ಕ್ರೈಸ್ತ ಶಿಕ್ಷಕರಿಗೆ ಎಸ್.ಎಸ್.ಎಲ್.ಸಿ. ಮೌಲ್ಯಮಾಪನದಿಂದ ವಿನಾಯತಿ

ಕಥೊಲಿಕ್ ಸಭಾ ವತಿಯಿಂದ ಉಸ್ತುವಾರಿ ಸಚಿವರಿಗೆ ಹಾಗೂ ಸರಕಾರಕ್ಕೆ ಧನ್ಯವಾದ ಸಮರ್ಪಣೆ
ಮಂಗಳೂರು ಹಾಗೂ ಉಡುಪಿ ಧರ್ಮಕ್ಷೇತ್ರಗಳಲ್ಲಿ ಅತೀ ಹೆಚ್ಚು ಕ್ರೈಸ್ತ ಶಿಕ್ಷಕರು ಇರುವುದರಿಂದ ಈ ಎರಡು ಜಿಲ್ಲೆಗಳ ಕ್ರೈಸ್ತ ಶಿಕ್ಷಕರಿಗೆ ಶುಭ ಗುರುವಾರ, ಶುಭ ಶುಕ್ರವಾರ ಹಾಗೂ ಈಸ್ಟರ್ ಪೂರ್ವ ದಿನಗಳಂದು [ಏಪ್ರಿಲ್ 17, 18 ಹಾಗೂ 19ರಂದು] ಎಸ್.ಎಸ್.ಎಲ್.ಸಿ. ಮೌಲ್ಯಮಾಪನದಿಂದ ವಿನಾಯತಿ ನೀಡಲು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ವತಿಯಿಂದ ಸರಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಮುಖಾಂತರ ಮನವಿ ಮಾಡಲಾಗಿತ್ತು. ಮನವಿಗೆ ತಕ್ಷಣ ಸ್ಪಂದಿಸಿದ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಈ ಬಗ್ಗೆ ಸರಕಾರದ ಗಮನ ಸೆಳೆದಿದ್ದರು. ಅದರಂತೆ ಮೇಲೆ ತಿಳಿಸಿದ ಮೂರೂ ದಿನಗಳಂದು ಕ್ರೈಸ್ತ ಶಿಕ್ಷಕರಿಗೆ ಮೌಲ್ಯಮಾಪನದಿಂದ ವಿನಾಯಿತಿ ನೀಡಲಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಸನ್ಮಾನ್ಯ ಯು.ಟಿ. ಖಾದರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹತ್ತನೇ ತರಗತಿಯ ಮೌಲ್ಯಮಾಪವನ್ನು ಈ ಬಾರಿ ಏಪ್ರಿಲ್ 15ರಿಂದ 10 ದಿನಗಳ ಕಾಲ ನಡೆಸುವುದು ಕಥೊಲಿಕ ಸಮುದಾಯಕ್ಕೆ ವ್ಯಾಪಕ ಬೇಸರಕ್ಕೆ ಕಾರಣವಾಗಿತ್ತು. ಈ ವಾರವು ಕ್ರೈಸ್ತ ಸಮುದಾಯಕ್ಕೆ ಅತ್ಯಂತ ಪವಿತ್ರ ವಾರವಾಗಿದೆ. ತಪಸ್ಸು ಕಾಲದ ಕಟ್ಟ ಕಡೆಯ ವಾರದ ಶುಭ ಗುರುವಾರದಂದು ಏಸುಕ್ರಿಸ್ತರ ಭೋಜನ ಹಾಗೂ ಶುಕ್ರವಾರದಂದು (ಗುಡ್ ಫ್ರೈಡೆ) ಏಸುಕ್ರಿಸ್ತರು ಶಿಲುಬೆಯಲ್ಲಿ ನಿಧನ ಹೊಂದಿದ ದಿನವಾಗಿದೆ. ಶನಿವಾರ ಸಾಯಂಕಾಲದಂದೇ ಪ್ರಪಂಚದಾದ್ಯಂತ ಈಸ್ಟರ್ ಹಬ್ಬವನ್ನು ಆಚರಿಸಲಾಗುತ್ತದೆ. ಹೀಗಿರುವಾಗ ಕಳೆದ ಏಳುವರೆ ದಶಕಗಳಿಂದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಯಾವತ್ತೂ ಶಿಕ್ಷಕರಿಗೆ ಶುಭವಾರದಂದು ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ ಕರೆದಿರಲಿಲ್ಲ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಕ್ರೈಸ್ತ ಶಿಕ್ಷಕರು ಇರುವುದರಿಂದಾಗಿ ಮೌಲ್ಯಮಾಪನಕ್ಕೆ ಹೋದರೆ ಶುಭ ಗುರುವಾರ, ಗುಡ್ ಫ್ರೈಡೇ ಮತ್ತು ಈಸ್ಟರ್ ಹಬ್ಬವನ್ನು ಆಚರಿಸಲು ಅಸಾಧ್ಯಗಲಿದೆ. ಈ ದಿನಗಳಂದು ಅವರಿಗೆ ರಿಯಾಯತಿಯನ್ನು ಕೇಳಿಕೊಂಡು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರ ನೇತತ್ವದಲ್ಲಿ ನಿಯೋಗವು ತೆರಳಿ ಕ್ರೈಸ್ತ ಶಿಕ್ಷಕರಿಗೆ ರಜೆ ನೀಡಬೇಕೆಂದು ಕೇಳಿಕೊಂಡಿದ್ದರು. ಮನವಿಗೆ ಸ್ಪಂದಿಸಿ ಏಪ್ರಿಲ್ 17, 18 ಹಾಗೂ 19ರಂದು ಕ್ರೈಸ್ತ ಶಿಕ್ಷಕರಿಗೆ ಎಸ್.ಎಸ್.ಎಲ್.ಸಿ. ಮೌಲ್ಯಮಾಪನದಿಂದ ವಿನಾಯಿತಿಯನ್ನು ನೀಡಿದ ಸರಕಾರಕ್ಕೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಮಸ್ತ ಕ್ರೈಸ್ತ ಬಾಂಧವರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.