ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ನಾಗರಿಕರ ಕೊಲೆ ಮಾನವತೆಗೆ ಕಳಂಕ – ಮಂಗಳೂರು ಬಿಷಪ್ ಖಂಡನೆ

ಪ್ರವಾಸಕ್ಕಾಗಿ ಕಾಶ್ಮೀರಕ್ಕೆ ತೆರಳಿದ್ದ ಯಾವುದೇ ತಪ್ಪೆಸಗದ ಅಮಾಯಕ ನಾಗರಿಕರನ್ನು ಹತ್ಯೆ ಮಾಡಿದ ಉಗ್ರಗಾಮಿಗಳ ಕೃತ್ಯ ಅತ್ಯಂತ ಖಂಡನೀಯ. ಈ ಕೃತ್ಯವು ಎಲ್ಲರ ಹೃದಯ ಹಾಗೂ ಮನಸ್ಸನ್ನು ಕಲಕುವಂಥದ್ದು. ಇದೊಂದು ಹೇಯ ಕೃತ್ಯ. ಅಮಾಯಕರನ್ನು ಕೊಂದು ಅನೇಕ ಕುಟುಂಬಗಳನ್ನೇ ಅವರು ನಾಶ ಮಾಡಿದ್ದಾರೆ. ಇದನ್ನು ನಾನು ಖಡಾಖಂಡಿತವಾಗಿ ಖಂಡಿಸುತ್ತೇನೆ. ಭಾರತವು ಎಲ್ಲಾ ವರ್ಗದ ಜನರಿಗೆ ಸಹಬಾಳ್ವೆ ನಡೆಸಲು ಇರುವ ದೇಶ. ಕೆಲವೇ ಕೆಲವು ಭಯೋತ್ಪಾದಕರಿಂದ ದೇಶ ನಾಶವಾಗದು. ಪ್ರಾಣ ಕಳೆದುಕೊಂಡವರಿಗೆಲ್ಲರಿಗೂ ದೇವರು ಚಿರಶಾಂತಿ ನೀಡಲಿ. ಗಾಯಗೊಂಡವರು ಬೇಗನೆ ಗುಣಮುಖರಾಗಲಿ. ಅವರ ಮೇಲೆ ಏಕಾಏಕಿ ಗುಂಡಿಟ್ಟು ಕೊಂದಿರುವುದು ಮಾನವತೆಗೆ ಕಳಂಕ. ಮೃತರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ – ಎಂದು ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡನ್ಹಾರವರು ಖೇದ ವ್ಯಕ್ತಪಡಿಸಿದ್ದಾರೆ.
ರಜೆಯಲ್ಲಿ ಕುಟುಂಬಗಳು, ಮಹಿಳೆಯರು ಮತ್ತು ಮಕ್ಕಳ ಸಹಿತ ಕಾಶ್ಮೀರ ಪಹಲ್ಗಾಮ್ಗೆ ಪ್ರವಾಸ ತೆರಳಿದ್ದರು. ಅಲ್ಲಿ ಮುಖ್ಯವಾಗಿ ಪುರುಷರನ್ನೇ ಗುರಿಯಾಗಿಸಿ ಉಗ್ರರು 26 ಮಂದಿಯ ತಲೆಗೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇಂತಹ ಪಾಪಕೃತ್ಯ ಯಾವುದೇ ನಾಗರಿಕರು ಒಪ್ಪುವಂಥದ್ದಲ್ಲ. ಇಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಬೇಕು. ಭಯೋತ್ಪಾದನೆ ದಾಳಿ ಕ್ರೂರ ಅಪರಾಧ. ಇದಕ್ಕೆ ಯಾವುದೇ ಸಮರ್ಥನೆ ಇಲ್ಲ.
ಭಯೋತ್ಪಾದನೆಗೆ ಕಾರಣರಾದ ಯಾರನ್ನೂ ಬಿಡದೆ ಸರಕಾರ ಕ್ರಮ ಜರಗಿಸುವಂತೆ ಆಗ್ರಹಿಸುವುದಾಗಿ ಬಿಷಪ್ ತಿಳಿಸಿದ್ದಾರೆ.