ಮಕ್ಕಳ ಸೃಜನಾತ್ಮಕ ಕನಸುಗಳಿಗೆ ರೆಕ್ಕೆ ಹಚ್ಚಿದ ಏಮಾಜೆ ಕಿರಿಯ ಪ್ರಾಥಮಿಕ ಶಾಲಾ ಚಿಣ್ಣರ ಬೇಸಿಗೆ ಶಿಬಿರ – 2025

ಮಕ್ಕಳ ಸೃಜನಾತ್ಮಕ ಕನಸುಗಳಿಗೆ ರೆಕ್ಕೆಯನ್ನು ಹಚ್ಚುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ 5 ದಿನದ ಚಿಣ್ಣರ ಬೇಸಿಗೆ ಶಿಬಿರ – 2025 ಆಯೋಜಿಸಲಾಗಿತ್ತು. ಪ್ರಾಕೃತಿಕ ಸೊಬಗಿನೊಂದಿಗೆ ಔಷಧೀಯ ಗಿಡಮೂಲಿಕೆಗಳ ಪರಿಚಯವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಈಶಾನ್ಯ ವಿಹಾರ, ಮಾಯಾಲೋಕದ ಕೌತುಕಗಳನ್ನು ಅರಿಯುವ ನಿಟ್ಟಿನಲ್ಲಿ ಜಾದೂ ಪ್ರದರ್ಶನ, ವಿಜ್ಞಾನದ ವಿಸ್ಮಯಗಳನ್ನು ತಿಳಿದುಕೊಳ್ಳುವ ಸಲುವಾಗಿ ವಿಜ್ಞಾನ ವಿಸ್ಮಯ, ದೇಸಿ ಕಲೆಗಳನ್ನು ಕರಗತಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಕಲಾತ್ಮಕ ಕಲೆ, ಕರಕುಶಲತೆಯನ್ನು ಪ್ರದರ್ಶಿಸಲು ಬಣ್ಣದ ಚಿತ್ತಾರ ಹೀಗೆ ವಿಭಿನ್ನ ನೆಲೆಗಟ್ಟಿನಲ್ಲಿ 5 ದಿನಗಳಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳ ಕಲಾಭಿವ್ಯಕ್ತಿಗಾಗಿ ಬೇಸಿಗೆ ಶಿಬಿರವನ್ನು ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಶಾಲಾ ಅವಶ್ಯಕತೆಯನ್ನು ಪೂರೈಸುವ ಸಲುವಾಗಿ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗುವಂತೆ ಧರ್ಮದರ್ಶಿಗಳಾದ ಮನೋಜ್ ಕಟ್ಟೆಮಾರುರವರು ಸ್ಮಾರ್ಟ್ ಟಿವಿಯನ್ನು ಶಾಲೆಗೆ ಹಸ್ತಾಂತರಿಸಿದರು. ಬೇಸಿಗೆ ಶಿಬಿರದ ಯಶಸ್ವಿಗಾಗಿ ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಬ್ಯಾಂಕ್ ಅಧಿಕಾರಿ ಜಯಲಕ್ಷ್ಮಿ ಈಶ್ವರ ಭಟ್, ಕ್ಷೇತ್ರ ವಿಶೇಷ ಸಂಪನ್ಮೂಲ ಶಿಕ್ಷಕಿ ಸುರೇಖಾ, ಮಾಯಾಮಂಜರಿ ಆರ್ಟ್ಸ್ ವಿಟ್ಲ, ಕೆದಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ನಿತ್ಯಾನಂದ, ಪಿ.ಎಂ. ಶ್ರೀ ಪ್ರೌಢಶಾಲೆ ಸುರಿಬೈಲು ಶಾಲೆಯ ಸಹಶಿಕ್ಷಕಿ ಸ್ವಪ್ನ, ಬಾಲಕೃಷ್ಣ ಏಮಾಜೆ ಮೊದಲಾದವರು ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ ಈಶ್ವರ ಭಟ್ ಈಶಾನ್ಯ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮಲ್ಲಿಕಾ ಗಣೇಶ ಆಚಾರ್ಯ, ಉಪಾಧ್ಯಕ್ಷ ಪ್ರಸಾದ್ ಆಚಾರ್ಯ, ಧರ್ಮದರ್ಶಿಗಳಾದ ಮನೋಜ್ ಕಟ್ಟೆಮಾರು, ಚಿನ್ನಾ ಕಲ್ಲಡ್ಕ, ಉದ್ಯಮಿ ಈಶ್ವರ್ ಪೂಜಾರಿ, ಶ್ರೀಧರ್ ಮುಜಲ ಮೊದಲಾದವರು ಉಪಸ್ಥಿತರಿದ್ದು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಚಿಣ್ಣರ ಬೇಸಿಗೆಯ ಪ್ರತಿದಿನದ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳ ಸೃಜನಾತ್ಮಕತೆ ಹಾಗೂ ವ್ಯಕ್ತಿತ್ವ ವಿಕಸನಕ್ಕಾಗಿ ಆಯೋಜಿಸಲಾದ ಶಿಬಿರದಲ್ಲಿ ಎಲ್ಲಾ ಶಿಬಿರಾರ್ಥಿಗಳು ಸಂಭ್ರಮದಿಂದ ಭಾಗವಹಿಸಿದರು. ಕಾರ್ಯಕ್ರಮದ ಶಿಸ್ತುಬದ್ಧ ಯಶಸ್ವಿಗೆ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಜೊತೆ ಶಾಲಾ ಸಹ ಶಿಕ್ಷಕ ಉದಯಚಂದ್ರ, ಶಿಕ್ಷಕಿ ಅಕ್ಷತಾ ಮತ್ತು ದೀಕ್ಷಾ ಸಹಕರಿಸಿದರು.