ಕಾಶ್ಮೀರ ಭಯೋತ್ಪಾದಕ ದಾಳಿ – ರಾಜ್ಯ ದಾರಿಮಿ ಉಲಮಾ ಒಕ್ಕೂಟ ಖಂಡನೆ

ಕಾಶ್ಮೀರ ರಾಜ್ಯದ ಪಹಲ್ಗಾಂ ಪ್ರವಾಸಿ ತಾಣಕ್ಕೆ ಬೇಟಿ ನೀಡಿದ ನಾಗರಿಕರ ಮೇಲೆ ನಡೆದ ರಾಕ್ಷಸೀಯ ಭಯೋತ್ಪಾದಕ ದಾಳಿಯನ್ನು ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟ ಅತ್ಯುಗ್ರವಾಗಿ ಖಂಡಿಸುತ್ತಿದೆ. ನರ ರಾಕ್ಷಸ ಭಯೋತ್ಪಾದಕರ ಹುಟ್ಟಡಗಿಸಲು ಸರಕಾರಗಳು ಇಚ್ಚಾ ಶಕ್ತಿ ಪ್ರದರ್ಶಿಸ ಬೇಕೆಂದು ಒಕ್ಕೂಟ ಆಗ್ರಹಿಸುತ್ತಿದೆ.
ಪ್ರಜೆಗಳಿಗೆ ಸುರಕ್ಷತೆ ನೀಡ ಬೇಕಾದದ್ದು ಸರಕಾರಗಳ ಆದ್ಯ ಕರ್ತವ್ಯವಾಗಿದೆ.ಸುಮಾರು ಐನೂರರಷ್ಟು ಪ್ರವಾಸಿಗರಿದ್ದ ಜಾಗದಲ್ಲಿ ಪೋಲೀಸರ ಕಾವಲು ಇಲ್ಲದೇ ಇದ್ದದ್ದು ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆಯಾದರೂ ಈ ವಿಷಮ ಘಟ್ಟದಲ್ಲಿ ಪರಸ್ಪರ ಟೀಕಾ ಪ್ರಹಾರಗಳನ್ನು ಬದಿಗಿರಿಸಿ ಸರಕಾರದ ಜೊತೆ ಕೈ ಜೋಡಿಸ ಬೇಕಾಗಿದೆ ಎಂದು ಉಲಮಾ ಒಕ್ಕೂಟ ಅಭಿಪ್ರಾಯ ಪಟ್ಟಿದೆ.ಇದರ ಹಿಂದಿರುವ ಕ್ಷುದ್ರ ಶಕ್ತಿಯನ್ನು ಅತೀ ಶೀಘ್ರದಲ್ಲೇ ಪತ್ತೆ ಹಚ್ಚಿ ಅದರ ಮೂಲವನ್ನು ನಾಶ ಮಾಡಲು ಸರಕಾರ ಪಣತೊಡಬೇಕಿದೆ. ಆದರೆ ನಿರಪರಾಧಿಗಳು ಬಲಿಯಾಗದಂತೆ ಜಾಗೃತೆ ವಹಿಸುವುದೂ ಅಗತ್ಯವಾಗಿದೆ. ಅದೇ ವೇಳೆ ಭಯೋತ್ಪಾಕ ದಾಳಿಯನ್ನು ಮುಂದಿಟ್ಟು ದೇಶದ ಮುಸ್ಲಿಮರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿ ಶಾಂತಿ ಕದಡುವವರ ವಿರುದ್ದ ಕಾನೂನು ಕ್ರಮ ಕೈ ಗೊಳ್ಳುವುದು ಕೂಡಾ ಅಗತ್ಯ ಎಂದು ಉಲಮಾ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.