವರು ಹೈಕೋರ್ಟ್ ಗೆ ಅರ್ಜಿಯಲ್ಲಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ಸಿ.ಎಂ. ಜೋಶಿ ಅವರ ವಿಭಾಗೀಯ ಪೀಠವು ಇಂತಹ ಅರ್ಜಿಯನ್ನು ವಜಾಗೊಳಿಸಿದೆ.
ಸರ್ಕಾರಿ ನೌಕರ ಬಂಧನಕ್ಕೆ ಒಳಗಾಗಿದ್ದ ನಂತರ, ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗೆ ಬಂದ ಮೇಲೆ ನೇರ ಕಚೇರಿಗೆ ಹೋಗಬಹುದೇ ಇಲ್ಲವೇ ಎಂಬುದನ್ನು 2015ರ ಸರ್ಕಾರಿ ಸುತ್ತೋಲೆಯ ಪ್ರಕಾರ ಸಕ್ಷಮ ಪ್ರಾಧಿಕಾರ ನಿರ್ಧರಿಸಬೇಕು. ಅಂತಹ ಸರ್ಕಾರಿ ಅಧಿಕಾರಿಯ ಅಮಾನತು ಆದೇಶವನ್ನು ರದ್ದುಪಡಿಸಬೇಕೋ, ಬೇಡವೋ ಎಂಬ ಬಗ್ಗೆಯೂ ಪ್ರಾಧಿಕಾರವೇ ಅಂತಿಮ ನಿರ್ಣಯ ಕೈಗೊಳ್ಳಬೇಕು ಎಂದು ಹೇಳಿತು.
ಇನ್ನು ಕರ್ನಾಟಕ ನಾಗರೀಕ ನಿಯಮಗಳು 1957ರ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 10 (2) (ಎ) ನಿಯಮಗಳ ಪ್ರಕಾರ ಸರ್ಕಾರಿ ನೌಕರ 48 ಗಂಟೆಗಳಿಗೂ ಹೆಚ್ಚುಕಾಲ ಬಂಧನದಲ್ಲಿದ್ದರೆ ಸೇವೆಯಿಂದ ತಂತಾನೆ ಅಮಾನತುಗೊಳ್ಳುತ್ತಾನೆ ಎಂಬುದಾಗಿ ತಿಳಿಸಿದೆ.