ದಯೆಯಿಂದಲೇ ಪರಸ್ಪರ ಉನ್ನತಿಗೇರಲು ಭಕ್ತಾಧಿಗಳಿಗೆ ಕರೆ ನೀಡಿದ ಫಾದರ್ ನವೀನ್ ಪ್ರಕಾಶ್ ಡಿಸೋಜ

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಈಸ್ಟರ್ ಹಬ್ಬ ಆಚರಣೆ
ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಚರ್ಚ್ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ, ಅತಿಥಿ ಧರ್ಮಗುರುಗಳಾದ ವಂದನೀಯ ಫಾದರ್ ಮ್ಯಾಕ್ಸಿಂ ಡಾಯಾಸ್ ಹಾಗೂ ವಂದನೀಯ ಫಾದರ್ ಲ್ಯಾನ್ಸಿ ಡಾಯಾಸ್ ನೇತೃತ್ವದಲ್ಲಿ ಈಸ್ಟರ್ ಹಬ್ಬದ ದಿವ್ಯ ಬಲಿ ಪೂಜೆ ನಡೆಯಿತು. ಯೇಸಕ್ರಿಸ್ತನ ಪುನರ್ ಜನ್ಮವನ್ನು ಸಾರುವ ಈಸ್ಟರ್ ಹಬ್ಬವನ್ನು ಬಹಳ ಭಕ್ತಿಯಿಂದ ಆಚರಿಸಲಾಯಿತು.
ಚರ್ಚ್ ಹಾಗೂ ಚರ್ಚ್ ವಠಾರದ ಎಲ್ಲಾ ವಿದ್ಯುತ್ ದೀಪಗಳನ್ನು ಆರಿಸಿ ವಿಶೇಷ ಪ್ರಾರ್ಥನಾ ವಿಧಿಯೊಂದಿಗೆ ಬಲಿ ಪೂಜೆಗಳು ಮತ್ತು ಜಗತ್ತಿಗೆ ಬೆಳಕಾದ ಕ್ರಿಸ್ತರ ಬೆಳಕು (ಬೆಂಕಿ) ಆಶೀರ್ವಚನ ಮಾಡುವ ಮೂಲಕ ಜೀವನದಲ್ಲಿ ನಾವೆಲ್ಲರೂ ಬೆಳಕಿನಲ್ಲಿ ನಡೆಯಬೇಕೆಂಬ ಸಂದೇಶ ಸಾರಲಾಯಿತು. ಆಶೀರ್ವದಿಸಿದ ಹೊಸ ಬೆಂಕಿಯಿಂದ ಈಸ್ಟರ್ ಕ್ಯಾಂಡಲನ್ನು ಹೊತ್ತಿಸಿ ಚರ್ಚ್ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ “ಇದು ಯೇಸಕ್ರಿಸ್ತರ ಜ್ಯೋತಿಯು” ಎಂದು ಉದ್ಗರಿಸಿದಾಗ ಎಲ್ಲಾ ಭಕ್ತಾದಿಗಳು “ದೇವರಿಗೆ ಮಹಿಮೆ ಸಲ್ಲಲ್ಲಿ” ಎಂದು ಹೇಳುತ್ತಾ, ಈಸ್ಟರ್ ಕ್ಯಾಂಡಲ್ ನಿಂದ ತಮ್ಮಲ್ಲಿ ಇರುವ ಮೇಣದ ಬತ್ತಿಯನ್ನು ಹೊತ್ತಿಸಿ ಚರ್ಚ್ ಒಳ ಪ್ರವೇಶಿಸಿದರು. ಈಸ್ಟರ್ ಕ್ಯಾಂಡಲನ್ನು ಚರ್ಚ್ ಧರ್ಮಗುರುಗಳು ಚರ್ಚ್ ನ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಿದರು.
ವಿವಿಧ ಸಂಸ್ಕಾರಗಳಿಗೆ ಬಳಸುವ ಪವಿತ್ರ ಜಲದ ಆಶೀರ್ವಚನ ನಡೆಸಿ ದೀಕ್ಷಾ ಸ್ನಾನದ ಪ್ರತಿಜ್ಞೆ ನೆರವೇರಿಸಲಾಯಿತು. ನೆರೆದ ಭಕ್ತಾದಿಗಳ ಮೇಲೆ ಪವಿತ್ರ ನೀರನ್ನು ಸಿಂಪಡಿಸಿ ಆಶೀರ್ವಾದಿಸಲಾಯಿತು.
