MLC ಐವನ್ ಡಿಸೋಜ ಹಾಗೂ ಕಥೊಲಿಕ್ ಸಭಾ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರಿಂದ ಬಿಷಪ್ಸ್ ಹೌಸ್ ನಲ್ಲಿ ಪೋಪ್ ರವರಿಗೆ ಅಂತಿಮ ನಮನ

ಕ್ರಿಶ್ಚಿಯನ್ನರ ಪರಮೋಚ್ಚ ಜಗದ್ಗುರು ಪೋಪ್ ಫ್ರಾನ್ಸಿಸ್ ರವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಇಂದು ಎಪ್ರಿಲ್ 21ರಂದು ಸೋಮವಾರ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ರವರು ಮಂಗಳೂರು ಧರ್ಮಕ್ಷೇತ್ರದ ಪರವಾಗಿ ಸಂತಾಪ ವ್ಯಕ್ತಪಡಿಸಿದರು.
ಕೊಡಿಯಾಲ್ ಬೈಲಿನಲ್ಲಿರುವ ಬಿಷಪ್ಸ್ ಹೌಸ್ಗೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹಾಗೂ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ತೆರಳಿ ಪೋಪ್ ರವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಅಂತಿಮ ನಮನವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಷಪ್ ಉಪಸ್ಥಿತರಿದ್ದು ಪ್ರಾರ್ಥನೆಯನ್ನು ಸಲ್ಲಿಸಿದರು.
ಹನ್ನೆರಡು ವರ್ಷಗಳ ಕಾಲ ಪೋಪ್ ಆಗಿ ಸೇವೆ ಸಲ್ಲಿಸಿ ಪ್ರಪಂಚದೆಡೆ ಶಾಂತಿಯ ಸಂದೇಶವನ್ನು ಸಾರಿದ ಪೋಪ್ ಪ್ರಾನ್ಸಿಸ್ ರವರು ಜಗತ್ತಿನ ರೋಮನ್ ಕ್ಯಾಥೋಲಿಕ್ ಸಮುದಾಯದ ಏಕತೆಗಾಗಿ ಮತ್ತು ಪ್ರೀತಿ ವಿಶ್ವಾಸದ ಮೂಲಕ ಪ್ರಪಂಚವನ್ನು ಗೆಲ್ಲಬಹುದು ಎಂದು ಸಾರಿದ ಸಂದೇಶವನ್ನು MLC ಐವನ್ ಡಿಸೋಜ ಸ್ಮರಿಸಿದರು.
ಅಂತಿಮ ನಮನ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರುಗಳಾದ ಮನುರಾಜ್ ವಿಕಾಸ್ ಶೆಟ್ಟಿ, ಸಿರಾಜ್ ಬಜ್ಪೆ, ಯೋಗೇಶ್ ನಾಯಕ್, ನಿಸಾರ್ ಬಜಪೆ, ಕಥೊಲಿಕ್ ಸಭಾ ಸಿಟಿ ವಲಯದ ಅಧ್ಯಕ್ಷ ಅರುಣ್ ಡಿಸೋಜ ಜೊತೆಗಿದ್ದರು.