ಬಲಿ ಪೂಜೆಯಲ್ಲಿ ಯೇಸುವಿನ ಪುನರುತ್ಥಾನದ ಸಂದೇಶವನ್ನು ಪ್ರವಚನ ಮೂಲಕ ವಿವರಿಸಿದ ಚರ್ಚ್ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ ಕ್ರೈಸ್ತ ವಿಶ್ವಾಸವು ನಮ್ಮೆಲ್ಲರ ಮರು ಹುಟ್ಟನ್ನು ದೃಢೀಕರಿಸುತ್ತದೆ. ನಮ್ಮೆಲ್ಲರ ಹೃದಯದಲ್ಲಿ ನಾವಿನ್ಯತೆ, ನಂಬಿಕೆ, ಆನಂದ ತುಂಬುವ ಪವಿತ್ರ ದಿನ. ಮರಣದ ಮೇಲೆ ಜೀವದ ವಿಜಯದ ಸಂಕೇತ. ಕತ್ತಲಿನ ಮೇಲೆ ಬೆಳಕಿನ ವಿಜಯದ ಶಾಶ್ವತ ಸಂಕೇತವಾಗಿ ಸೋಲಿನ ಮೇಲೆ ಗೆಲುವು, ಕರುಣೆ ಹಾಗೂ ತಿಳುವಳಿಕೆಯ ಮನೋಭಾವದಲ್ಲಿ ಒಂದಾಗಲು – ಈಸ್ಟರ್ ಹಬ್ಬವು ಅಹ್ವಾನ ನೀಡುತ್ತಿದೆ. ಮುರಿದ ಸಂಬಂಧಗಳನ್ನು ಸರಿಪಡಿಸಲು, ಸಮಾಜದಲ್ಲಿ ಶಾಂತಿಯನ್ನು ಪ್ರೇರೇಪಿಸಲು, ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚಲು, ಸಾಮರಸ್ಯವನ್ನು ಹುಡುಕಲು, ಸಹನೆ ವಿಶ್ವಾಸ ಮತ್ತು ಬದಲಾವಣೆಯ ಹೊಸ ಆರಂಭವು ಈಸ್ಟರ್ ನಿಂದ ಸಾಧ್ಯವಾಗಿದೆ. ದಯೆಯಿಂದಲೇ ಪರಸ್ಪರ ಉನ್ನತಿಗೇರಲು ಜನರಿಗೆ ಕರೆ ನೀಡಿದರು. ಸಮಾಜದಲ್ಲಿನ ಅನೀತಿ, ಕೆಡುಕು ಅನ್ಯಾಯ ಕಂಡು ನಿರಾಶೆಗೆ ಒಳಗಾಗದೆ, ನ್ಯಾಯ ಒದಗಿಸುವ ಭರವಸೆಯನ್ನು ಪುನರುತ್ಥಾನರಾದ ಯೇಸು ನಮಗೆ ನೀಡುತ್ತಿದ್ದಾರೆ. ಪ್ರಸ್ತುತ ಆಧುನಿಕ ಕಾಲಘಟ್ಟದಲ್ಲಿ ಜನತೆ – ನಿರಾಶೆ, ಅಂಜಿಕೆ ಹಾಗೂ ಅನಿಶ್ಚಿತತೆ ಎದುರಿಸುತ್ತಿರುವಾಗ ಈಸ್ಟರ್ ಹಬ್ಬ ಎಲ್ಲರ ಬಾಳಲ್ಲಿ ಹೊಸ ಭರವಸೆ, ಚೈತನ್ಯ ಹಾಗೂ ಧೈರ್ಯ ತುಂಬಲಿ ಎಂದು ಹರಸಿದರು.
ಬಲಿ ಪೂಜೆಯ ಬಳಿಕ ಧರ್ಮಗುರುಗಳು ಹಾಗೂ ನೆರೆದ ಭಕ್ತಾಧಿಗಳು ಈಸ್ಟರ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.